ಕಲಬುರಗಿ: ನಮ್ಮ ದೇಶವನ್ನು ಅನೇಕ ರಾಜಮನೆತನಗಳು ಆಳ್ವಿಕೆ ಮಾಡಿವೆ. ಅದರಲ್ಲಿ ಕೆಲವು ಸಂಸ್ಥಾನಗಳು ಈಗಿನ ಪ್ರಜಾಪ್ರಭುತ್ವ ಸರ್ಕಾರ ಮಾಡುತ್ತಿರುವ ಕಾರ್ಯಗಳನ್ನು ನೂರಾರು ವರ್ಷಗಳ ಹಿಂದೆಯೇ ಮಾಡಿತೋರಿಸಿವೆ. ಅದರಲ್ಲಿ ಮೈಸೂರು ಒಡೆಯರ್ ಸಂಸ್ಥಾನವು ಪ್ರಮುಖವಾಗಿದೆ. ಈ ಸಂಸ್ಥಾನದಲ್ಲಿ ಅಭಿವೃದ್ಧಿ ಹೊಳೆಯನ್ನು ಹರಿಸಿದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಅಭಿವೃದ್ಧಿಯ ಹರಿಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.

j3tvkannada
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ರಿಪಬ್ಲಿಕನ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡಿದ ಅವರು ಒಡೆಯರ್ ಅವರ ಆಡಳಿತಾವಧಿಯನ್ನು ಸುವರ್ಣಯುಗವೆಂದು ಕರೆಯುತ್ತಾರೆ.
ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಶಿವನ ಸಮುದ್ರದಲ್ಲಿ ಜಲವಿದ್ಯುತ್ ಯೋಜನೆ ಆರಂಭ, ಮಿಂಟೋ ಕಣ್ಣಿನ ಆಸ್ಪತ್ರೆ ಸ್ಥಾಪನೆ, ವಿದ್ಯುತ್ ದೀಪದ ಅಳವಡಿಕೆ, ವಾಣಿ ವಿಲಾಸ ಸಾಗರ ಆಣೆಕಟ್ಟಿನ ನಿರ್ಮಾಣ, ಮೈಸೂರಿನ ವಿಧಾನ ಪರಿಷತ್ತಿನ ರಚನೆ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತುಎಸ್.ಬಿ.ಎಂ ಸ್ಥಾಪನೆ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ರೇಲ್ವೆ ಸಾರಿಗೆ ಪ್ರಾರಂಭ ಹೀಗೆ ಅವರ ಆಡಳಿತಾವಧಿಯಲ್ಲಿನ ಸಾಧನೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ವಿಶ್ವೇಶ್ವರಯ್ಯನವರು ಇವರ ಅವಧಿಯಲ್ಲಿ ದಿವಾನರಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕ.ಸಾ.ಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪಾ ಎಸ್.ಬಿರಾದಾರ, ಅಕಾಡೆಮಿಯ ನಿರ್ದೇಶಕ ದತ್ತು ಹಡಪದ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.