
ಚಿಕ್ಕಮಗಳೂರು: ಕಾಫಿನಾಡು ಎಂದೇ ಖ್ಯಾತವಾದ ಚಿಕ್ಕಮಗಳೂರು ತನ್ನ ಪ್ರಕೃತಿ ಸೌಂದರ್ಯದ ಜೊತೆಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಕೇಂದ್ರವಾಗಿಯೂ ಹೆಸರು ವಾಸಿಯಾಗಿದೆ. ಈ ಐತಿಹಾಸಿಕ ನೆಲದಲ್ಲಿ ರಾಜ್ಯಮಟ್ಟದ ಪ್ರಥಮ ಜೈನ ಸಾಹಿತ್ಯ ಸಮ್ಮೇಳನವು ಕಳಸ ಪಟ್ಟಣದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸಮ್ಮೇಳನವು ಜೈನ ಧರ್ಮದ ಸಾಹಿತ್ಯಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಐತಿಹಾಸಿಕ ಕಾರ್ಯಕ್ರಮವಾಗಿ ಗುರುತಿಸಲ್ಪಟ್ಟಿತು.

j3tvkannada
ಕಳಸದ ಚಂದ್ರನಾಥ ಸ್ವಾಮಿ ಬಸದಿ ಜೀರ್ಣೋದ್ಧಾರ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ನ ಸಹಯೋಗದೊಂದಿಗೆ ಆಯೋಜಿತವಾದ ಈ ಸಮ್ಮೇಳನವು, ಡಿ. ಶ್ರೀವರ್ಮ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಾವಿರಾರು ಜನರ ಸಮ್ಮುಖದಲ್ಲಿ ಚಂದ್ರನಾಥ ಬಸದಿಯ ಪಂಚ ಕಲ್ಯಾಣದ ಸನ್ನಿವೇಶದಲ್ಲಿ ಈ ಕಾರ್ಯಕ್ರಮ ಆರಂಭಗೊಂಡಿತು. ಕರ್ನಾಟಕ ಸಾಹಿತ್ಯ ಪರಿಷತ್ನ ಅಧ್ಯಕ್ಷ ನಾಡೋಜ ಮಹೇಶ್ ಜೋಷಿಯವರು, ದಕ್ಷಿಣ ಕಾಶಿ ಎಂದೇ ಖ್ಯಾತವಾದ ಕಳಸದ ಪವಿತ್ರ ಭೂಮಿಯಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಸಂತಸದಾಯಕ, ಎಂದು ಹೇಳಿದರು.
ಸಮ್ಮೇಳನ ಅಧ್ಯಕ್ಷ ಡಿ. ಶ್ರೀವರ್ಮ ಹೆಗ್ಗಡೆಯವರು ಜೈನ ಧರ್ಮದ ತೀರ್ಥಂಕರ ಮಹಾವೀರ, ಧರ್ಮಚಕ್ರ ಶ್ರೀ ವಿಹಾರ, ಸಮಾಧಿ ಮರಣ ಮುಂತಾದ ಕೃತಿಗಳ ರಚನೆಯಿಂದ ಜೈನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಗಾಗಿ 1991ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯವು ಗೌರವ ಪದವಿಯನ್ನು ನೀಡಿತ್ತು. ಈ ಸಮ್ಮೇಳನದಲ್ಲಿ ಜೈನ ಧರ್ಮದ ಸಾಹಿತ್ಯ ಸಂಪತ್ತನ್ನು ಚರ್ಚಿಸಲಾಯಿತು, ಜೊತೆಗೆ ಮೂವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಮತ್ತು 18 ಜನರಿಗೆ ಕನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಮ್ಮೇಳನವು ಜೈನ ಸಾಹಿತ್ಯದ ಶ್ರೀಮಂತಿಕೆಯನ್ನು ಯುವ ಜನಾಂಗಕ್ಕೆ ತಿಳಿಸುವ ಗುರಿಯನ್ನು ಹೊಂದಿತ್ತು. ಜೈನ ಧರ್ಮದ ತತ್ತ್ವಗಳಾದ ಅಹಿಂಸೆ, ಸತ್ಯ, ಶಾಂತಿಯ ಸಂದೇಶವನ್ನು ಸಾಹಿತ್ಯದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನವು ಯಶಸ್ವಿಯಾಯಿತು. ಕಾಫಿನಾಡಿನ ಈ ಐತಿಹಾಸಿಕ ಕಾರ್ಯಕ್ರಮವು ಜೈನ ಸಮುದಾಯದಲ್ಲಿ ಉತ್ಸಾಹ ಮತ್ತು ಸಂತಸವನ್ನು ತಂದಿದೆ.