
ಬಾಗಲಕೋಟೆ: ಭಾರತೀಯ ಅಂಚೆ ಇಲಾಖೆಯ ಹಲವು ಸೇವೆಗಳು ಈಗ ಆನ್ಲೈನ್ನಲ್ಲಿ ದೊರೆಯಲಿದ್ದು, ಪ್ರಾಯೋಗಿಕವಾಗಿ ಈ ಸೌಲಭ್ಯ ಒದಗಿಸಲು ದೇಶದಲ್ಲೇ ಮೊದಲ ಬಾರಿಗೆ ಬಾಗಲಕೋಟೆ ಮತ್ತು ಮೈಸೂರು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.

j3tvkannada
ಅಂಚೆ ಇಲಾಖೆಯಿಂದ ಹೊಸ ತಂತ್ರಾಂಶ ಅಳವಡಿಸಿ ಸರಕು, ಪತ್ರಗಳ ರವಾನೆಯನ್ನು ಆನ್ಲೈನ್ ಸೌಲಭ್ಯದಡಿ ಒದಗಿಸಲಾಗುತ್ತಿದೆ. ಮೈಸೂರು ವಿಭಾಗ ಹಾಗೂ ಬಾಗಲಕೋಟೆ ವಿಭಾಗಗಳು ಪ್ರಾಯೋಗಿಕವಾಗಿ ಸೌಲಭ್ಯ ಒದಗಿಸಲು ಆಯ್ಕೆಯಾಗಿವೆ. ಈ ವಿಭಾಗಗಳಲ್ಲಿನ ಯಶಸ್ಸು ನೋಡಿಕೊಂಡು ರಾಷ್ಟ್ರಾದ್ಯಂತ ಸೇವೆ ಒದಗಿಸಲು ಇಲಾಖೆ ಯೋಜನೆ ರೂಪಿಸಿದೆ.
ಇಲಾಖೆ ಅಡ್ವಾನ್ಸ್ಡ್ ಪೋಸ್ಟಲ್ ಟೆಕ್ನಾಲಜಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ. ಈ ತಂತ್ರಾಂಶದಡಿ ಹೊಸ ಸೌಲಭ್ಯ ಒದಗಿಸಲಾಗುತ್ತಿದೆ. ಈಗ ಬುಕ್ಕಿಂಗ್ ಹಾಗೂ ಡೆಲಿವರಿ ಸೌಲಭ್ಯಗಳು ಆನ್ಲೈನ್ ಆಗಲಿವೆ. ಗ್ರಾಹಕರು ಅಂಚೆ ಮೂಲಕ ವಸ್ತುವೊಂದನ್ನು ಕಳಿಸಬೇಕಿದ್ದರೆ ಆನ್ಲೈನ್ನಲ್ಲಿ ಬುಕ್ ಮಾಡಬಹುದು. ನಿಗದಿತ ಶುಲ್ಕ ಪಡೆದು ಈ ಸೇವೆ ಒದಗಿಸಲಾಗುತ್ತಿದೆ. ಬುಕ್ ಮಾಡಿದ ನಂತರ ಪೋಸ್ಟ್ಮನ್ ಮನೆಗೆ ಬಂದು ಪಾರ್ಸೆಲ್ ಪಡೆಯುತ್ತಾರೆ. ಪಾರ್ಸಲ್ ಕಳುಹಿಸಿದ ನಂತರ ಗ್ರಾಹಕರಿಗೆ ಮಾಹಿತಿ ದೊರೆಯುತ್ತದೆ. ಈ ಸೌಲಭ್ಯದಡಿ ತಮ್ಮ ಪಾರ್ಸೆಲ್ ಎಲ್ಲಿದೆ ಎಂಬ ಬಗ್ಗೆ ಗ್ರಾಹಕರು ಮಾಹಿತಿ ಪಡೆಯಬಹುದು.
ಪಾರ್ಸೆಲ್ ತಲುಪಿಸಿದ ನಂತರ ಪೋಸ್ಟ್ಮನ್ ಗ್ರಾಹಕರ ಡಿಜಿಟಲ್ ಸಹಿ ಪಡೆಯಲಿದ್ದಾರೆ. ಪಾರ್ಸೆಲ್ ತಲುಪಿದ ಬಗ್ಗೆ ಕಳುಹಿಸಿದವರಿಗೂ ಸಂದೇಶ ರವಾನೆಯಾಗುತ್ತದೆ. ಸಾಮಾನ್ಯ ಪತ್ರಗಳು, ಲಕೋಟೆಗಳನ್ನು ಕಳುಹಿಸಲು ಭವಿಷ್ಯದಲ್ಲಿ ಬಾರ್ ಕೋಡ್ ಸೌಲಭ್ಯ ಒದಗಿಸಲಾಗುತ್ತದೆ. ಈ ಸೇವೆಯಡಿ ತಮ್ಮ ಲಕೋಟೆ, ಪತ್ರ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿಯನ್ನು ಗ್ರಾಹಕರು ಆನ್ ಲೈನ್ ಮೂಲಕ ಪಡೆಯಬಹುದು.
ಜಿಲ್ಲೆಯಲ್ಲಿ ಜೂನ್ 17 ರಿಂದ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ನಗರ, ಗ್ರಾಮೀಣ ಪ್ರದೇಶ ಸೇರಿದಂತೆ 46 ಅಂಚೆ ಕಚೇರಿಗಳಲ್ಲಿ ಸೌಲಭ್ಯಗಳು ದೊರೆಯಲಿವೆ. ಎಲ್ಲಾ ಕಚೇರಿಗಳು ಗಣಕೀಕರಣಗೊಂಡಿದ್ದು, ಸೌಲಭ್ಯದ ಜಾರಿಗೆ ಸಿದ್ಧತೆ ಪೂರ್ಣಗೊಂಡಿದೆ. ಉತ್ತಮ ನೆಟ್ವರ್ಕ್, ತಾಂತ್ರಿಕ ತರಬೇತಿ ಪಡೆದ ಸಿಬ್ಬಂದಿ ಹಾಗೂ ಮೂಲ ಸೌಕರ್ಯವಿರುವ ಕಾರಣ ಜಿಲ್ಲೆಗಳು ಈ ಯೋಜನೆಗೆ ಆಯ್ಕೆಯಾಗಿವೆ.