
ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ವಸಂತಮ್ಮ ಅವರು ಪ್ರೌಢಶಾಲೆಯ ಶಿಕ್ಷಣವನ್ನು ಪೂರ್ಣಗೊಳಿಸದಿದ್ದರೂ, ತಮ್ಮ 6 ಎಕರೆ ಭೂಮಿಯಲ್ಲಿ 34 ಬಗೆಯ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು, ಸಾಂಬಾರ ಪದಾರ್ಥಗಳನ್ನು ಬೆಳೆಯುವುದಲ್ಲದೇ, ಯಾವುದರ ಸಹಾಯವಿಲ್ಲದೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

j3tvkannada
ಷಣ್ಮುಗಂ ಅವರ ಪತ್ನಿ ವಸಂತಮ್ಮ, ಕೃಷಿ ಎಂದರೆ ಯುವ ಸಮೂಹ ಮೂಗು ಮುರಿಯುವ ಕಾಲದಲ್ಲಿ, ತಮ್ಮ ಪ್ರಯತ್ನದ ಮೂಲಕ ಕೃಷಿಯ ಮಹತ್ವವನ್ನು ತೋರಿಸಿ ಕೊಟ್ಟಿದ್ದಾರೆ. ಅವರ ಪುತ್ರ ಶಬರಿನಾಥನ್ ಸಹಾಯದಿಂದ ತಮ್ಮ ಬೆಳೆಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದಾರೆ. 6 ಎಕರೆ ಜಮೀನಿನಲ್ಲಿ 100ಕ್ಕೂ ಹೆಚ್ಚು ಶ್ರೀಗಂಧದ ಮರಗಳು, 800 ಅಡಿಕೆ ಮರಗಳು, 50 ತೆಂಗು ಮರಗಳು, 40 ಕೋಕೋ ಗಿಡಗಳು, ಮತ್ತು ಸಾಂಬಾರ ಪದಾರ್ಥಗಳಾದ ಕಾಳುಮೆಣಸು, ಜಾಯಿಕಾಯಿ, ಚೆಕ್ಕೆ, ಇಂಗು, ಬಿರಿಯಾನಿ ಎಲೆ, ಅಂಜೂರ, ಲವಂಗ, ಪೆಪ್ಪರ್ಮೆಂಟ್ ಲೀಫ್, ಸೋಂಪು ಗಿಡ, ಖರ್ಜೂರ, ನೇರಳೆ, ಹಣ್ಣುಗಳ ಪೈಕಿ ಕಿತ್ತಳೆ, ಮಾವು, ಸಪೋಟ, ಹಲಸು, ಡ್ರಾಗನ್ ಫ್ರೂಟ್, ಹತ್ತಿ ಹಣ್ಣು, ರಾಂಬೂಟನ್, ಬಟರ್ ಫ್ರೂಟ್, ಮ್ಯಾಂಗೋಸ್ಟಿನ್, ವಾಟರ್ ಆ್ಯಪಲ್, ಊಟಿ ಆ್ಯಪಲ್, ಲಿಚ್ಚಿ, ಹೇರಳಕಾಯಿ, ನೆಲ್ಲಿಕಾಯಿ, ಚೆರಿ ಹಣ್ಣು, ಸ್ಟಾರ್ ಫ್ರೂಟ್, ಫಿಗ್ ಫ್ರೂಟ್, ಮಿರಾಕಲ್ ಫ್ರೂಟ್, ರಾಮ, ಸೀತಾ ಮತ್ತು ಲಕ್ಷ್ಮಣ ಫಲ, ಬಾಳೆ, ನಿಂಬೆ, ಪರಂಗಿ, ತಾಳೆ ಗಿಡ, ಮುಳ್ಳು ಸೀತಾ ಹೀಗೆ ಹಲವಾರು ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಪಾಮ್ ಆಯಿಲ್ ಗಿಡವನ್ನೂ ಬೆಳೆಸಿದ್ದಾರೆ. ಇಡೀ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಂಡಿರುವುದು ಬಹು ವಿಶೇಷ.
ವಸಂತಮ್ಮ ಅವರು ಆ ಪ್ರದೇಶದಲ್ಲಿ ಬೆಳೆಯಲಾಗದ ಬೆಳೆಗಳನ್ನು ತಮ್ಮ ತೋಟದಲ್ಲಿ ಬೆಳೆಸಿದ್ದಾರೆ ಮತ್ತು ಅವುಗಳನ್ನು ಮಾರಾಟಕ್ಕೆ ಸೂಕ್ತ ದಾರಿ ಕಂಡು ಕೊಂಡಿದ್ದಾರೆ. ಸಾವಯವ ಕೃಷಿಯಲ್ಲಿ ಬೆಳೆದ ತಾಜಾ ಹಣ್ಣುಗಳು ಗ್ರಾಹಕರಿಗೆ ದೊರಕಲು, ಅವರ ಪುತ್ರ ಶಬರಿನಾಥನ್ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ. ಮೈಸೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಶಬರಿನಾಥನ್ ಗ್ರೀನ್ಲೀಫ್ ಎನ್ನುವ ವಾಟ್ಸ್ ಆ್ಯಪ್ ಗ್ರೂಪ್ ಸ್ಥಾಪಿಸಿ, ತಮ್ಮ ಸ್ನೇಹಿತರನ್ನು ಸೇರಿಸಿಕೊಂಡು, ವಸಂತಮ್ಮ ಮತ್ತು ಅವರ ಮಗಳು ಎಂ.ಸಿ.ಎ ಪದವೀಧರೆ ನಂದಿನಿ ಕೂಡ ತಮ್ಮ ತಮ್ಮ ಮೊಬೈಲ್ ಸ್ಟೇಟಸ್ಗಳಲ್ಲಿ ಹಣ್ಣುಗಳ ವಿವರಗಳನ್ನು ಪ್ರಚಾರ ಮಾಡುತ್ತಾರೆ. ಇದರಿಂದ, ಬೇಡಿಕೆಯನ್ನು ಹೊಂದಿದ ಗ್ರಾಹಕರಿಗೆ, ಶಬರಿನಾಥನ್ ಪ್ರತಿ ಶನಿವಾರ ಹನುಮಂತಪುರಕ್ಕೆ ತೆರಳಿ ಭಾನುವಾರ ಅವರ ಮನೆ ಮನೆಗೆ ಹಣ್ಣು ಮತ್ತು ಹೂವುಗಳನ್ನು ತಲುಪಿಸುತ್ತಾರೆ.
ಕೃಷಿ ಇಲಾಖೆಯಿಂದ, ಮೈಸೂರು ಜಿಲ್ಲೆಯ ವಿವಿಧ ರೈತರು ವಸಂತಮ್ಮ ಅವರ ತೋಟಕ್ಕೆ ಬಂದು ತರಬೇತಿಯನ್ನು ಪಡೆಯುತ್ತಾರೆ. ವಸಂತಮ್ಮ ಅವರಿಗೆ ತಾಲೂಕು ಮತ್ತು ರಾಜ್ಯ ಮಟ್ಟದ “ರೈತ ಮಹಿಳೆ” ಎಂಬ ಪ್ರಶಸ್ತಿ ಲಭಿಸಿದೆ. ವರ್ಷಕ್ಕೆ 10 ಲಕ್ಷ ಆದಾಯ ಸಿಕ್ಕಿದೆ, ಇವರು ಇತರರಿಗೆ ಮಾದರಿಯಾಗಿದ್ದಾರೆ.