
ಕೊಪ್ಪಳ: ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಹಳೆಯ ಆಸ್ತಿ ವಿವಾದ ಹಿನ್ನಲೆಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಚನ್ನಪ್ಪ ನಾರಿನಾಳ (35) ಎಂಬ ಯುವಕನನ್ನು ಸಂಬಂಧಿಕರೇ ಮಧ್ಯರಾತ್ರಿಯಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

j3tvkannada
ಈ ಘಟನೆ ತಾವರಗೇರಾ ಪಟ್ಟಣದ ಸಿಂಧನೂರು ಸರ್ಕಲ್ ಬಳಿ ನಡೆದಿದ್ದು, ಆ ಪ್ರದೇಶದ ಜನರಲ್ಲಿ ಆತಂಕ ಉಂಟು ಮಾಡಿದೆ. ಕೊಲೆ ನಡೆದು ಕೇವಲ ಎರಡೇ ನಿಮಿಷಗಳಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಅದರ ಆಧಾರದ ಮೇಲೆ ತನಿಖೆ ಆರಂಭಿಸಿದ್ದರು.
ಚನ್ನಪ್ಪ ನಾರಿನಾಳ ಹಾಗೂ ಆರೋಪಿಗಳಾದ ರವಿ ನಾರಿನಾಳ ನಡುವೆ ಹಲವು ವರ್ಷಗಳಿಂದ ಆಸ್ತಿ ಕಲಹವಿತ್ತು. ಈ ಹಿಂದೆ ಇದೇ ಕಾರಣಕ್ಕೆ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಕೊಲೆಗೂ ಮುನ್ನ ಆರೋಪಿಗಳ ಪೈಕಿ ನಾಗರಾಜ ನಾರಿನಾಳನು ವಾಟ್ಸಪ್ ಸ್ಟೇಟಸ್ನಲ್ಲಿ ಮಚ್ಚುಗಳ ಪೋಟೋ ಹಾಕಿರುವುದು ಇದೀಗ ಬೆಳಕಿಗೆ ಬಂದಿದೆ. ಪೂರ್ವಯೋಜಿತವಾಗಿ ಪ್ಲಾನ್ ಮಾಡಿಕೊಂಡು, ಸಂಬಂಧಿಕರೇ ಕೊಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ತಾವರಗೇರಾ ಪೊಲೀಸರು ಈಗಾಗಲೇ 8 ಮಂದಿಯನ್ನು ಬಂಧಿಸಿದ್ದಾರೆ. ಒಟ್ಟು 10 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಅವರಿಂದ ಕೃತ್ಯಕ್ಕೆ ಬಳಸಲಾದ ಮಚ್ಚುಗಳು ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಸಂಬಂಧ ತಾವರಗೇರಾ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.