
ಹಾಸನ: ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ, ಜೀವನಶೈಲಿ, ಮತ್ತು ಸೌಕರ್ಯಗಳು ಗಣನೀಯವಾಗಿ ಬದಲಾಗಿವೆ. ಆದರೆ, ಕಸದ ನಿರ್ವಹಣೆಯ ವಿಷಯದಲ್ಲಿ ಇನ್ನೂ ಸಾಕಷ್ಟು ಸವಾಲುಗಳಿವೆ. ಸರ್ಕಾರವು ಕಸದ ವಿಲೇವಾರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ, ಕೆಲವರು ಕಂಡ ಕಂಡಲ್ಲಿ ಕಸ ಎಸೆಯುವ ಚಾಳಿಯನ್ನು ಬಿಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಾಸನದ ತಿಮಲಾಪುರ ಗ್ರಾಮದ ಚಿಕ್ಕಟೆ ಕೆರೆಯ ಬಳಿಯ ಘಟನೆಯೊಂದು ಗಮನ ಸೆಳೆದಿದೆ, ಇಲ್ಲಿ ಗ್ರಾಮಸ್ಥರು ಕಸ ಎಸೆದವನಿಗೆ ಸರಿಯಾದ ಬುದ್ಧಿಪಾಠ ಕಲಿಸಿದ್ದಾರೆ.

j3tvkannada
ಹಾಸನ ನಗರದ ಹೊರವಲಯದಲ್ಲಿರುವ ತಿಮಲಾಪುರ ಗ್ರಾಮದ ಚಿಕ್ಕಟೆ ಕೆರೆಯ ಬದಿಯಲ್ಲಿ ಈ ಘಟನೆ ನಡೆದಿದೆ. ಹಾಸನ ನಗರದ 12ನೇ ಕ್ರಾಸ್ನ ನಿವಾಸಿಯೊಬ್ಬ ಕಾರಿನಲ್ಲಿ ಬಂದು ಯಾರೂ ಇಲ್ಲದಿರುವುದನ್ನು ಗಮನಿಸಿ ಕೆರೆಯ ಒಡ್ಡಿನ ಮೇಲೆ ಕಸ ಎಸೆಯಲು ಯತ್ನಿಸಿದ. ಗ್ರಾಮಸ್ಥರು ಈ ಕೃತ್ಯವನ್ನು ಗಮನಿಸಿ ಆತನನ್ನು ತಡೆದರು. ಆತನ ಕಾರಿನಲ್ಲಿ ತಂದಿದ್ದ ಕಸವನ್ನೇ ಮತ್ತೆ ಕಾರಿಗೆ ತುಂಬಿಸಿ ತಪ್ಪಿನ ಅರಿವು ಮೂಡಿಸಿದರು.
ಗ್ರಾಮಸ್ಥರ ಈ ಕ್ರಮಕ್ಕೆ ಆ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡು ಮುಂದೆ ಎಂದಿಗೂ ಕಸವನ್ನು ಕಂಡ ಕಂಡಲ್ಲಿ ಎಸೆಯುವುದಿಲ್ಲ ಎಂದು ಭರವಸೆ ನೀಡಿದ. ಈ ಘಟನೆಯಿಂದ ಕಸದ ವಿಲೇವಾರಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ. ಸರ್ಕಾರದ ಯೋಜನೆಗಳ ಜೊತೆಗೆ, ಸಮುದಾಯದ ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಶುಚಿತ್ವದ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.