
ಕರ್ನಾಟಕ: ಅಹಮದಾಬಾದ್ ನಲ್ಲಿ ಮಂಗಳವಾರ ರಾಯಲ್ ಚಾಲೆಂಜರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಬೇಕಿರುವ ಫೈನಲ್ ರದ್ದಾದರೆ? ಹೀಗೊಂದು ಪ್ರಶ್ನೆ ಮೂಡುವುದು ಸಹಜವೇ. ಯಾಕೆಂದರೆ ಈ ಬಾರಿಯ ಐಪಿಎಲ್ ನಲ್ಲಿ ಕೆಲ ಪಂದ್ಯಗಳು ಮಳೆಯಿಂದಾಗಿ ಒಂದು ಎಸೆತವೂ ಕಾಣದೆ ರದ್ದಾದವು. ಇದೇ ಕಾರಣಕ್ಕೆ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳನ್ನು ಮುಲ್ಲನ್ ಪುರ ಮತ್ತು ಅಹಮದಾಬಾದ್ ನಲ್ಲಿ ನಿಗದಿಪಡಿಸಲಾಯಿತು. ಭಾನುವಾರ ಅಹಮದಾಬಾದ್ ನಲ್ಲೂ ಭಾರೀ ಮಳೆಯಾಗಿತ್ತು.

j3tvkannada
ಆದರೆ ಅದೃಷ್ಟವಶಾತ್ ಪಂದ್ಯ ನಡೆದು ಫಲಿತಾಂಶವೂ ಬಂತು. ಇದೀಗ ಅದೇ ಮೈದಾನದಲ್ಲಿ ಫೈನಲ್ ನಡೆಯಬೇಕಿದೆ. ಒಂದು ವೇಳೆ ಬಂದರೆ ಯಾರಿಗೆ ಲಾಭ? ಯಾರಿಗೆ ತೊಂದರೆ? ಕ್ರಿಕೆಟ್ ಪ್ರೇಮಿಗಳು ಕಳೆದ ಒಂದೂವರೆ ತಿಂಗಳಿಂದ ಕಾಯುತ್ತಿರುವ ದಿನಕ್ಕಾಗಿ ಇದೀಗ ಕ್ಷಣಗಣನೆ ಆರಂಭವಾಗಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜೂನ್ 3 ಮಂಗಳವಾರದಂದು ನಡೆಯುವ ಐಪಿಎಲ್ 2025 ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಹೊತ್ತಲ್ಲಿ ಮತ್ತೊಂದು ಭಯ ಶುರುವಾಗಿದೆ. ಅದು ಮಳೆಯದ್ದು.
ಹೌದು ಮಳೆಯಿಂದ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೇ ಹೈದರಾಬಾದ್ ಮತ್ತು ಕೋಲ್ಕತಾಗಳಲ್ಲಿ ನಿಗದಿಯಾಗಿದ್ದ ಪಂದ್ಯವನ್ನು ಮುಲ್ಲನ್ ಪುರ ಮತ್ತು ಅಹಮದಾಬಾದ್ ಗಳಿಗೆ ಸ್ಥಳಾಂತರ ಮಾಡಲಾಯಿತು. ಈ ಎರಡು ನಗರಗಳಲ್ಲಿ ಮಳೆ ಬಾಧಿಸಲಿಕ್ಕಿಲ್ಲ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಭಾನುವಾರ ಸಂಜೆ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಇನ್ನೇನು ಟಾಸ್ ಮುಗಿದು ಮೈದಾನಕ್ಕೆ ಇಳಿಯಬೇಕು ಎಂದು ಅಂದುಕೊಳ್ಳುವ ಹೊತ್ತಿಗೇ ಧೋ ಎಂದು ಸುರಿದ ಮಳೆ ಬಹಳ ಹೊತ್ತು ಬಿಟ್ಟಿರಲಿಲ್ಲ.

j3tvkannada
ಕೊನೆಗೆ ಮಳೆ ಬಿಟ್ಟು ಪಂದ್ಯ ಪ್ರಾರಂಭವಾದಾಗ ರಾತ್ರಿ 9.45 ಕಳೆದಿತ್ತು. ಆ ಮೇಲೆ ಮಳೆ ಬಾರದ್ದರಿಂದ ಪಂದ್ಯ ಸರಾಗವಾಗಿ ನಡೆಯಿತೆನ್ನಿ. ಇದೀಗ ಚಿಂತೆ ಶುರುವಾಗಿರುವುದು ಒಂದು ವೇಳೆ ಅದೇ ರೀತಿ ಮಳೆ ಬಂದರೆ ಏನು ಕತೆ ಎಂದು. ಹೌದು ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಒಂದು ವೇಳೆ ಜೂನ್ 3ರಂದು ಪಂದ್ಯದ ವೇಳೆ ಮಳೆ ಅಥವಾ ಬೇರಾವುದೇ ಕಾರಣಕ್ಕೆ ಆಡಲು ಸಾಧ್ಯವಾಗದಿದ್ದರೆ ಮೀಸಲು ದಿನವಾದ ಜೂನ್ 4 ಬುಧವಾರದಂದು ಆಡಿಸಲಾಗುತ್ತದೆ.
ಒಂದು ವೇಳೆ ಮೀಸಲು ದಿನದಾಟವೂ ರದ್ದಾದರೆ ಆಗ ಅಂಕಪಟ್ಟಿಯ ಆಧಾರದ ಮೇಲೆ ಚಾಂಪಿಯನ್ ಅನ್ನು ನಿರ್ಧರಿಸಲಾಗುತ್ತದೆ. ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಹೀಗಾದರೆ ಅದು ಆರ್ ಸಿಬಿಗೆ ಕಂಟಕ ಮತ್ತು ಪಂಜಾಬ್ ಕಿಂಗ್ಸ್ ಗೆ ಲಾಭ. ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಎರಡೂ 19 ಅಂಕಗಳನ್ನು ಗಳಿಸಿವೆ.
ಆದರೆ ರನ್ ರೇಟ್ ಆಧಾರದ ಮೇಲೆ 0.372 ರನ್ ರೇಟ್ ಹೊಂದಿದ ಪಂಜಾಬ್ ಕಿಂಗ್ಸ್ ಮೊದಲನೇ ಸ್ಥಾನದಲ್ಲಿದ್ದರೆ, 0.301 ರನ್ ರೇಟ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ನಿಯಮದ ಪ್ರಕಾರ ಅಧಿಕ ರನ್ ರೇಟ್ ಹೊಂದಿರುವ ಪಂಜಾಬ್ ಕಿಂಗ್ಸ್ ಅನ್ನು ಚಾಂಪಿಯನ್ ಆಗಿಯೂ, ದ್ವಿತೀಯ ಸ್ಥಾನಿ ಆರ್. ಸಿ.ಬಿಯನ್ನು ರನ್ನರ್ ಅಪ್ ಎಂದು ಘೋಷಿಸ ಬೇಕಾಗುತ್ತದೆ. ಇದೇ ಆರ್ ಸಿಬಿಗೆ ಸಮಸ್ಯೆಯಾಗಿರುವುದು. ಹೀಗಾಗಿ ಮಳೆ ಬಂದರೆ ಪಂಜಾಬ್ ಕಿಂಗ್ಸ್ ಗೆ ಲಾಭ. ನಿರಾಯಾಸವಾಗಿ ಕಪ್ ಅನ್ನು ಮನೆಗೆ ಒಯ್ಯುತ್ತದೆ ಮತ್ತು ಆರ್ ಸಿಬಿ ಇಷ್ಟೆಲ್ಲಾ ಶ್ರಮಪಟ್ಟಿದ್ದು ವ್ಯರ್ಥವಾಗುತ್ತದೆ.

j3tvkannada
ಹವಾಮಾನ ಇಲಾಖೆಯ ವರದಿಯ ಪ್ರಕಾರ ಮಂಗಳವಾರ ಅಹಮದಾಬಾದ್ ನಲ್ಲ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 34 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದರೆ ಭಾಗಶಃ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದೆ. ಮಳೆಯಿಂದಾಗಿ ಪಂದ್ಯಕ್ಕೆ ದೊಡ್ಡ ಮಟ್ಟಿನ ಸಮಸ್ಯೆ ಆಗುವ ಸಾಧ್ಯತೆ ಇಲ್ಲ. ಮಳೆ ಆದರೂ ಹೆಚ್ಚುವರಿ ಸಮಯ ಮತ್ತು ಮೀಸಲು ದಿನ ಇರುವುದರಿಂದ ಪಂದ್ಯಕ್ಕೆ ತೊಂದರೆ ಆಗಲಾರದು ಎಂಬುದು ಹೇಳಲಾಗುತ್ತಿದೆ. ಈ ಸೀಸನ್ ನಲ್ಲಿ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡ ಎರಡು ಲೀಗ್ ಮತ್ತು ಒಂದು ಕ್ವಾಲಿಫೈಯರ್ ಪಂದ್ಯ ಹೀಗೆ ಒಟ್ಟು 3 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ.
ಅದರಲ್ಲಿ 2 ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು 1 ಬಾರಿ ಪಂಜಾಬ್ ಕಿಂಗ್ಸ್ ಜಯಗಳಿಸಿವೆ. ಇದೀಗ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ನೇರವಾಗಿ ಫೈನಲ್ ಪ್ರವೇಶಿಸಿರುವ ಆರ್ ಸಿಬಿ ಗೆಲ್ಲುವ ವಿಶ್ವಾಸದಲ್ಲಿದೆ. ಅದೇ ರೀತಿ ಕ್ವಾಲಿಫೈಯರ್ 1ರಲ್ಲಿ ಸೋತರೂ ಕ್ವಾಲಿಫೈಯರ್ 2ರಲ್ಲಿ ಬಲಿಷ್ಠ ಮುಂಬೈ ವಿರುದ್ಧ ಜಯ ಗಳಿಸಿರುವ ಪಂಜಾಬ್ ಕಿಂಗ್ಸ್ ಆತ್ಮ ವಿಶ್ವಾಸದಿಂದ ಪುಟಿಯುತ್ತಿದೆ. ಹೀಗಾಗಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಹೀಗಾಗಿ ಪಂದ್ಯ ನಿರಾತಂಕವಾಗಿ ನಡೆದು ರಜತ್ ಪಾಟೀದಾರ್ ಪಡೆ ಗೆಲ್ಲಲಿ ಎಂಬುದು ಆರ್ ಸಿಬಿ ಅಭಿಮಾನಿಗಳ ಹಾರೈಕೆಯಾಗಿದೆ.