
ಬಳ್ಳಾರಿ: ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

j3tvkannada
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮ ಗೌಡ ಮಾತನಾಡಿ ಮುಂಗಾರು ಮಳೆ ಉತ್ತಮವಾಗಿದ್ದು, ತುಂಗಭದ್ರಾ ಜಲಾಶಯದಲ್ಲಿ34 ಟಿ.ಎಂ.ಸಿ ನೀರು ಶೇಖರಣೆಯಾಗಿದೆ. ಮಲೆನಾಡಿನಾದ್ಯಂತ ಉತ್ತಮ ಮಳೆಯಿಂದಾಗಿ ಜಲಾಶಯಕ್ಕೆ 51 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ತುಂಗಭದ್ರಾ ಜಲಾಶಯ ಮತ್ತು ಮಂಡಳಿಯ ಅಧಿಕಾರಿಗಳು ಸಭೆ ಸೇರಿ 19 ನೇ ಗೇಟ್ ಅಳವಡಿಸಬೇಕಾಗಿದೆ ಎಂದ ಅವರು, ಕಾಲುವೆ ಕಾಮಗಾರಿಗಳನ್ನು ಪೂರೈಸುವ ಉದ್ದೇಶದಿಂದ ವಿನಾಕಾರಣ ಕಾಲುವೆಗಳಿಗೆ ನೀರು ಹರಿಸಲು ತಡ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಎಚ್.ಎಲ್.ಸಿ, ಎಲ್.ಎಲ್.ಸಿ, ಎಲ್.ವಿ.ಎಂ.ಸಿ ಮತ್ತು ವಿಜಯನಗರ ನಾಲೆಗಳು ಕಾಲುವೆಗಳಿಗೆ ಜಲಾಶಯದಿಂದ ಮುಂಗಾರು ಮತ್ತು ಹಿಂಗಾರಿನ 2 ಬೆಳೆಗಳಿಗೆ ನೀರು ಕೊಡಲು ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತುಂಗಭದ್ರಾ ರೈತ ಸಂಘದ ಎ.ಪಂಪಾಪತಿ, ಕೊಂಚಿಗೇರಿ ಮಲ್ಲಪ್ಪ, ಮುಷ್ಟಗಟ್ಟ ಭೀಮನಗೌಡ, ಶಿವಯ್ಯ, ಚನ್ನಪಟ್ಟಣ ಖಾಜಾವಲಿಸಾಬ್ ಸೇರಿದಂತೆ ನೂರಾರು ರೈತರು ಇದ್ದರು.