
ಹುಬ್ಬಳ್ಳಿ: ಶಿವಮೊಗ್ಗ ಮತ್ತು ಬೀದರ್ನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಹಾಗೂ ಕೈ ದಾರ ತೆಗೆಸಿದ್ದನ್ನು ಖಂಡಿಸಿ ಎ.ಬಿ.ವಿ.ಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಬಿ.ವಿ.ಬಿ ಎಂಜಿನಿಯರಿಂಗ್ ಕಾಲೇಜಿನ ಎದುರು ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿರುವುದು ಅಕ್ಷಮ್ಯ. ಸ್ಪರ್ಧಾತ್ಮಕ ಪರೀಕ್ಷೆ ನ್ಯಾಯಸಮ್ಮತವಾಗಿ ನಡೆಯಲು ಕೆಲವು ನಿರ್ಬಂಧ ಅಗತ್ಯ ಹಾಗೂ ಅನಿವಾರ್ಯ. ಆದರೆ, ಯಾವುದೇ ಸೂಚನೆ, ಆದೇಶಗಳಿಲ್ಲದಿದ್ದರೂ ಅಧಿಕಾರಿಗಳು ಈ ರೀತಿ ಮಾಡಿದ್ದು ಸರಿಯಲ್ಲ. ಇಂಥ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಮಂಡಳಿ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು’ ಎಂದು ಆಗ್ರಹಿಸಿದರು.

j3tvkannada
ಇಪ್ಪತ್ತು ನಿಮಿಷ ವಾಹನಗಳ ಸಂಚಾರ ದಟ್ಟಣೆ ಉಂಟಾಗಿತ್ತು. ಸಾರ್ವಜನಿಕರು, ಪ್ರಯಾಣಿಕರು ತೀವ್ರ ಪರದಾಡಿದರು. ಪೃಥ್ವಿ ಕುಮಾರ, ಮೋನಿಶಾ ಗೌಡ, ಸಿದ್ದಾರ್ಥ ಕೋರಿ, ದಾನೇಶ ಕಿತ್ತೂರ, ಪ್ರಜ್ಞಾ ಕಶ್ಯಪ್, ಅಮೃತ ಕೋಳಿ, ವಿಕ್ರಮ ಜಿ, ಅನ್ನೋಲ ಕಲಬುರ್ಗಿ, ವಿನಾಯಕ ಉಪ್ಪಾರ, ಸುನಿಲ ಕೆ, ನಾಗರಾಜ ಬಿ, ತಿಲಕ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಯಜ್ಯೋಪವೀತ ಸಮಾಜದ ಒಕ್ಕೂಟದವರು ಸಂಘಟಿತರಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಸ್.ಎಸ್.ಕೆ ಸಮಾಜದ ಚಿಂತನ ಮಂಥನ ಸಮಿತಿಯ ಮುಖ್ಯಸ್ಥ ಹನುಮಂತ ಸಾ ನಿರಂಜನ ಆಗ್ರಹಿಸಿದ್ದಾರೆ.