
ಮೈಸೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಜೂನ್. 3ರಂದು ನಡೆಯುವ ಐ.ಪಿ.ಎಲ್ ಫೈನಲ್ ಪಂದ್ಯ ವೀಕ್ಷಣೆಗೆ ನಗರದಲ್ಲಿ ಹಲವು ಕಡೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜೆ.ಪಿ.ನಗರದ ಪುಟ್ಟರಾಜ ಗವಾಯಿ ಕ್ರೀಡಾ ಮೈದಾನದಲ್ಲಿರುವ ಈಜುಕೊಳದ ಸಮೀಪ ಫೈನಲ್ ಪಂದ್ಯ ವೀಕ್ಷಣೆಗೆ ಅನುಕೂಲವಾಗಲಿ ಎಂದು ಬಿಗ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹಲವು ಕಡೆ ಸಿದ್ಧತೆಗಳು ಭರದಿಂದ ಸಾಗಿವೆ. ಕಳೆದ ಒಂದೂವರೆ ತಿಂಗಳಿನಿಂದ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೊನೆಯ ಹಂತಕ್ಕೆ ಬಂದಿದ್ದು, ಮಂಗಳವಾರ ಫೈನಲ್ ಪಂದ್ಯ ನಡೆಯಲಿದೆ.

j3tvkannada
ಕಳೆದ 18 ವರ್ಷಗಳಿಂದಲೂ ಕಪ್ ಎತ್ತಿ ಹಿಡಿಯದ ಆರ್.ಸಿ.ಬಿ ಈ ಬಾರಿ ಫೈನಲ್ ಗೆದ್ದು ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ್ದಾರೆ. ಆರ್ಸಿಬಿ ಗೆಲ್ಲಲಿ ಎಂದು ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವರಿಗೆ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. 18 ವರ್ಷಗಳ ಕನಸು ನನಸಾಗಬೇಕು. ಈ ಬಾರಿ ಆರ್.ಸಿ.ಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಹರೀಶ್ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಆರ್.ಸಿ.ಬಿ ಗೆದ್ದು ಕಪ್ ಎತ್ತಿ ಹಿಡಿದರೆ ಮೈಸೂರಿನ ಎಲ್ಲ ಇಂದಿರಾ ಕ್ಯಾಂಟೀನ್ಗಳಲ್ಲೂ ಉಚಿತ ಹೋಳಿಗೆ ಊಟ ನೀಡುವುದಾಗಿ ಮೈಸೂರಿನ ಆರ್.ಸಿ.ಬಿ ಅಭಿಮಾನಿ ಬಸವರಾಜ ಬಸಪ್ಪ ಘೋಷಣೆ ಮಾಡಿದ್ದಾರೆ. ಸಾಂಕೇತಿಕವಾಗಿ ಸೋಮವಾರವೇ ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ಉಚಿತವಾಗಿ ಊಟ ವಿತರಣೆ ಮಾಡಿದರು. ರಾಜ್ಯದ ಎಲ್ಲಇಂದಿರಾ ಕ್ಯಾಂಟೀನ್ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಿಸಿ ಎಲ್ಲ ಕನ್ನಡಿಗರು ಸಿಹಿ ಹೋಳಿಗೆ ರುಚಿ ಸವಿಯಲಿ. ಆರ್.ಸಿ.ಬಿ ಗೆಲುವಿನ ಸಂಭ್ರಮ ಹಂಚಿ ಕೊಳ್ಳಲಿ ಎಂದು ಅಭಿಮಾನಿಗಳು ಸಿ.ಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.