
ಕೋಲಾರ: ಮಾವು ಬೆಳೆಗಾರರನ್ನು ಸಂರಕ್ಷಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಎರಡು ಸರ್ಕಾರಗಳ ರೈತ ವಿರೋಧ ಧೋರಣೆಯಿಂದಾಗಿ ಮಾವು ಬೆಳೆಗಾರರು ಬೀದಿ ಪಾಲಾಗುವಂತಾಗಿದೆ. ಮಾವು ಬೆಳೆಯ ಬೇಡಿಕೆ ಕುಸಿತಕ್ಕೆ ಸಾಂಧ್ರೀಕೃತ ಹಣ್ಣುಗಳ ರಸ ಅಮದು ನೀತಿಗಳೇ ಕಾರಣವಾಗಿವೆ. ಮಾವು ಬೆಳಗಾರರ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ಕೋಲಾರ ಬಂದ್ ಮಾಡಲಾಗುವುದು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ ಸಿ.ಪಿ.ಐ.(ಎಂ.) ಜಿಲ್ಲಾ ಸಮಿತಿ ಎಚ್ಚರಿಸಿ ಹತ್ತಾರು ಮಾವಿನ ಮೂಟೆಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿತು.

ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಆಂದ್ರ ಪ್ರದೇಶ ಮತ್ತು ತಮಿಳುನಾಡು, ಹಣ್ಣಿನ ರಸ ಹಾಗೂ ಮಾವು ಉಪ ಉತ್ಪನ್ನಗಳ ಕೈಗಾರಿಕೆ ಘಟಕಗಳನ್ನು ಮಾಡಿದಂತೆ, ನಮ್ಮ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿಯೂ ಪ್ರಾರಂಭಿಸಬೇಕು, ಒಂದು ಟನ್ ಮಾವಿಗೆ ೧೫ ಸಾವಿರ ರೂ ಬೆಂಬಲ ಬೆಲೆ ಘೋಷಿಸಬೇಕು. ಸಹಕಾರಿ ರಂಗದ ಮೂಲಕ ಹಣ್ಣು ತಿರುಳು ಕೈಗಾರಿಕೆಯನ್ನು ಜುಲೈ ಮಾಹೆಯಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿತು.
ಭಾರತದಲ್ಲಿ ೯೫ ರಿಂದ ೧೨೦ ಲಕ್ಷ ಟನ್ ಮಾವು ಬೆಳೆಯುತ್ತೇವೆ, ವಿಶ್ವದಲ್ಲೇ ಭಾರತವು ಪ್ರಥಮ ಸ್ಥಾನದಲ್ಲಿದೆ ಕರ್ನಾಟಕ ೪ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕೋಲಾರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದ್ದು ಸುಮಾರು ೫೫ ಸಾವಿರ ಹೆಕ್ಟರ್ ಪ್ರದೇಶದಲ್ಲಿ ೬೬ಕ್ಕೂ ಹೆಚ್ಚು ವಿಶಿಷ್ಟ ತಳಿಗಳ ೧೦ ಲಕ್ಷ ಟನ್ ಮಾವು ಬೆಳೆಯುತ್ತೇವೆ. ಈ ಪೈಕಿ ಶ್ರೀನಿವಾಸಪುರ ಪ್ರಮುಖ ಕೇಂದ್ರವಾಗಿದ್ದು ಮಾವಿನ ನಗರಿಯೆಂದೇ ಖ್ಯಾತಿ ಪಡೆದಿದೆ ಎಂದರು.
ಈ ಭಾರಿ ಹವಮಾನ ವೈಪರೀತ್ಯದಿಂದಾಗಿ ಇಳುವರಿ ಕಡಿಮೆಯಾಗಿದ್ದರೂ ಬೇಡಿಕೆ ಹೆಚ್ಚಳದಿಂದ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯನ್ನು ಹೊಂದಿದ್ದೆವು, ಅದರೆ ಸಾಕಷ್ಟು ಬೆಳೆ ನಷ್ಟಗೊಂಡಿತು, ಮೇ ತಿಂಗಳಿನಲ್ಲಿ ಮಾವಿನ ಮಾರುಕಟ್ಟೆ ಪ್ರಾರಂಭವಾಯಿತು ತಿನ್ನುವ ಮಾವಿಗೆ ಬೆಲೆ ಸಿಗಲಿಲ್ಲ. ಮಾವಿನ ಹಣ್ಣಿನ ರಸ ಉತ್ಪಾದಿಸುವ ಕೈಗಾರಿಕೆಗಳು ತೊತಪುರಿ ಮಾವನ್ನು ಖರೀದಿಸಲು ಮುಂದೆ ಬರಲಿಲ್ಲ ಕಾರಣ ಏನೆಂದರೆ ಯುನೈಟೆಡ್ ಸ್ಟೇಟ್ಸ್, ಉಕ್ರೇನ್, ರಷ್ಯಾ, ನಂತರದಲ್ಲಿ ಚೈನಾ, ನೆದರ್ಲ್ಯಾಂಡ್, ಮತ್ತು ಅರ್ಜೆಂಟೈನಾಗಳು ಸೇರಿದಂತೆ ೧೨೬ ದೇಶಗಳಿಂದ ಕೇಂದ್ರ ಸರ್ಕಾರವು ಹಣ್ಣಿನ ರಸಗಳನ್ನು ಅಮದು ಮಾಡಿಕೊಳ್ಳಲು ಅನುವು ಮಾಡಿ ಕೊಟ್ಟಿರುವ ಹಿನ್ನಲೆಯಲ್ಲಿ ಸ್ಥಳೀಯ ಹಣ್ಣಿನ ರಸದ ಕೈಗಾರಿಕೆಗಳು ಮಾವು ಖರೀದಿಸುತ್ತಿಲ್ಲ ಎಂದು ತಿಳಿಸಿದರು,
ಕಳೆದ ಸೆಪ್ಟೆಂಬರ್ ೨೦೨೩ ರಿಂದ ಅಕ್ಟೋಬರ್ ನಲ್ಲಿ ಭಾರತಕ್ಕೆ ೭೮೯೬ ಹಡುಗುಗಳಲ್ಲಿ ಮಾವು ಭರ್ತಿ ಮಾಡಿ ಅಮದು ಮಾಡಿರುವ ಹಿನ್ನಲೆಯಲ್ಲಿ ಮಾವಿನ ಉಪ ಉತ್ಪನ್ನಗಳಿಗೆ ಬೇಡಿಕೆಗಳಿಲ್ಲದೆ ವಿದೇಶಗಳದೆ ಬಳಕೆ ಮಾಡುತ್ತಿರುವುದರಿಂದ ಸ್ಥಳೀಯ ಮಾವು ಬೇಡಿಕೆ ಇಲ್ಲದೆ ದರ ಕುಸಿತದಿಂದಾಗಿ ರೈತರ ಮಾವುಗಳಿಗೆ ಮಾರುಕಟ್ಟೆ ಸಿಗದೆ ಬೀದಿ ಪಾಲಾಗುವಂತಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕ ಮಾವು ಅಮದು ಮಾಡಿದೆ. ೨೦೨೪ ಮಾರ್ಚ್ನಿಂದ ೨೦೨೫ ಮಾರ್ಚ್ವರೆಗೆ ನಮ್ಮಲ್ಲಿ ಜೂಸ್ ಉತ್ಪಾದಿಸುವ ತೊತಾಪುರಿ ಮಾವಿನ ಹಣ್ಣನ್ನು ಶೇ ೭೦ ರಷ್ಟು ಖರೀದಿ ಮಾಡದ ಕಾರಣ ಮಾವಿನ ಹಣ್ಣುಗಳು ಮರದಲ್ಲೇ ಕೊಳೆಯುತ್ತಿವೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರಕ್ಕೆ ಭಾರತದ ಕೃಷಿಯನ್ನು ಮತ್ತು ಕೃಷಿಕರನ್ನು ಸಂರಕ್ಷಿಸುವ ಇಚ್ಚಾಶಕ್ತಿ ಕೊರತೆಯಿಂದಾಗಿ ವಿದೇಶೀ ಕಾರ್ಪೋರೇಷನ್ ಕಂಪನಿಗಳನ್ನು ಬೆಂಬಲಿಸುವ ದೆಸೆಯಲ್ಲಿ ಅಮದು ಸುಂಕಗಳನ್ನು ಕಡಿತಗೊಳಿಸಿದೆ. ಇನ್ನು ಕೆಲವು ಉತ್ಪನ್ನಗಳನ್ನು ಉಚಿತಗೊಳಿಸುವ ಕಾರಣ ಅಮದು ದುಪ್ಪಟು ಅಗಲು ಕಾರಣವಾಗಿದ್ದು ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆಯೇ ಇಲ್ಲ, ಬೆಲೆಯೂ ಇಲ್ಲವಾಗಿದೆ ಎಂದರು.
ರಾಜ್ಯ ಸರ್ಕಾರವು ಕೊಡಲೇ ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು, ನೆರೆ ರಾಜ್ಯಗಳಾದ ತಮಿಳು ನಾಡು ಹಾಗೂ ಆಂದ್ರ ಪ್ರದೇಶಗಳಲ್ಲಿ ಹಣ್ಣಿನ ರಸದ ಕೈಗಾರಿಕೆಗಳ ಮೇಲೆ ಸ್ಥಳೀಯ ರೈತರು ಅವಲಂಬಿತರಾಗದಂತೆ ಕೋಲಾರ ಜಿಲ್ಲೆಯಲ್ಲಿ ಹಣ್ಣಿನ ರಸ (ಜೂಸ್) ಕೈಗಾರಿಕೆಗಳನ್ನು ಸ್ಥಾಪಿಸುವಂತಾಗಬೇಕು, ಸಂಸ್ಕರಣ ಘಟಕಗಳನ್ನು ಸ್ಥಾಪಿಸುವಂತಾಗಬೇಕು .ವಿಶೇಷವಾಗಿ ಸಹಕಾರಿ ಕ್ಷೇತ್ರದಲ್ಲಿ ಜೂಸ್ ಫ್ಯಾಕ್ಟರಿಗಳನ್ನು ಪ್ರಾರಂಭಿಸಲು ಸರ್ಕಾರವು ಒತ್ತು ನೀಡುವಂತಾಗ ಬೇಕೆಂದು ಆಗ್ರಹಿಸಿದರು. ಆಂದ್ರ ಸರ್ಕಾರವು ದೇಶದ ರೈತರ ರಕ್ಷಣೆಗೆ ನಿಲ್ಲಲು ನಮ್ಮ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಅಮುದಾಗುತ್ತಿರುವ ಹಣ್ಣಿನ ರಸ ಸಾಂಧ್ರೀಕರಣ ಸ್ಥಗಿತಗೊಳಿಸಬೇಕು. ಮತ್ತು ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು, ಡಾ.ಸ್ವಾಮಿನಾಥನ್ ಶಿಫಾರಸ್ಸಿನ ಮೇಲೆ ಮಾವಿಗೊ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿ ಅವರು ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು,