
ಕಲಬುರಗಿ: ಜಿಲ್ಲೆಯ ಕರುಣೇಶ್ವರ ನಗರದಲ್ಲಿರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ, ಪ್ರಜಾತಂತ್ರ ವ್ಯವಸ್ಥೆಯ ಕಾರ್ಯಶೈಲಿ ಹಾಗೂ ಪ್ರಜೆಗಳಿಗೆ ಇರಬೇಕಾದ ಹೊಣೆಗಾರಿಕೆ ಕುರಿತು ಮನದಟ್ಟು ಮಾಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಚುನಾವಣೆ ಮೂಲಕ ನಡೆಸಲಾಗುವ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ.

ಅದರಲ್ಲೂ ಮುಖ್ಯವಾಗಿ, ಸಾಮೂಹಿಕ ಹೊಣೆಗಾರಿಕೆಯನ್ನು ನಿಭಾಯಿಸುವ ರೀತಿ, ತಮ್ಮ ಸಹಪಾಠಿಗಳೊಂದಿಗೆ ವ್ಯವಹರಿಸುವ ಧಾಟಿಯಿಂದ ಹಿಡಿದು,ಶಾಲೆಯ ಸಮಗ್ರ ಕಾರ್ಯಶೈಲಿ ಹಾಗೂ ಅಭಿವೃದ್ಧಿಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಅತ್ಯಂತ ಮಹತ್ವದ ಹೊಣೆಗಾರಿಕೆ ನಿಭಾಯಿಸಲಿದ್ದಾರೆ. ಇದರಿಂದಾಗಿ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ರೂಪುಗೊಳ್ಳಲು ಶಾಲಾ ಹಂತದ ಇಂತಹ ಚುನಾವಣೆಗಳು ಹೆಚ್ಚು ಪ್ರಯೋಜನಕಾರಿ ಎಂದರು.
ಶಿಕ್ಷಕರು ಗುಣಮಟ್ಟದ ಬೋಧನೆಯ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ರೂಪಿಸಬಹುದಾದರೂ, ಸಂವಹನ ಕಲೆಯನ್ನು ವಿದ್ಯಾರ್ಥಿಗಳೇ
ರೂಢಿಸಿಕೊಳ್ಳಬೇಕಾಗುತ್ತದೆ. ಉತ್ತಮವಾಗಿ ಸಂವಹನ ನಡೆಸಬಲ್ಲ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಜನಪ್ರತಿನಿಧಿಗಳಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬಹುದಾಗಿದೆ ಎಂದರು.
ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪಠ್ಯ ಜ್ಞಾನದ ಜೊತೆಗೆ ವ್ಯವಹಾರ ಜ್ಞಾನಕ್ಕೂ ವಿದ್ಯಾರ್ಥಿಗಳು ಮಹತ್ವ ನೀಡುವುದನ್ನು ಕಲಿಯಬೇಕು. ಜೊತೆಗೆ, ಮೊನಚಾದ ಪ್ರತಿಭೆಗೆ ಒತ್ತು ನೀಡುವುದರ ಜೊತೆಗೆ ನಾಯಕತ್ವ
ಗುಣಗಳನ್ನು ರೂಢಿಸಿಕೊಳ್ಳುವುದರಿಂದ ವ್ಯವಸ್ಥೆಯ ಸುಧಾರಣೆಯಲ್ಲಿ ಪ್ರಮುಖವಾದ ಪಾತ್ರ ವಹಿಸಬಹುದಾಗಿದೆ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ, ಪಠ್ಯೇತರ ಚಟುವಟಿಕೆಗಳ ಉಸ್ತುವಾರಿ ಸುಮಾ ಭಗವತಿ ಅವರು 12 ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅಧಿಕಾರದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ವಿವೇಕಾನಂದ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಸುವರ್ಣಾ ಭಗವತಿ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮುಖ್ಯ ಗುರು ಅಂಬಿಕಾರೆಡ್ಡಿ, ಸಮನ್ವಯಾಧಿಕಾರಿಗಳಾದ ನಿಖಿಲ್ ಪಾಟೀಲ್, ಸುಷ್ಮಾ ಭಗವತಿ, ವಿದ್ಯಾರ್ಥಿ ನಾಯಕರಾದ ವಿಜಯಕುಮಾರ ಹಾಗೂ ಸಿಂಚನಾ ರಾಘವೇಂದ್ರ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ಶ್ರೇಯಸ್ ರೆಡ್ಡಿ ಸ್ವಾಗತಿಸಿದರೆ, ಪ್ರಿಯಾಂಕಾ ನಿರೂಪಿಸಿದರು, ವೈಷ್ಣವಿ ವಂದಿಸಿದರು.