
ಮೈಸೂರು: ಜಿಲ್ಲೆಯನ್ನು ಭಾರತದ ಮೊದಲ ಯೋಗ ಜಿಲ್ಲೆಯಾಗಿ ಘೋಷಿಸಬೇಕೆಂದು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದೆ. ಇಂಥದ್ದೊಂದು ವಿಶೇಷ ಮನ್ನಣೆಯನ್ನು ಆ ಜಿಲ್ಲೆಗೆ ತರುವ ಮೂಲಕ ಜಿಲ್ಲೆಯ ಜನರು ಹೆಚ್ಚಾಗಿ ಯೋಗವನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಲು ಕರ್ನಾಟಕ ರಾಜ್ಯ ನಿರ್ಧರಿಸಿದೆ.

ಕರ್ನಾಟಕ ಸರ್ಕಾರ ಯಾಕೆ ಮೈಸೂರನಲ್ಲೇ ಯೋಗ ಜಿಲ್ಲೆಯೆಂದು ಘೋಷಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದೆ ಎಂಬುದಕ್ಕೆ ಪ್ರಮುಖ ಕಾರಣಗಳು ಇವೆ. ಮೈಸೂರನ್ನು ದೇಶದ ಯೋಗ ರಾಜಧಾನಿ ಎಂದು ಹೆಸರಿಸಲು ಇರುವ ಪ್ರಮುಖ ಕಾರಣವೇನೆಂದರೆ, ಮೈಸೂರಿಗೆ ಇರುವ ಪ್ರಾಚೀನತೆ ಹಾಗೂ ಅದರ ಸಾಂಸ್ಕೃತಿಕ ಮೌಲ್ಯ. 11ನೇ ಮತ್ತು 12ನೇ ಶತಮಾನಗಳ ಹೊಯ್ಸಳ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ನಗರ, ಗಂಗ, ಚಾಲುಕ್ಯ, ಚೋಳ ಮತ್ತು ಹೊಯ್ಸಳ ರಾಜವಂಶಗಳ ಆಳ್ವಿಕೆಯನ್ನು ನೋಡಿದೆ.

3tvkannada.in
ಹೊಯ್ಸಳರು, ಚಾಲುಕ್ಯರು, ಚೋಳರು, ಹೈದರಾಲಿ – ಟಿಪ್ಪು, ಆನಂತರದಲ್ಲಿ ಯದುವಂಶದ ದೊರೆಗಳಾದ ಒಡೆಯರ್ ರಾಜಮನೆತನಗಳ ಆಳ್ವಿಕೆಯಲ್ಲಿ ಮೈಸೂರು ಸಾಂಸ್ಕೃತಿಕವಾಗಿ, ರಾಜಕೀಯವಾಗಿ ವಿಶ್ವಪ್ರಸಿದ್ಧಿಯನ್ನು ಪಡೆದಿದೆ. ಅದರಲ್ಲೂ ಮುಖ್ಯವಾಗಿ ಒಡೆಯರ್ ವಂಶಾಡಳಿತದಲ್ಲಿ ಮೈಸೂರು ಶ್ರೀಮಂತವಾಗಿ, ಅಭಿವೃದ್ಧಿಯ ಸುವರ್ಣ ಪಥದಲ್ಲಿ ಸಾಗಿ ಬಂದಿದೆ. ಯದುವಂಶದ ಅರಸರು ಯೋಗ ಶಿಕ್ಷಣಕ್ಕೆ ರಾಜಾಶ್ರಯ ನೀಡಿದ್ದಕ್ಕೆ ಅನೇಕ ದಾಖಲೆಗಳಿವೆ.
ಶ್ರೀ ಕೃಷ್ಣರಾಜ ವಾಡಿಯಾರ್ ರವರ ‘ಶೃತತ್ತ್ವನಿಧಿ’ ಎಂಬ ಗ್ರಂಥದಲ್ಲಿ 122 ಯೋಗಾಸನಗಳ ಚಿತ್ರಣವಿದೆ ಎಂದು ವಿದ್ವಾಂಸರು ಹೇಳುತ್ತಾರೆ. 1930ರಲ್ಲಿ ಮೈಸೂರು ಅರಮನೆ ಯೋಗ ಶಾಲೆಯನ್ನು ಸ್ಥಾಪಿಸಿ ರಾಜ ಕುಟುಂಬ ಮತ್ತು ಸಾರ್ವಜನಿಕರಿಗೆ ಯೋಗ ಕಲಿಸುತ್ತಿತ್ತು. ತಿರುಮಲೈ ಕೃಷ್ಣಮಾಚಾರ್ಯರು, ಟಿ. ಕೃಷ್ಣಮಾಚಾರ್ಯರು, ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ (ಬಿಕೆಎಸ್) ಅಯ್ಯಂಗಾರ್, ಕೆ. ಪಟ್ಟಾಭಿ ಜೋಯಿಸರಂಥ ಯೋಗ ಗುರುಗಳು ಯೋಗದ ಮೂಲಕ ಮೈಸೂರಿನ ಕೀರ್ತಿ ಪತಾಕೆಯನ್ನು ಇಡೀ ವಿಶ್ವಕ್ಕೇ ಪಸರಿಸಿದ್ದಾರೆ.
ನಮಗೆ ಮೈಸೂರು ಪಾಕ್ ಗೊತ್ತು, ಮೈಸೂರು ಸಿಲ್ಕ್ ಗೊತ್ತು, ಮೈಸೂರು ಮಲ್ಲಿಗೆಯೂ ಗೊತ್ತು. ಆದರೆ, ಮೈಸೂರು ಯೋಗ ಗೊತ್ತಾ? ಹೆಚ್ಚಿನವರಿಗೆ ಇದು ಗೊತ್ತಿಲ್ಲ. ಇದು ಮೈಸೂರಿನ ಯೋಗ ವಿದ್ವಾಂಸರೇ ರೂಢಿಸಿಕೊಂಡ, ಜಗತ್ತಿಗೆ ಅದರ ವಿಶೇಷತೆಯನ್ನು ಮನದಟ್ಟು ಮಾಡಿದ ವಿಶೇಷವಾದ ವಿಧಾನ. ಅದೇ ಅಷ್ಟಾಂಗ ಯೋಗ. ಈ ಯೋಗ ವಿಧಾನವನ್ನು ಶ್ರೀ ಕೃಷ್ಣ ಪಟ್ಟಾಭಿ ಜೋಯಿಸರು ಮೊದಲ ಬಾರಿಗೆ ರೂಢಿಗೆ ತಂದರು. ಅವರು, 20ನೇ ಶತಮಾನದ ಮಹಾನ್ ಯೋಗ ಪಟುಗಳಲ್ಲೊಬ್ಬರಾದ ಟಿ. ಕೃಷ್ಣಮಾಚಾರ್ಯರ ಶಿಷ್ಯ. ಶ್ರೀಕೃ,ಷ್ಣ ಪಟ್ಟಾಭಿಯವರು ರೂಪಿಸಿದ ಅಷ್ಟಾಂಗ ಯೋಗ ಇಂದು ಜಗತ್ತಿನಾದ್ಯಂತ ರೂಢಿಯಲ್ಲಿದೆ.

ಹಾಗಾಗಿಯೇ, ಮೈಸೂರನ್ನು ಅಷ್ಟಾಂಗ ಯೋಗದ ರಾಜಧಾನಿ ಎಂದು ಕರೆಯಲಾಗುತ್ತಿದೆ. ಪ್ರತಿ ವರ್ಷ, ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಯೋಗ ಕಲಿಯಲು ಬರುತ್ತಾರೆಂದರೆ ನಿಮಗೆ ಅಚ್ಚರಿಯಾಗಬಹುದು. ಅವರಿಗೆ ಯೋಗ ಹೇಳಿ ಕೊಡಲು ಮೈಸೂರಿನಲ್ಲಿ ಯೋಗ ತರಬೇತಿ ಕೇಂದ್ರಗಳು ಎಷ್ಟಿವೆ ಗೊತ್ತೇ? ಹೌದು, ಆರು ನೂರಕ್ಕೂ ಹೆಚ್ಚು ಯೋಗ ಕೇಂದ್ರಗಳು ಇವೆ. ಯೋಗಾರ್ಥಿಗಳಾಗಿ ಬರುವ ಅಭ್ಯಾಗತರಿಗೆ ಇಲ್ಲಿ ಯೋಗ ವಿದ್ಯಾವಂತರನ್ನಾಗಿಸಲು ಸಜ್ಜಾಗಿವೆ. ಮಾರ್ಚ್ ನಿಂದ ಜುಲೈ ತಿಂಗಳವರೆಗೆ ಈ ಯೋಗ ಕೇಂದ್ರಗಳಲ್ಲಿ ಯೋಗ ಶಿಕ್ಷಣವು ಉತ್ತುಂಗದಲ್ಲಿರುತ್ತದೆ.
ಮೈಸೂರು ನಗರವೊಂದರಲ್ಲೇ, 600 ಯೋಗ ಕೇಂದ್ರಗಳು, 22 ಆಯುಷ್ಮಾನ್ ಆರೋಗ್ಯ ಮಂದಿರಗಳು, ನ್ಯಾಚುರೋಪಥಿ ಕಾಲೇಜುಗಳು, ಪಂಚಕರ್ಮ ಆಯುರ್ವೇದ ಸೇವಾ ಕೇಂದ್ರಗಳಿವೆ. ನ್ಯಾಚುರೋಪತಿ, ಪಂಚಕರ್ಮ ಕೇಂದ್ರಗಳಲ್ಲಿಯೂ ಯೋಗ ಹೇಳಿ ಕೊಡಲಾಗುತ್ತದೆ.
ಮೈಸೂರಿನ ಗೋಕುಲಂ, ಯಾದವಗಿರಿ, ಜಯಲಕ್ಷ್ಮಿ ಪುರಂ ಪ್ರದೇಶಗಳು ಯೋಗ ಅಭ್ಯಾಸದ ಪ್ರಮುಖ ತಾಣಗಳು. ಅಷ್ಟೇ ಅಲ್ಲ, ಜಿಲ್ಲೆಯ ಶೇ. 50ಕ್ಕಿಂತ ಹೆಚ್ಚು ಮನೆಗಳಲ್ಲಿ ಆ ಮನೆಯ ಸದಸ್ಯರಲ್ಲಿ ಕನಿಷ್ಟ ಒಬ್ಬರಾದರೂ ಯೋಗಾಭ್ಯಾಸ ಕಲಿತಿರುತ್ತಾರೆ ಹಾಗೂ ನಿತ್ಯವೂ ಅದನ್ನು ಅಭ್ಯಸಿಸುತ್ತಾರೆ. ವರ್ಷಕ್ಕೆ 20 ಸಾವಿರ ವಿದೇಶಿ ವಿದ್ಯಾರ್ಥಿಗಳು ಇಲ್ಲಿಗೆ ಯೋಗ ಕಲಿಯಲು ಬರುತ್ತಾರೆ. ಗೋಕುಲಂ, ಯಾದವಗಿರಿ, ಜಯಲಕ್ಷ್ಮೀಪುರಂನಲ್ಲಿರುವ ಯೋಗ ತರಗತಿಗಳು ಹೌಸ್ ಫುಲ್ ಆಗಿರುತ್ತವೆ. ಇವರಲ್ಲಿ ವರ್ಷಕ್ಕೆ ಏನಿಲ್ಲವೆಂದರೂ 8,000 ಮಂದಿ ಯೋಗ ಶಿಕ್ಷಕರಾಗುವ ಬಯಕೆಯನ್ನು ಹೊಂದಿರುತ್ತಾರೆ. ಮೈಸೂರಿಗೆ ಬಂದು ಯೋಗ ಕಲಿತು, ಪ್ರಮಾಣಪತ್ರವನ್ನು ಪಡೆದು ತಮ್ಮ ದೇಶಕ್ಕೆ ಹಿಂದಿರುಗಿದ ನಂತರ ಯೋಗ ಶಿಕ್ಷಕರಾಗಿ ಅನೇಕರು ತೊಡಗಿಸಿಕೊಂಡಿದ್ದೂ ಉಂಟು.