
ಕರ್ನಾಟಕ: 1 ವಾರಕ್ಕೂ ಹೆಚ್ಚು ಕಾಲ ಭಾರೀ ಅಬ್ಬರಿಸಿದ ಮುಂಗಾರು ಮಳೆ ಕಳೆದ ವೀಕೆಂಡ್ನಿಂದ ವಿರಾಮದ ಮೂಡ್ನಲ್ಲಿದೆ. ವಾಯುಭಾರ ಕುಸಿತದ ಆರ್ಭಟವೂ ತಣ್ಣಗಾಗಿದೆ. ಸದ್ಯ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಮಳೆಪೀಡಿತ ಪ್ರದೇಶಗಳು ಸಹಜ ಸ್ಥಿತಿಗೆ ಬಂದಿದ್ದು ಕೊಡಗಿನಲ್ಲಿ ಶಾಲೆ ಇಂದಿನಿಂದ ಆರಂಭ ಆಗಲಿದೆ. ಆದರೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗು ಉತ್ತರ ಕನ್ನಡಕ್ಕೆ ಜೂನ್ 3 ರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ, ಉಳಿದ ಜಿಲ್ಲೆಗಳಲ್ಲಿ ಮೋಡ ಹಾಗೂ ಆಗಾಗ್ಗೆ ಬಿಸಿಲಿನ ವಾತಾವರಣ ಇರಲಿದೆ. ಇನ್ನು ಜೂನ್ 4 ಹಾಗೂ 5 ರಂದು ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ಚಿಕ್ಕಮಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಕೊಡಗು, ಬಳ್ಳಾರಿ, ಗದಗ, ಕೊಪ್ಪಳ, ರಾಯಚೂರು, ಬೀದರ್, ಕಲಬುರ್ಗಿ, ಯಾದಗಿರಿ, ಜಿಲ್ಲೆಗಳಿಗೆ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು ಎರಡು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಜಿಲ್ಲೆಯ ಹಲವೆಡೆ ಭಾನುವಾರ ಮಳೆ ಕಡಿಮೆಯಾಗಿದ್ದು ಸಕಲೇಶಪುರ, ಆಲೂರು ಭಾಗದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಯ ಜೀವನದಿ ಹೇಮಾವತಿ ನದಿಗೆ ಒಳಹರಿವಿನಲ್ಲಿ ಇಳಿಕೆ ಕಂಡು ಬಂದಿದೆ. ಹಾಸನ ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯವು 37.103 ಟಿ.ಎಂ.ಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಜಲಾಶಯದಲ್ಲಿ ಸದ್ಯ 23.745 ಟಿಎಂಸಿ ನೀರು ಸಂಗ್ರಹವಾಗಿದೆ. ಭಾನುವಾರ ಸುಮಾರು 2489 ಕ್ಯೂಸೆಕ್ ಒಳಹರಿವಿದ್ದು, ನದಿಯಿಂದ 1450 ಕ್ಯೂಸೆಕ್ ಹೊರ ಬಿಡಲಾಗಿದೆ.
ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳಿದ್ದು, ಪ್ರಸ್ತುತ ನೀರಿನ ಮಟ್ಟ 2905.97 ಅಡಿಗಳಾಗಿದೆ. ಕೇರಳದಲ್ಲಿ ತೀವ್ರ ಮಳೆ ಕಡಿಮೆಯಾಗಿದೆ. ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾನ್ಸೂನ್ ಆರಂಭವಾದ ಎಂಟು ದಿನಗಳಲ್ಲಿ ಕೇರಳದಲ್ಲಿ ಶೇ. 440ರಷ್ಟು ಹೆಚ್ಚಿನ ಮಳೆಯಾಗಿದೆ. ಆಲಪ್ಪುಯ, ಎರ್ನಾಕುಳಂ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಮುಂದುವರಿದಿದೆ.

ನೈಋುತ್ಯ ಮಾನ್ಸೂನ್ನ ಭಾಗವಾಗಿ ಮಳೆ ಮುಂದುವರಿಯುತ್ತದೆ. ಪ್ರತ್ಯೇಕ ಸ್ಥಳಗಳಲ್ಲಿ ಮಳೆ ತೀವ್ರಗೊಳ್ಳಬಹುದು. ಆದರೆ ಕಳೆದ ಕೆಲವು ದಿನಗಳಂತೆ ತೀವ್ರ ಮತ್ತು ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇಲ್ಲ. ನೈಋುತ್ಯ ಗಾಳಿಯ ಪರಿಣಾಮ ಕಡಿಮೆಯಾಗಿರುವುದರಿಂದ ಮಳೆ ಕಡಿಮೆಯಾಗುತ್ತಿದೆ. ಮೇ 24 ರಂದು ಕೇರಳದಲ್ಲಿ ಮುಂಗಾರು ಆರಂಭವಾಯಿತು. ಈ ತನಕ ಅಂಕಿ ಅಂಶಗಳ ಪ್ರಕಾರ ಎಂಟು ದಿನಗಳಲ್ಲಿ ಕೇರಳದಲ್ಲಿ ಶೇ. 440.1ರಷ್ಟು ಮಳೆಯಾಗಿದೆ. ಈ ಅವಧಿಯಲ್ಲಿ ಸಾಮಾನ್ಯ ಮಳೆಯ ಶೇ.81.5ರಷ್ಟು ಮಳೆಯಾಗುವ ನಿರೀಕ್ಷೆ ಇದೆ. ಕಣ್ಣೂರಿನಲ್ಲಿ 684.6 ಮಿ.ಮೀ. ಮಳೆಯಾಗಿದೆ.
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಆಲಪ್ಪುಳ ಮತ್ತು ಕೊಲ್ಲಂನಲ್ಲಿ ಸ್ವಲ್ಪ ಕಡಿಮೆ ಮಳೆಯಾಗಿದೆ. ಮುಂಗಾರು ಅವಧಿಗಿಂತ ಮೊದಲೇ ಆರಂಭವಾದರೂ. ಜೂ. 1ರಿಂದ ಬರುವ ಮಳೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಈ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಕಡಿಮೆ. ಕಣ್ಣೂರು ಮತ್ತು ಕಾಸರಗೋಡಿನ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗಬಹುದು. ಒಳನಾಡಿನ ಇತರೆಡೆ ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿನ ಬದಲಾವಣೆಗಳನ್ನು ಅವಲಂಬಿಸಿ ವಿರಾಮದ ನಂತರ ಮತ್ತೆ ಮಳೆ ಜೋರಾಗಿರುತ್ತದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.