
ಚಾಮರಾಜನಗರ: ಶಿಕ್ಷಕರ ಒಳ ಜಗಳ ಹಾಗೂ ಸರಿಯಾಗಿ ಪಾಠ ಪ್ರವಚನ ನಡೆಯದ ಆರೋಪದ ಹಿನ್ನೆಲೆ ಚಾಮರಾಜನಗರ ತಾಲೂಕಿನ ಮರಿಯಾಲ ಸ.ಹಿ.ಪ್ರಾ.ಶಾಲೆಯಲ್ಲಿ ಯಾವುದೇ ಅಡ್ಮಿಷನ್ ಆಗಿಲ್ಲ. ಇದರಿಂದ ಇಡೀ ಶಾಲೆ ಖಾಲಿ ಹೊಡೆಯುತ್ತಿದೆ.

j3tvkannada
ಇಬ್ಬರು ಶಿಕ್ಷಕರು, ಇಬ್ಬರು ಅಡುಗೆ ಸಿಬ್ಬಂದಿ, ಏಳು ಕೊಠಡಿಗಳು ಇರುವ ಈ ಸರ್ಕಾರಿ ಶಾಲೆ ಯಾವುದೇ ವಿದ್ಯಾರ್ಥಿಗಳಿಲ್ಲದೇ ಬಿಕೋ ಎನ್ನುತ್ತಿದೆ. ಶಿಕ್ಷಕರ ಒಳ ಜಗಳ, ಸರಿಯಾಗಿ ನಡೆಯದ ಪಾಠ ಪ್ರವಚನ ಆರೋಪದಿಂದಾಗಿ ಶಾಲೆ ಆರಂಭವಾಗಿ ನಾಲ್ಕು ದಿನಗಳು ಕಳೆದರೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿಲ್ಲ. ಸರ್ಕಾರಿ ಶಾಲೆಗೆ ಪ್ರವೇಶ ಪಡೆಯದೇ ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ.
ಸಮರ್ಪಕ ಬಿಸಿಯೂಟ ನೀಡಲ್ಲ, ಕುಡಿಯುವ ನೀರಿಲ್ಲ, ಸ್ವಚ್ಛತೆ ಇಲ್ಲ, ಶಿಕ್ಷಕರ ಜಗಳದಿಂದ ಶಾಲೆಯ ವಾತಾವರಣ ಹದಗೆಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಕಳೆದ ವರ್ಷ 26 ವಿದ್ಯಾರ್ಥಿಗಳಿದ್ದರು. ಈ ಬಾರಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ಮೂರು ತಿಂಗಳ ಹಿಂದೆ ಮುಖ್ಯ ಶಿಕ್ಷಕಿ ಸುಶೀಲಾ ಪೊಲೀಸ್ ರಕ್ಷಣೆ ಪಡೆದಿದ್ದರು. ತಮ್ಮೂರ ಶಾಲೆಗೆ ನಿತ್ಯ ಪೊಲೀಸ್ ಕಾವಲಿನಿಂದ ಪೋಷಕರು ಬೇಸತ್ತಿದ್ದರು. ಸರ್ಕಾರಿ ಶಾಲೆಯ ದುರವಸ್ಥೆಯಿಂದ ಆಕ್ರೋಶಗೊಂಡು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದಾರೆ.
ಉಳ್ಳವರು ಖಾಸಗಿ ಶಾಲೆಗೆ ಸೇರಿಸುತ್ತಾರೆ, ಬಡವರು ಕೂಲಿ ಕಾರ್ಮಿಕರು ಏನು ಮಾಡಬೇಕು, ಇಲ್ಲಿನ ಶಿಕ್ಷಕರನ್ನು ವರ್ಗಾವಣೆ ಮಾಡಿ ಹದಗೆಟ್ಟಿರುವ ಸರ್ಕಾರಿ ಶಾಲೆಯ ಚಿತ್ರಣ ಬದಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.