
ದಾವಣಗೆರೆ: ಈಗಂತೂ ಯುಕರಿಗೆ ಬೈಕ್ ಹತ್ತಿದ ತಕ್ಷಣ ಅದೇನು ಶೋಕಿನೋ ದಿಮಾಕೋ ಒಂದೂ ಗೊತ್ತಾಗುತ್ತಿಲ್ಲ. ಟ್ರಾಪಿಕ್ ರೂಲ್ಸ್ ಮರೆತೇ ಹೋಗುತ್ತೆ. ಇಲ್ಲೊಬ್ಬ ಸವಾರ ರೂಲ್ಸ್ ಬ್ರೇಕ್ ಮಾಡಿದ್ದೂ ಅಲ್ಲದೆ ಡಿ ಸಿ ಗೆ ಅವಾಜ್ ಹಾಕಿದ್ದಾನೆ. ಎಂದಿನಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಗುರುವಾರ ಬೆಳಗ್ಗೆ ರಿಂಗ್ ರಸ್ತೆಯಲ್ಲಿ ಸೈಕ್ಲಿಂಗ್ ಹೋಗುತ್ತಿದ್ದ ವೇಳೆ, ಹಿಮೋಫಿಲಿಯಾ ಸೊಸೈಟಿ ಎದುರಿಗೆ ನಿಯಮ ಉಲ್ಲಂಘಿಸಿ ಎದುರಿನಿಂದ ಬೈಕ್ನಲ್ಲಿ ಬಂದ ಸವಾರನಿಗೆ ಡಿ.ಸಿ ನಿಯಮ ಉಲ್ಲಂಘಿಸಿ ಬೈಕ್ ಓಡಿಸಬಾರದು ಎಂದು ಕಿವಿ ಮಾತು ಹೇಳಲು ಮುಂದಾದಾಗಿದ್ದಾರೆ.
ಬೈಕ್ ಸವಾರ ಡಿಸಿಯವರನ್ನು, ಅದನ್ನು ಕೇಳೋಕೆ ನೀನ್ಯಾವೋನೋ ಎಂದು ಪ್ರಶ್ನಿಸಿದ ಪ್ರಸಂಗ ನಡೆದ ಬಗ್ಗೆ ಸ್ವತಃ ಜಿಲ್ಲಾಧಿಕಾರಿಗಳೇ ಮಾಧ್ಯಮದ ಎದುರು ಹೇಳಿಕೊಂಡರು. ಇಂಥ ಬೇಜವಾಬ್ದಾರಿ ವರ್ತನೆಗಳೇ ರಸ್ತೆ ಅಪಘಾತಕ್ಕೆ ಕಾರಣವಾಗಿದೆ. ಇಂದು ನನ್ನ ಎದುರಿಗೆ ನಿಯಮ ಬಾಹಿರವಾಗಿ ಬಂದ ವ್ಯಕ್ತಿಯ ಪೋಟೋ ತೆಗೆದು, ಎಸ್ಪಿಗೆ ಹಾಕಿ ದೂರು ದಾಖಲಿಸುವಂತೆ ತಿಳಿಸಿದ್ದೇನೆ ಎಂದರು.

j3tvkannada.in
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕಮುಖ ರಸ್ತೆಗಳಲ್ಲಿ ಎದುರಿನಿಂದ ವಾಹನಗಳು ಬಂದರೆ, ರಸ್ತೆ ಅಫಘಾತ ಸಂಭವಿಸುವ ಸಾಧ್ಯತೆ ಇದೆ. ಈ ಬಗ್ಗೆ ವಾಹನ ಸವಾರರು ಎಚ್ಚೆತ್ತುಕೊಳ್ಳಬೇಕಾದರೆ ಗರಿಷ್ಠ ದಂಡದ ಮೂಲಕ ಬಿಸಿ ಮುಟ್ಟಿಸಲಾಗುವುದು ಎಂದರು. ನಿಗದಿತ ಒಮ್ಮುಖ ರಸ್ತೆಗಳಲ್ಲಿ ಎದುರಿನಿಂದ ವಾಹನ ಚಲಾಯಿಸಿಕೊಂಡು ಬರುವ ಸವಾರರಿಗೆ ಗರಿಷ್ಠ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.
ರಸ್ತೆ ಸುರಕ್ಷತಾ ಸಭೆ ನಡೆಸಿ ಬಿಗಿ ಕ್ರಮ ಕೈಗೊಂಡಿರುವ ಕಾರಣ ರಸ್ತೆ ಅಪಘಾತಗಳ ಸಂಖ್ಯೆ ತಗ್ಗಿದೆ. ಕಳೆದ ವರ್ಷಗಳಿಗಿಂತ ಈ ವರ್ಷ ಶೇ.30ರಷ್ಟು ಅಪಘಾತ ಕಡಿಮೆಯಾಗಿದೆ. ರಸ್ತೆಗಳಲ್ಲಿನ ಗುಂಡಿ ಮುಚ್ಚಿಸಲು ಪಾಲಿಕೆ ಕ್ರಮ ವಹಿಸಿದೆ. ಅಲ್ಲದೇ, ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡರ ಸಲಹೆಯಂತೆ ಸಿಗ್ನಲ್ ನಿರ್ವಹಣೆಗಾಗಿ ಬೆಂಗಳೂರಿನಿಂದ ಎಕ್ಸ್ಪರ್ಟ್ ಕನ್ಸಲ್ಟೆನ್ಸಿ ಕರೆಯಿಸಿ ಡಿಪಿಆರ್ ಸಿದ್ಧ ಪಡಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹೆಲ್ಮೆಟ್ ಕಡ್ಡಾಯ ಧರಿಸಬೇಕು
ನಾಗರಿಕರು ಸಹ ಎಚ್ಚರಿಕೆ ಮತ್ತು ಸಾರಿಗೆ ನಿಯಮಗಳ ಪಾಲನೆ ಮಾಡಬೇಕು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರು ಪಿ.ಎಂ.ಜೆ.ಜೆ.ಬಿ.ವೈ ಮಾಡಿಸಿಕೊಳ್ಳಬೇಕು. ಅಕಸ್ಮಾತ್ ಅಪಘಾತದಲ್ಲಿ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ದೊರೆಯಲಿದೆ ಎಂದರು.
ಹಿಟ್ ಆ್ಯಂಡ್ ರನ್
ಈ ಯೋಜನೆಯಡಿ 2022ರ ಏಪ್ರಿಲ್ 1ರಿಂದ 2025ರ ಮೇ 30ರ ವರೆಗೆ ಜಿಲ್ಲೆಯಲ್ಲಿ ಸಂಭವಿಸಿದ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಮೃತಪಟ್ಟಿರುವ 23 ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಹಾಗೂ ಇಬ್ಬರು ಗಾಯಾಳುಗಳಿಗೆ ತಲಾ 50 ಸಾವಿರ ರೂ.ಗಳಂತೆ ಒಟ್ಟು 25 ಜನರಿಗೆ ಪರಿಹಾರ ನೀಡಲಾಗಿದೆ ಎಂದರು. ಗೋಷ್ಠಿಯಲ್ಲಿ ಜಿ.ಪಂ ಸಿ.ಇ.ಒ ಗಿಟ್ಟೆ ಮಾಧವ್ ವಿಠ್ಠಲರಾವ್, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾಆಯುಷ್ ಅಧಿಕಾರಿ ಡಾ.ಯೋಗೇಂದ್ರ, ನಗರ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್ ಇತರರಿದ್ದರು.