
ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ (ಬೈಲಾ) ತಿದ್ದುಪಡಿ ಉದ್ದೇಶ ಹೊಂದಿರುವ ಏಪ್ರಿಲ್ 27ರ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆ ಅಲ್ಲದೇ ಅದರ ಸ್ಥಳವೂ ಚರ್ಚೆಗೆ ಗ್ರಾಸವಾಗಿದೆ.

j3tvkannada
ಬಳ್ಳಾರಿ ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರವಿರುವ ಸಂಡೂರು ತಾಲ್ಲೂಕಿನ ನಂದಿಹಳ್ಳಿಯಲ್ಲಿರುವ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಸರ್ವ ಸದಸ್ಯರ ವಿಶೇಷ ಸಭೆ ಆಯೋಜಿಸಲು ಮಾರ್ಚ್ 21ರಂದು ನಡೆದಿದ್ದ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೈಲಾ ತಿದ್ದುಪಡಿಯಂಥ ಪ್ರಮುಖ ತೀರ್ಮಾನಗಳು ಆಗುವ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆಯನ್ನು ಹೆಚ್ಚು ಜನ ಸೇರಬಹುದಾದ ಸ್ಥಳದಲ್ಲಿ ಮಾಡುವುದು ಬಿಟ್ಟು ಸಾರಿಗೆ, ಸೌಲಭ್ಯಗಳು ಹೆಚ್ಚಿಲ್ಲದ, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಬರಲು ಸಾಧ್ಯವಾಗದ ದೂರದ ಊರಿನಲ್ಲಿ ನಡೆಸುತ್ತಿರುವುದರ ಹಿಂದೆ ಗುಪ್ತ ಕಾರ್ಯಸೂಚಿ ಅಡಗಿದೆ ಎಂಬ ಆರೋಪಗಳಿವೆ.
ಮಹೇಶ ಜೋಶಿ ಅವರು ಪರಿಷತ್ತಿನ ಅಧ್ಯಕ್ಷರಾದ ಬಳಿಕ ಎರಡು ಬಾರಿ ಬೈಲಾ ತಿದ್ದುಪಡಿಯಾಗಿದೆ. ಮೊದಲನೇ ತಿದ್ದುಪಡಿಗೆ ಸಭೆಯು 2022ರ ಮೇ ತಿಂಗಳಲ್ಲಿ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ನಡೆದಿತ್ತು. ಎರಡನೇ ತಿದ್ದುಪಡಿಗೆ ಸಭೆಯು 2023ರ ಸಪ್ಟೆಂಬರ್ನಲ್ಲಿ ಹಾಸನ ಜಿಲ್ಲೆಯ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ನಡೆದಿತ್ತು.
ನಾನಿರುವವರೆಗೆ ಬೆಂಗಳೂರಲ್ಲಿ ಸಭೆ ಇಲ್ಲ .
ಯಾವ ಜಿಲ್ಲೆಯಲ್ಲಿ ಸಮ್ಮೇಳನ ಆಗುತ್ತದೋ, ಅಲ್ಲಿ ವಾರ್ಷಿಕ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಸಭೆ ಬೆಂಗಳೂರು ಕೇಂದ್ರಿತ ಆಗುವುದು ನಾನು ಒಪ್ಪಲ್ಲ. ನಾನಿರುವವರೆಗೆ ಬೆಂಗಳೂರಿನಲ್ಲಿ ಸಭೆ ಮಾಡಲ್ಲ. ಎಲ್ಲಿ ಸಾಧ್ಯವಿಲ್ಲವೋ, ಅಲ್ಲಿ ಸಾಧ್ಯವಾಗಿಸಬೇಕು ಎಂಬುದಷ್ಟೇ ನನ್ನ ಉದ್ದೇಶ. ಬರಬೇಕಾದವರು ಬರುತ್ತಾರೆ. ಬೆಂಗಳೂರಿನಲ್ಲೇ ಸಭೆ ನಡೆಯಬೇಕು ಎಂಬುದು ಕ್ಷುಲ್ಲಕ ದೃಷ್ಟಿಕೋನ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.