
ಹುಬ್ಬಳ್ಳಿ: ಸ್ಮಾರ್ಟ್ಸಿಟಿ ಯೋಜನೆಯಡಿ ಹೊಸೂರಿನಲ್ಲಿ ಜಿ ಪ್ಲಸ್ 4 ಅಪಾರ್ಟ್ಮೆಂಟ್ನಲ್ಲಿ ನಿರ್ಮಿಸಿದ 80 ಮನೆಗಳ ಹಂಚಿಕೆಗೆ ಮತ್ತೊಂದು ತೊಡಕು ಎದುರಾಗಿದೆ. ಹೀಗಾಗಿ ಹೊಸೂರು-ಉಣಕಲ್ ರಸ್ತೆ ಅಗಲೀಕರಣಕ್ಕೆ ಮನೆ ಕಳೆದು ಕೊಳ್ಳುವ ಸಂತ್ರಸ್ತರಿಗೆ ಮನೆಗಳ ವಿತರಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಸಂತ್ರಸ್ತರಿಗೆ ನೀಡುವ ಅಪಾರ್ಟ್ಮೆಂಟ್ನ ಮನೆಗಳಿಗೆ ಈವರೆಗೆ ವಿದ್ಯುತ್ ಮೀಟರ್ ಸಂಪರ್ಕ ಕಲ್ಪಿಸಿಲ್ಲ.

j3tvkannada
ಮನೆ ಹಂಚಿಕೆ ಮಾಡುವ ಮಹಾನಗರ ಪಾಲಿಕೆಯವರು ಮೀಟರ್ ಅಳವಡಿಸಬೇಕೇ ಅಥವಾ ಮನೆ ಪಡೆದುಕೊಳ್ಳುವ ಫಲಾನುಭವಿಗಳೇ ಸಂಪರ್ಕ ಪಡೆದುಕೊಳ್ಳಬೇಕೆ ಎಂಬ ಪ್ರಶ್ನೆ ಎದುರಾಗಿದೆ. ಮನೆಗಳು ಯಾರಿಗೆ ಹಂಚಿಕೆ ಆಗುತ್ತವೆಯೋ ಗೊತ್ತಿರುವುದಿಲ್ಲ. ಹೀಗಾಗಿ ಯಾರ ಹೆಸರಿನ ಮೇಲೆ ಮೀಟರ್ ಸಂಪರ್ಕ ತೆಗೆದುಕೊಳ್ಳಬೇಕು. ಹೀಗಾಗಿ ನಮ್ಮಿಂದ ಯಾರಿಗೆ ಮನೆ ಹಂಚಿಕೆ ಆಗುತ್ತದೆಯೋ ಅವರೇ ಮೀಟರ್ ಸಂಪರ್ಕ ಕಲ್ಪಿಸಿಕೊಳ್ಳಬೇಕು ಎನ್ನುವುದು ಪಾಲಿಕೆ ಅಧಿಕಾರಿಗಳ ವಾದವಾದರೆ, ಒಂದು ಮನೆಗೆ ಏನೆಲ್ಲ ಮೂಲ ಸೌಲಭ್ಯಗಳು ಬೇಕೋ ಅವನ್ನು ಒದಗಿಸುವುದು ಪಾಲಿಕೆ ಕೆಲಸ. ಪಾಲಿಕೆಯೇ ಮೀಟರ್ ಅಳವಡಿಕೆ ಮಾಡಬೇಕು ಎಂಬುದು ಸಂತ್ರಸ್ತರ ವಾದ.
ರಾಜ್ಯ ಹಾಗೂ ಕೇಂದ್ರ ಸರಕಾರದ ಆಶ್ರಯ ಯೋಜನೆಯಡಿ ನಿರ್ಮಿಸುವ ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿದ ನಂತರ ಸರಕಾರವೇ ಆಯಾ ಫಲಾನುಭವಿಗಳ ಹೆಸರಿನಲ್ಲಿ ಮೀಟರ್ ಸಂಪರ್ಕ ಕಲ್ಪಿಸಿಕೊಡುತ್ತದೆ. ಅದಕ್ಕೆ ಬೇಕಾದ ಠೇವಣಿ ಹಾಗೂ ಮೀಟರ್ನ ಶುಲ್ಕವನ್ನು ಸರಕಾರವೇ ಭರಿಸುತ್ತದೆ. ಆದರೆ, ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಾಣ ಮಾಡಿದ ಅಪಾರ್ಟ್ಮೆಂಟ್ ಸಹ ಸರಕಾರದ್ದೇ ಆಗಿದೆ. ಹೀಗಾಗಿ ಮೀಟರ್ ಅಳವಡಿಕೆಗೆ ಬೇಕಾದ ಹಣವನ್ನು ಫಲಾನುಭವಿಗಳು ಏಕೆ ಭರಿಸಬೇಕು ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.

j3tvkannada
ಹೊಸೂರು ಅಪಾರ್ಟಮೆಂಟ್ನಲ್ಲಿ ರಸ್ತೆಗೆ ಮನೆ ಕಳೆದುಕೊಂಡ 35 ಸಂತ್ರಸ್ತರಿಗೆ ಮೊದಲ ಹಂತದಲ್ಲಿ ಮನೆ ಹಂಚಿಕೆ ಮಾಡಲು ಉದ್ದೇಶಿಸಿದೆ. ಇಲ್ಲಿನ ಒಂದೊಂದು ಮನೆಗೆ ಮೀಟರ್ ಅಳವಡಿಕೆ ಮಾಡಬೇಕೆಂದರೆ, ಠೇವಣಿ ಹಾಗೂ ಮೀಟರ್ ಶುಲ್ಕ ಸೇರಿ ಅಂದಾಜು 5 ಸಾವಿರ ರೂ. ಖರ್ಚು ಬರಲಿದೆ. ಈ ಹಣವನ್ನು ಭರಿಸಲು ಪಾಲಿಕೆ ನಿರಾಕರಿಸಿದ್ದರಿಂದ ಫಲಾನುಭವಿಗಳೇ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಜಿ ಪ್ಲಸ್ 4 ಅಪಾರ್ಟ್ಮೆಂಟ್ನ ಮನೆಗಳಿಗೆ ಯಾರು ವಿದ್ಯುತ್ ಸಂಪರ್ಕ ಹಾಗೂ ಮೀಟರ್ ಅಳವಡಿಸಬೇಕು ಎಂಬ ಗೊಂದಲ ನಿರ್ಮಾಣವಾಗಿದ್ದು ಪಾಲಿಕೆ ಅಧಿಕಾರಿಗಳು ಹಾಗೂ ಫಲಾನುಭವಿಗಳ ಜತೆಗೆ ಸ್ಥಳೀಯ ಶಾಸಕ ಮಹೇಶ ಟೆಂಗಿನಕಾಯಿ ಅವರು ಸಭೆ ನಡೆಸಿದ್ದಾರೆ.
ಪಾಲಿಕೆ ಮನೆಗಳನ್ನು ನೀಡುತ್ತಿದೆ. ಮೀಟರ್ ಸಂಪರ್ಕ ಮಾತ್ರ ಫಲಾನುಭವಿಗಳೇ ತೆಗೆದುಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಕೆಲವರು ಶಾಸಕರ ಮಾತಿಗೆ ಒಪ್ಪಿದ್ದರೆ ಕೆಲವರು ಮೂಲ ಸೌಲಭ್ಯ ಒದಗಿಸುವುದು ಪಾಲಿಕೆ ಹೊಣೆ ಎಂದು ಹೇಳಿದ್ದಾರೆನ್ನಲಾಗಿದೆ. ಹೀಗಾಗಿ ಎಲ್ಲ ಫಲಾನುಭವಿಗಳು ಮೀಟರ್ ಅಳವಡಿಸಿಕೊಳ್ಳಲು ಒಪ್ಪಿಕೊಳ್ಳದಿದ್ದರೆ ಮತ್ತೊಂದು ಸುತ್ತಿನಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಫಲಾನುಭವಿಗಳ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಶಾಸಕರು ನಿರ್ಧರಿಸಿದ್ದಾರೆ. ವಿದ್ಯುತ್ ಮೀಟರ್ ಅಳವಡಿಕೆ ಸಮಸ್ಯೆಗೆ ಪರಿಹಾರ ಸಿಗುವವರೆಗೆ ಸಂತ್ರಸ್ತರಿಗೆ ಮನೆ ಹಂಚಿಕೆ ಮಾಡುವ ಕಾರ್ಯವನ್ನೂ ಮುಂದೂಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅದಕ್ಕಾಗಿ ಶಾಸಕರ ನೇತೃತ್ವದಲ್ಲಿ ಸಭೆ ಮಾಡಿ ಸಂತ್ರಸ್ತರಿಗೆ ತಿಳಿಸುವ ಕಾರ್ಯ ಮಾಡಲಾಗಿದೆ ಎಂದಿದ್ದಾರೆ ರುದ್ರೇಶ ಘಾಳಿ ಆಯುಕ್ತರು ಮಹಾನಗರ ಪಾಲಿಕೆ.