
ರಾಮನಗರ: ಹೇಮಾವತಿ ನೀರು ವಿಚಾರಕ್ಕೆ ಬೆಂಗಳೂರು ದಕ್ಷಿಣ ಹಾಗೂ ತುಮಕೂರು ಜಿಲ್ಲೆಗಳ ನಡುವೆ ಬಿರುಕು ಮೂಡಿದೆ. ತುಮಕೂರಿನ ಗುಬ್ಬಿಯ ಸಂಕಾಪುರದ ಕಾಮಗಾರಿ ಸ್ಥಳದಲ್ಲಿ ಜಿಲ್ಲಾಡಳಿತ ಹೇರಿದ್ದ ನಿಷೇಧಾಜ್ಞೆ ಉಲ್ಲಂಘಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಕಾಮಗಾರಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತರು ‘ನಾವಾ ನೀವಾ’ ನೋಡಿಯೇ ಬಿಡೋಣ ಎಂದು ರಾಜ್ಯ ಸರಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನಡೆಯುತ್ತಿರುವ ಗಲಾಟೆಗಳ ಮಾದರಿಯಲ್ಲಿಯೇ ತಪ್ಪು ಗ್ರಹಿಕೆಗಳಿಂದಾಗಿ ತುಮಕೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳ ನಡುವೆ ನೀರಿನ ಹಂಚಿಕೆ ವಿಚಾರದಲ್ಲಿಯೇ ಪ್ರತಿಭಟನೆ ಪರ ವಿರೋಧಗಳು ತೀವ್ರಗೊಳ್ಳುತ್ತಿವೆ. ಹಾಸನದ ಹೇಮಾವತಿ ನದಿ ನೀರನ್ನು ನಾಲಾ ವಲಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ತಾಲೂಕುಗಳಿಗೆ ಹಂಚಿಕೆ ಮಾಡಿ, 2019 ರಲ್ಲಿಯೇ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿತ್ತು. ಇದಕ್ಕೂ ಮೊದಲೇ 10 ವರ್ಷ ಹಿಂದೆಯೇ ಕುಣಿಗಲ್ ಮೂಲಕ ಮಾಗಡಿ ಕೆರೆಗಳಿಗೆ ನೀರು ಹರಿಸಲು ತೆರೆದ ನಾಲೆ ಕಾಮಗಾರಿ ಶುರುವಾಗಿತ್ತು.

j3tvkannada
ವರ್ಷಗಳ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಈ ನಾಲೆ ಮೂಲಕ ನೀರು ಹರಿಯಲೇ ಇಲ್ಲ. ಹೀಗಾಗಿ 2018 ರಲ್ಲಿ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಎಕ್ಸ್ಪ್ರೆಸ್ ಕೆನಾಲ್ ಮೂಲಕ ಮಾಗಡಿಗೆ ನೀರು ಹರಿಸಲು ಮುಂದಾಗಿದ್ದರು. ಬಳಿಕ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗ ಮತ್ತೊಮ್ಮೆ ನೀರಾವರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಈ ಯೋಜನೆಯನ್ನು 468 ಕೋಟಿಯಿಂದ 1 ಸಾವಿರ ಕೋಟಿಗೆ ಏರಿಕೆ ಮಾಡುವ ಮೂಲಕ ಚಾಲನೆ ನೀಡಿದ್ದು, ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ.
ಈ ಯೋಜನೆಯಡಿ 78ನೇ ಕಿ.ಮೀ ನಲ್ಲಿಯೇ ಟ್ಯಾಪ್ ಅಳವಡಿಸಿ, ಭೂಮಿಯ ಗುರುತ್ವಾಕರ್ಷಣೆ ಮೂಲಕ ಮಾಗಡಿಗೆ ನೀರು ತರಲು ಯೋಜನೆ ರೂಪಿಸಲಾಗಿದೆ. ಆದರೆ ಈ ಯೋಜನೆಗೆ ಪ್ರಾರಂಭದಲ್ಲೇ ವಿಘ್ನ ಶುರುವಾಗಿದ್ದು ತುಮಕೂರಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆ 10 ವರ್ಷ ಹೋರಾಟದ ಫಲವಾಗಿ ಸಿದ್ಧಗೊಂಡಿರುವ ತೆರೆದ ನಾಲೆಗೂ ಕೋಟಿಗಟ್ಟಲೆ ಹಣ ಖರ್ಚಾಗಿದೆ. ಹೀಗಿದ್ದರೂ ನಾಲೆಯಲ್ಲಿ ನೀರಿಲ್ಲದೇ ಅನುಪಯುಕ್ತಗೊಂಡಿದೆ. ಈ ನಾಲೆ ಮೂಲಕ ಪಂಪ್ ಮಾಡಿ ನೀರು ಪಡೆಯಬಹುದು ಎನ್ನುವುದು ಕೆಲವರ ವಾದ. ಈಗ ನಿರ್ಮಾಣಗೊಳ್ಳಲಿರುವ ಎಕ್ಸ್ಪ್ರೆಸ್ ಕೆನಾಲ್ ಅನ್ನು ಹೆದ್ದಾರಿ ಬದಿಯಲ್ಲಿಯೇ ಪೈಪ್ಗಳನ್ನು ಅಳವಡಿಸಲಾಗುತ್ತಿದೆ.

j3tvkannada
ಒಟ್ಟಿನಲ್ಲಿ 2 ಜಿಲ್ಲೆಗಳ ನಡುವಿನ ನೀರಾವರಿ ಗಲಾಟೆಗಳಿಂದಾಗಿ ಮಾಗಡಿ ಜಿಲ್ಲೆಗೆ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ನೀರಾವರಿ ಯೋಜನೆಗಳ ಮೇಲೂ ಕರಿಛಾಯೇ ಆವರಿಸಲಿದೆ. ಮತ್ತೊಂದೆಡೆ ಶ್ರೀ ರಂಗ ಯೋಜನೆ ಮೂಲಕ ಮಾಗಡಿಯ ಕೆಲ ಕೆರೆಗಳಿಗೆ ನೀರುಣಿಸುವ ಯೋಜನೆ ವೇಳೆ ಕ್ರೆಡಿಟ್ ವಾರ್ಗಾಗಿ ಹಾಲಿ ಮಾಜಿ ಶಾಸಕರ ನಡುವೆ ಗಲಾಟೆಗಳು ನಡೆದಿದ್ದವು. ಇಂತಹ ರಾಜಕೀಯ ಪ್ರತಿಷ್ಠೆಗಳು ಚುನಾವಣಾ ಗಿಮಿಕ್ಗಳಿಂದಾಗಿ ಹೇಮಾವತಿ ನದಿ ಮಾಗಡಿಗೆ ಹರಿಯುವಳೇ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ನೀರಾವರಿ ತಜ್ಞರು ಸಚಿವರು ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿಗೆ ಮಣ್ಣು ಸುರಿದರೂ, ತುಮಕೂರು ಉಸ್ತುವಾರಿ ಸಚಿವರು ಸಹ ತುಟಿ ಬಿಚ್ಚುತ್ತಿಲ್ಲ.
ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ನದಿ ಗೊರೂರು ಜಲಾಶಯದಿಂದ ತುಮಕೂರು ಜಿಲ್ಲೆಗೆ ವರ್ಷಕ್ಕೆ 24 ಟಿ.ಎಂ.ಸಿ ನೀರು ಹಂಚಿಕೆ ಆಗಬೇಕು. ಆದರೆ ಯಾವ ವರ್ಷವೂ 24 ಟಿಎಂಸಿ ನೀರು ಹಾಸನದಿಂದ ತುಮಕೂರಿಗೆ ಹರಿದೇ ಇಲ್ಲ. ಈ ಯೋಜನೆಯಡಿ ಗುಬ್ಬಿ ತಾಲೂಕಿನ ಸಂಕಾಪುರದಿಂದ ಪೈಪ್ನಲ್ಲಿ ಕುಣಿಗಲ್ ಮಾರ್ಗವಾಗಿ ಮಾಗಡಿಗೆ ನೀರು ಹರಿಸುವ ಯೋಜನೆ ಕಾರ್ಯಗತವಾಗುತ್ತಿದೆ.

j3tvkannada
ಇದಕ್ಕೆ ತುಮಕೂರು ಜಿಲ್ಲೆಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗುಬ್ಬಿ, ಕುಣಿಗಲ್ ತಾಲೂಕಿನಿಂದ ನೈಸರ್ಗಿಕವಾಗಿ ನಾಲೆಗಳ ಮೂಲಕವೇ ಮಾಗಡಿಗೆ ನೀರು ಹರಿಸಲಿ. ಅದನ್ನು ಬಿಟ್ಟು ದೊಡ್ಡ ಸ್ಟೀಲ್ ಪೈಪ್ ಬಳಸಿ ಕುಣಿಗಲ್ ಮೂಲಕ ಮಾಗಡಿಗೆ ನೀರು ಹರಿಸುವುದು ಬೇಡ. ಇದರಿಂದ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ನಿಂದ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಸಿಗದಂತೆ ಆಗುತ್ತದೆ ಎಂಬುದು ತುಮಕೂರು ರೈತರ ಆತಂಕಕ್ಕೆ ಕಾರಣ.
ಎಕ್ಸ್ಪ್ರೆಸ್ ಕೆನಾಲ್ ಮೂಲಕ ಅವೈಜ್ಞಾನಿಕವಾಗಿ ನೀರನ್ನು ರಾಮನಗರಕ್ಕೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ತುಮಕೂರಿಗೆ ನೀರಿನ ಸಮಸ್ಯೆ ಎದುರಾಗಲಿದೆ. ತೆರೆದ ನಾಲೆ ಮೂಲಕ ನೀರನ್ನು ರಾಮನಗರಕ್ಕೆ ಹರಿಸಲಿ ಎಂಬುದು ತುಮಕೂರಿನ ವಾದ. ಆದರೆ ತೆರೆದ ನಾಲೆಯಲ್ಲಿ ಈ ವರೆಗೂ ಹನಿ ನೀರು ಹರಿದಿಲ್ಲ. ತುಮಕೂರೆ ಇಡೀ ನೀರನ್ನು ಬಳಸಿಕೊಳ್ಳುತ್ತದೆ. ನಮಗೆ ಕೃಷಿ ಉದ್ದೇಶಕ್ಕೆ ನೀರು ಬೇಕಿಲ್ಲ. ಕುಡಿಯಲಷ್ಟೆ ನೀರು ಕೊಡಿ ಸಾಕು. ರಾಜ್ಯ ಸರಕಾರ ನಿಗದಿಪಡಿಸಿದ ನೀರು ನೀಡಿದರೆ ಸಾಕು. ಹೇಮಾವತಿ ತುಮಕೂರಿಗೆ ಮಾತ್ರವೇ ಸೀಮಿತವಲ್ಲ. ರಾಮನಗರಕ್ಕೆ ನೀರು ಬೇಕಿಲ್ಲ. ಮಾಗಡಿಗಷ್ಟೆ ಸಾಕು ಎನ್ನುವುದು ರಾಮನಗರದ ವಾದ.