
ಉತ್ತರ ಕನ್ನಡ: ಪ್ರತಿ ಮಳೆಗಾಲದ ಸಂದರ್ಭದಲ್ಲಿಯೂ ಈ ಸಮಸ್ಯೆ ಇದ್ದರೂ ಸಹ ಅಧಿಕಾರಿಗಳ ದಂಡು ಈ ಕಡೆ ಸುಳಿಯಲೂ ಇಲ್ಲ. ಜನಪ್ರತಿನಿಧಿಗಳಾದವರು ನಮ್ಮನ್ನು ಮರೇತೇ ಹೋಗಿದ್ದಾರೆ. ಶಾಸಕರಿಗೆ ನಾವು ಕಳೆದ ಅಕ್ಟೋಬರ್ನಲ್ಲಿಯೇ ರಸ್ತೆ ಸಮಸ್ಯೆಯನ್ನು ಬಗೆ ಹರಿಸಿಕೊಡಲು ಮನವಿ ನೀಡಿದ್ದೆವು. ಆದರೆ ಇದುವರೆಗೆ ಯಾವ ಸ್ಪಂದನೆಯೂ ದೊರೆತಿಲ್ಲ. ಈಗೊಂದು ಕೆಲ ಸಮಯದ ಹಿಂದೆ ಇಲ್ಲಿಯೇ ಸಮೀಪ ಬಂದಿದ್ದ ತಹಶೀಲ್ದಾರ್ ಒಮ್ಮೆ ಮಾತ್ರ ಈ ಸ್ಥಳಕ್ಕೆ ಕಾಟಾಚಾರದ ಭೇಟಿ ನೀಡಿ ಹೋಗಿದ್ದಾರೆ ವಿನಃ ಅದರಿಂದಾದ ಪ್ರಯೋಜನ ನಯಾ ಪೈಸೆಯೂ ಇಲ್ಲ. ಸರಕಾರ ಇದೆಯೋ ಇಲ್ಲವೋ ಎಂಬ ಅನುಮಾನ ನಮಗೆ ಬರುತ್ತಿದೆ ಎಂಬುದು ಶಿರಸಿಯ ಪ್ರತಿ ಗ್ರಾಮಸ್ಥನ ಅಂತರಾಳದ ಅಳಲಾಗಿದೆ.

j3tvkannada
ಮಹಿಳೆಯರಿಗೆ ಶಕ್ತಿ ಭಾಗ್ಯ ಸರಕಾರ ನೀಡಿದೆ, ಆದರೆ ನಮ್ಮೂರಿಗೆ ಬಸ್ಸೇ ಬರುವುದಿಲ್ಲ. ಬಸ್ಸು ಬರಲು ರಸ್ತೆಯೇ ಇಲ್ಲ. ಉಚಿತವಾಗಿ ಅಕ್ಕಿ ಕೊಡ್ತೇವೆ ಅಂತಾರೆ, ಆದರೆ ಅದನ್ನು ಮನೆಗೆ ತರುವ ಖರ್ಚು, ಒಂದು ಕೆಜಿ ಅಕ್ಕಿಯ ಮಾರುಕಟ್ಟೆ ದರಕ್ಕಿಂತಲೂ ಜಾಸ್ತಿಯಾಗುತ್ತದೆ. ಶಾಲೆಗೆ ಕೊಡುವ ಮೊಟ್ಟೆಗಳು ಹಾಳಾದ ರಸ್ತೆಯಲ್ಲಿ ತರುವಾಗಲೇ ಒಡೆದು ಹೋಗುತ್ತಿದೆ. ಇನ್ನೆಲ್ಲಿ ಮಕ್ಕಳಿಗೆ ಮೊಟ್ಟೆ ಭಾಗ್ಯ. ಇದು ನಮ್ಮ ಗ್ರಾಮದ ಅವಸ್ಥೆ. ಗ್ರಾಮಸ್ಥರ ಪ್ರತಿನಿತ್ಯದ ನರಕ ಯಾತನೆಯಾಗಿದೆ. ಈ ಕೂಡಲೇ ಅಧಿಕಾರಿಗಳು, ಶಾಸಕರು ನಮಗೆ ರಸ್ತೆ ಸೌಲಭ್ಯವನ್ನು ದೊರಕಿಸಿ ಕೊಡಲಿ.
ಈ ರಸ್ತೆಯಲ್ಲಿ ಪ್ರತಿದಿನ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದು ನಿಜಕ್ಕೂ ಹೆದರಿಕೆಯಾಗುತ್ತದೆ. ರಸ್ತೆಯ ಅವವ್ಯಸ್ಥೆಯನ್ನು ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ. ನಮ್ಮ ಸಿದ್ದಿ ಸಮುದಾಯದ 20 ಕ್ಕೂ ಅಧಿಕ ಜನರು, ಅನೇಕ ಕುಟುಂಬಗಳು ಈ ಗ್ರಾಮದಲ್ಲಿವೆ. ಹೀಗಿದ್ದರೂ ಸಹ ನಮ್ಮ ಊರಿಗೆ ರಸ್ತೆ ಸೌಲಭ್ಯ ನೀಡಲಿಲ್ಲ. ನಮಗೆ ಯಾವ ಸೌಲಭ್ಯವೂ ದೊರೆಯುತ್ತಿಲ್ಲ. ನಮ್ಮ ಹಕ್ಕಿನ ಸೌಲಭ್ಯಕ್ಕಾಗಿ ಆಗ್ರಹಿಸುತ್ತಿದ್ದೇವೆ.
ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಸಹ ನಮ್ಮ ಪಕ್ಕಸಲ್ಲಿಯೇ ಇಂತಹ ಪರಿಸ್ಥಿತಿ ಇರುವ ಊರನ್ನು ನೋಡಿದರೆ ಸರಕಾರದ ಆಡಳಿತ ವ್ಯವಸ್ಥೆ ಬದುಕಿದೆಯಾ, ಸತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಈ ಕೂಡಲೇ ಶಾಸಕರಾದ ಭೀಮಣ್ಣನವರು ಅಧಿಕಾರಿಗಳ ಜೊತೆಗೆ ಈ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆಯನ್ನು ಸರಿಪಡಿಸಿಕೊಡಬೇಕು. ಇಲ್ಲವಾದಲ್ಲಿ ಊರಿನ ಗ್ರಾಮಸ್ಥರ ಪರವಾಗಿ, ಅವರ ಜೊತೆಯಾಗಿ ನಿಮ್ಮ ಕಛೇರಿಯೆದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುವುದು.
ಈ ರಸ್ತೆ ಸಮಸ್ಯೆ ಬಗೆ ಹರಿಯುವವರೆಗೂ ನಾನು ಈ ಊರಿನ ಜೊತೆಗೆ, ಜನರೊಡನೆ ಗಟ್ಟಿಯಾಗಿ ಇರುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ, ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. ಮಾದ್ಯಮದೊಂದಿಗೆ ಮಾತನಾಡಿದ ಅವರು, ಜೂ.15 ರೊಳಗೆ ಸುಗಮ ಸಂಚಾರಕ್ಕೆ ರಸ್ತೆಯನ್ನು ಮಾಡಿಕೊಡದಿದ್ದಲ್ಲಿ, ಶಾಸಕರ ಕಛೇರಿಯೆದುರು ಅನಿರ್ದಿಷ್ಟಾವಧಿ ಧರಣಿಯನ್ನು ಗ್ರಾಮಸ್ಥರೆಲ್ಲರೂ ಕೈಗೊಳ್ಳುವುದಾಗಿ ಇದೇ ವೇಳೆ ಪ್ರತಿಜ್ಞೆಗೈದರು.