
ಕಲಬುರುಗಿ: ಕಲಬುರಗಿ ಜಿಲ್ಲೆ ಎಂದರೆ ತೊಗರಿ ಕಣಜ ಎಂದು ಖ್ಯಾತಿ ಪಡೆದಿದೆ. ರಾಜ್ಯದಲ್ಲೇ ಅತ್ಯಂತ ಹೆಚ್ಚು ತೊಗರಿ ಬೆಳೆಯುವ ಪ್ರದೇಶವಾಗಿದೆ. ತೊಗರಿ ಎಂದರೆ ವಾಣಿಜ್ಯ ಬೆಳೆ. ರೈತರು ಹೆಚ್ಚು ಖರ್ಚು ಮಾಡಿ ತೊಗರಿ ಬೆಳೆಯುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಸಿಗುತ್ತಿರುವ ಬೆಲೆ ಮಾತ್ರ ಅತ್ಯಂತ ಕಡಿಮೆ ಬೆಲೆಗೆ ಕುಸಿತ ಕಂಡಿದೆ. ಈಗಾಗಲೇ ಮಾರುಕಟ್ಟೆಗೆ ಪ್ರಸ್ತುತ ತೊಗರಿ ಆಮದು ಬಹುತೇಕ ಕಡಿಮೆಯಾಗಿದೆ. ಬೆಲೆ ಕಡಿಮೆಯಿದೆ ಎಂಬ ಕಾರಣಕ್ಕೆ ಕೇಂದ್ರ ಸರಕಾರ 7500 ರೂ. ಬೆಂಬಲ ಬೆಲೆ ಘೋಷಿಸಿತ್ತು. ಅದರಂತೆ ರಾಜ್ಯ ಸರಕಾರವೂ 450 ರೂ. ಪ್ರೋತ್ಸಾಹ ಧನವನ್ನೂ ನೀಡಿ ರೈತರ ನೆರವಿಗೆ ಬಂದಿದೆ.

j3tvkannada
ತೊಗರಿ ಬೆಲೆ ಇಳಿಕೆಗೆ ಪ್ರಮುಖ ಕಾರಣ ಕಳೆದ ವರ್ಷ ತೊಗರಿ ಉತ್ತಮ ಉತ್ಪಾದನೆ ರಾಜ್ಯದಲ್ಲಾಗಿದೆ. ಕಲಬುರಗಿಯಲ್ಲೇ 40 ಲಕ್ಷ ಕ್ವಿಂಟಾಲ್ ತೊಗರಿ ಬೆಳೆಯಲಾಗಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ವಿಜಯಪುರ, ಬಾಗಲಕೋಟೆಯಲ್ಲಿಯೂ ಸಹ ಈ ಬಾರಿ ಕಲಬುರಗಿಯಷ್ಟೇ ತೊಗರಿ ಉತ್ಪಾದನೆ ಮಾಡಲಾಗಿದೆ. ಇದರ ಜತೆಗೆ ಖರೀದಿ ಕೇಂದ್ರಗಳಿಂದ ಅಂದಾಜು 20 ಲಕ್ಷ ಕ್ವಿಂಟಾಲ್ ತೊಗರಿ ಶೇಖರಣೆ ಮಾಡಿದ್ದಾರೆ. ದಲ್ಲಾಳಿಗಳು ಸಹ ತೊಗರಿ ಖರೀದಿ ಮಾಡಿಟ್ಟುಕೊಂಡಿರುವುದು. ಮಯನ್ಮಾರ್, ಮೊಜಂಬಿಕಾ, ತಾಂಜೇನಿಯಾ, ಸುಡಾನ್ ದೇಶಗಳಿಂದಲೂ ತೊಗರಿ ಆಮದು ಮಾಡಿಕೊಂಡಿರುವ ಕಾರಣಕ್ಕಾಗಿ ರಾಜ್ಯದಲ್ಲಿ ತೊಗರಿ ಬೆಲೆ ಇಳಿ ಮುಖವಾಗಿದೆ. 2023ರಲ್ಲಿ 4 ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಂಡಿದ್ದರೆ, ಈ ವರ್ಷ 8ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಇದೇ ಕಾರಣಕ್ಕಾಗಿ ಬೆಲೆ ಇಳಿಕೆಯತ್ತ ಸಾಗಿದೆ.
ಕಳೆದ ವರ್ಷ 2024 ಮೇ ತಿಂಗಳಲ್ಲಿ ರಾಜ್ಯದಲ್ಲಿ ತೊಗರಿ ಬೆಲೆ ಗರಿಷ್ಠ 12000 ರೂ. ದಾಟಿತ್ತು. ಆದರೆ, ಇದೇ ಬೆಲೆ ಮುಂದುವರಿಯಲಿದೆ ಎಂದುಕೊಂಡಿದ್ದ ರೈತರಿಗೆ ಮುಂದೆ ತೊಗರಿ ಬೆಲೆ ಇಳಿಮುಖದತ್ತ ಸಾಗಿತು. ಆದರೆ, ಈ ವರ್ಷ ಮೇ ತಿಂಗಳಲ್ಲಿ ತೊಗರಿ ಕನಿಷ್ಠ ಕ್ವಿಂಟಾಲ್ಗೆ 5555 ರೂ.ಗೆ ತಲುಪಿದ್ದು, ಗರಿಷ್ಠ 7122 ರೂ.ವರೆಗೆ ಮಾರಾಟ ಆಗುತ್ತಿದೆ. ರಾಜ್ಯದಲ್ಲಿ ಕಳೆದ ವರ್ಷ ತೊಗರಿ ಉತ್ತಮ ಇಳುವರಿ ಬಂದಿದೆ. ಹೆಚ್ಚು ಉತ್ಪಾದನೆ, ಮಾರುಕಟ್ಟೆಗೆ ಹೆಚ್ಚು ತೊಗರಿ ಬಂದಾಗ ಬೆಲೆ ಇಳಿಯುವುದು ಸಹಜ ಪ್ರಕ್ರಿಯೆ. ಆದರೂ ರಾಜ್ಯ, ಕೇಂದ್ರ ಸರಕಾರಗಳು ರೈತರ ನೆರವಿಗೆ ಬಂದು ಸರಿದೂಗಿಸಿವೆ ಎಂದಿದ್ದಾರೆ ಸಮದ್ ಪಟೇಲ್ ಜಂಟಿ ಕೃಷಿ ನಿರ್ದೇಶಕ ಕಲಬುರಗಿ.
ಹೊರ ದೇಶಗಳಿಂದ ತೊಗರಿ ಆಮದು ಮಾಡಿಕೊಳ್ಳಲಾಗುತ್ತಿದೆ. ತಂದು ಮಾರುಕಟ್ಟೆಗೂ ಬಿಡುತ್ತಾರೆ. ಇದಕ್ಕೆ ಕಡಿವಾಣ ಹಾಕಿದರೆ ನಮ್ಮ ತೊಗರಿಗೆ ಹೆಚ್ಚಿನ ಬೆಲೆ ಸಿಗಲಿದೆ. ಜತೆಗೆ ನಮ್ಮಲ್ಲಿಯೂ ತೊಗರಿ ಉತ್ತಮ ಇಳುವರಿ ಕಳೆದ ವರ್ಷ ಬಂದಿದೆ. ಇದರಿಂದ ರೈತರಿಗೆ ಹೆಚ್ಚು ಬೆಲೆ ಸಿಗಲಿಲ್ಲ ಎಂದಿದ್ದಾರೆ ಶರಣಬಸಪ್ಪ ಮಮಶೆಟ್ಟಿ ಜಿಲ್ಲಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ.