
ಮಂಡ್ಯ(ನಾಗಮಂಗಲ): ನಿರ್ಮಾಣ ಹಂತದಲ್ಲಿದ್ದ ಮಹಾದ್ವಾರ ಕುಸಿದು ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಒಬ್ಬ ಕೂಲಿ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ ಸಾವನ್ನಪ್ಪಿ ನಾಲ್ಕು ಜನ ಗಾಯಗೊಂಡಿರುವ ಘಟನೆ ತಾಲೂಕಿನ ದೇವರಹಳ್ಳಿ ಶ್ರೀ ತಪಸೀರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಶರಣ್ (27) ಸಾವನ್ನಪ್ಪಿರುವ ನತದೃಷ್ಟ ಕೂಲಿ ಕಾರ್ಮಿಕ. ಗಾಯಾಳುಗಳ ಹೆಸರು ತಿಳಿದು ಬಂದಿಲ್ಲ.

j3tvkannada
ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀತಪಸೀರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ದಾನಿಗಳ ನೆರವಿನಿಂದ 20 ಅಡಿ ಎತ್ತರ 35 ಅಡಿ ಉದ್ದದ ಮಹಾದ್ವಾರ ನಿರ್ಮಾಣ ಮಾಡಿಸಲಾಗುತ್ತಿತ್ತು. ಮಹಾದ್ವಾರದ ಮೇಲ್ಚಾವಣಿಗೆ ಕಾಂಕ್ರೀಟ್ ಹಾಕುವ ಸಲುವಾಗಿ ಸೆಂಟ್ರಿಂಗ್ ಹೊಡೆದು ಕಬ್ಬಿಣ ಕಟ್ಟಿ ಕಾಂಕ್ರೀಟ್ ಹಾಕುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸೆಂಟ್ರಿಂಗ್ ಮರಗಳನ್ನು ಸರಿಯಾಗಿ ಲಾಕ್ ಮಾಡದಿರುವುದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.
ಸೆಂಟ್ರಿಂಗ್ ಸಹಿತ ನಿರ್ಮಾಣ ಹಂತದಲ್ಲಿದ್ದ ಮಹಾದ್ವಾರ ದಿಢೀರನೇ ಕುಸಿದ ಪರಿಣಾಮ ಕಾಂಕ್ರೀಟ್ ಹಾಕುತ್ತಿದ್ದ ನಾಲ್ಕು ಮಂದಿ ಕೂಲಿ ಕಾರ್ಮಿಕರು ಕಬ್ಬಿಣದ ಸರಳು ಮತ್ತು ಸೆಂಟ್ರಿಂಗ್ ಮಧ್ಯೆ ಸಿಲುಕಿ ಗಾಯಗೊಂಡರೆ, ಶರಣ್ ಹೊರ ಬರಲಾರದೆ ಗಂಭೀರವಾಗಿ ಗಾಯ ಗೊಂಡಿದ್ದನು.
ಬಳಿಕ ಜೆ.ಸಿ.ಬಿ ಯಂತ್ರದ ಮೂಲಕ ಸಿಲುಕಿಕೊಂಡಿದ್ದ ಶರಣ್ನನ್ನು ಹೊರ ತೆಗೆದು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ನಾಲ್ವರು ಗಾಯಾಳುಗಳ ಪೈಕಿ ಒಬ್ಬ ಕೂಲಿ ಕಾರ್ಮಿಕನಿಗೆ ಕಾಲು ಮುರಿದಿದ್ದು ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಸುದ್ದಿ ತಿಳಿಯುತ್ತಿದ್ದಂತೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ರಾಜೇಂದ್ರ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು. ಶರಣ್ ಮೃತದೇಹವನ್ನು ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಮೃತ ಶರಣ್ ವಾರಸುದಾರರು ದೂರದ ಕಲಬುರಗಿ ಜಿಲ್ಲೆಯಿಂದ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದೆ.