
ದಾವಣಗೆರೆ: ಜಿಲ್ಲೆಯಲ್ಲಿ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟ ವಿಕೇಂದ್ರಿಕರಣವಾಗಿದ್ದು, ಈಗ ರೈತರು ನಗರ ಪಟ್ಟಣಗಳಿಗೆ ಅಲೆಯಬೇಕಿಲ್ಲ, ತಮ್ಮ ಹಳ್ಳಿಗಳಲ್ಲಿಯೇ ರಸಗೊಬ್ಬರ ಮಾರಾಟ ಅಂಗಡಿಗಳು ತಲೆ ಎತ್ತಿದ್ದು ರೈತರ ಮನೆ ಬಾಗಿಲಲ್ಲಿಯೇ ಎಲ್ಲವೂ ಸಿಗುವಂತಾಗಿದೆ. ಮುಂಗಾರು ಆರಂಭವಾಗಿ ಭರ್ಜರಿ ಮಳೆ ಸುರಿಯುತ್ತಿದ್ದು ಬಿತ್ತನೆ ಬೀಜ, ರಸಗೊಬ್ಬರಕ್ಕೆ ಡಿಮ್ಯಾಂಡ್ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ ರೈತರು ರಸಗೊಬ್ಬರಕ್ಕಾಗಿ ನಗರ, ಪಟ್ಟಣಗಳಿಗೆ ಅಲೆಯುವುದು ತಪ್ಪಿದೆ.

j3tvkannada
ಹಳ್ಳಿಗಳಲ್ಲಿಯೇ ರಸಗೊಬ್ಬರ ಮಾರಾಟಕ್ಕೆ ಹೆಚ್ಚಿನ ಲೈಸನ್ಸ್ ನೀಡಿರುವುದರಿಂದ ಎಲ್ಲ ಕಡೆ ಅಂಗಡಿಗಳು ತಲೆ ಎತ್ತಿವೆ. ಇದರ ಜತೆ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ ಅವರ ಕೈಗೆ ಕೆಲಸ ನೀಡಲು ರಸಗೊಬ್ಬರ ಮಾರಾಟದ ಲೈಸನ್ಸ್ ನೀಡಿದ್ದರಿಂದ ಇವರು ಗ್ರಾಮೀಣ ಪ್ರದೇಶದಲ್ಲಿ ಅಂಗಡಿಗಳನ್ನು ತೆರೆದು ರಸಗೊಬ್ಬರ, ಬಿತ್ತನೆ ಬೀಜ ಮತ್ತು ಕೀಟ ನಾಶಕ ಮಾರಾಟ ಮಾಡುತ್ತಿದ್ದು, ರೈತನ ಮನೆ ಬಾಗಿಲಲ್ಲಿಯೇ ಎಲ್ಲವೂ ಸಿಗುವಂತಾಗಿದೆ. ಇದರ ಜತೆ ಇವರು ರೈತರ ತಾಕುಗಳಿಗೆ ಭೇಟಿ ನೀಡಿ ಕೃಷಿ ಅಧಿಕಾರಿಗಳ ನೆರವು ಪಡೆದು ರೈತರಿಗೆ ಮಾಹಿತಿಯನ್ನೂ ನೀಡುತ್ತಿದ್ದಾರೆ.
ಕಳೆದ ಕೆಲ ವರ್ಷದಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರಸಗೊಬ್ಬರ ಮಾರಾಟ ಅಂಗಡಿ ತೆರೆಯಲು ಕೃಷಿ ಇಲಾಖೆಯಿಂದ ಪರವಾನಗಿ ನೀಡಲಾಗಿದೆ. ಇದರ ಜತೆ ಇಲಾಖೆಯಿಂದ ದೇಸಿ ಯೋಜನೆಯಡಿ ಯುವಕರಿಗೆ ತರಬೇತಿ ನೀಡಿ ಅವರಿಗೂ ಲೈಸನ್ಸ್ ನೀಡಿದ್ದರಿಂದ ಈ ವರ್ಷ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 500 ಕ್ಕೂ ಹೆಚ್ಚು ಅಂಗಡಿಗಳು ತಲೆ ಎತ್ತಿದಂತಾಗಿದ್ದು ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಸೇರಿದಂತೆ ಕೆಲ ಕೃಷಿ ಪರಿಕರಗಳನ್ನು ಮಾರಾಟ ಮಾಡುತ್ತಿದ್ದಾರೆ.

ರೈಲಿನಲ್ಲಿ ಬರುವ ರಸಗೊಬ್ಬರ ಇಲ್ಲಿನ ಗೂಡ್ಸ್ ಕಾಲೊನಿಯಿಂದ ನೇರ ಗ್ರಾಮೀಣ ಪ್ರದೇಶದ ಅಂಗಡಿಗಳಿಗೆ ರವಾನೆ ಆಗಲಿದ್ದು, ಕೃಷಿ ಇಲಾಖೆ ಎಲ್ಲ ವ್ಯವಸ್ಥೆ ಕಲ್ಪಿಸಿದೆ. ಹಳ್ಳಿಗಳ ಮಾರಾಟಗಾರರು ಅಲ್ಲಿಯೇ ರೈತರಿಗೆ ಬೇಕಾದ ಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ನೀಡುತ್ತಿದ್ದಾರೆ. ಹಳ್ಳಿಗಳ ಅಂಗಡಿಗಳಲ್ಲಿ ಕೆಲವರು ಪ್ರತಿ ವರ್ಷ ಕೋಟಿ ರೂ. ಗೂ ಹೆಚ್ಚಿನ ವ್ಯಾಪಾರ ಮಾಡುತ್ತಿದ್ದು ಸಾಕಷ್ಟು ಲಾಭ ಕೂಡ ಗಳಿಸುತ್ತಿದ್ದಾರೆ. ಇದರಿಂದ ನಿರುದ್ಯೋಗಿ ಯುವಕರಿಗೂ ಉದ್ಯೋಗ ಸಿಗುತ್ತಿದೆ.
ಕೃಷಿ ಇಲಾಖೆಯಿಂದ ತರಬೇತಿ ಪಡೆದು ಎರಡು ವರ್ಷದ ಹಿಂದೆ ನಮ್ಮೂರಲ್ಲಿಯೇ ರಸಗೊಬ್ಬರ ಮಾರಾಟ ಅಂಗಡಿ ತೆರೆದೆ, ರೈತರ ಮನೆ ಬಾಗಿಲಲ್ಲಿಯೇ ಎಲ್ಲವೂ ಸಿಗುತ್ತಿದ್ದು, ಹಿಂದಿನ ವರ್ಷ 1.50 ಕೋಟಿ ವ್ಯಾಪಾರ ಮಾಡಿದೆ, ಈಗಾಗಲೇ 35 ಲಕ್ಷ ರೂ ವ್ಯಾಪಾರ ಆಗಿದೆ. ತರಬೇತಿ ಪಡೆದ ನಂತರ ಅಂಗಡಿ ತೆರೆದು ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟದ ಅಂಗಡಿ ಆರಂಭಿಸಿದೆ.

j3tvkannada
ಹಳ್ಳಿಗಳಲ್ಲಿಯೇ ಸಿಗುವುದರಿಂದ ರೈತರಿಗೆ ಅನುಕೂಲ ಆಗಿದೆ. ಹಿಂದಿನ ವರ್ಷ 1.25 ಕೋಟಿ ರೂ, ವ್ಯವಹಾರ ಮಾಡಿರುವೆ. ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಪರವಾನಗಿ ನೀಡಲಾಗಿದೆ. ಇದರ ಜತೆ ತರಬೇತಿ ನೀಡಿ ನಿರುದ್ಯೋಗಿ ಯುವಕರಿಗೂ ಲೈಸನ್ಸ್ ನೀಡಿದ್ದು ರಸಗೊಬ್ಬರ ಮಾರಾಟ ವಿಕೇಂದ್ರೀಕರಣ ಆಗಿ ರೈತರಿಗೂ ಅನುಕೂಲ ಆಗಿದೆ.
ಜಿಲ್ಲೆಯಲ್ಲಿ ಎಸ್.ಎಸ್.ಎಲ್ ಸಿ ಪಾಸಾದ 900 ನಿರುದ್ಯೋಗಿ ಯುವಕರಿಗೆ ದೇಸಿ ಯೋಜನೆಯಡಿ ಒಂದು ವರ್ಷ ಪ್ರತಿ ಭಾನುವಾರ ಇಲ್ಲಿನ ಕಾಡಜ್ಜಿ ಕೃಷಿ ಕೇಂದ್ರದಲ್ಲಿ ತರಬೇತಿ ನೀಡಲಾಗಿದೆ. ಹೈದ್ರಾಬಾದ್ನ ಮ್ಯಾನೇಜ್ ಸಂಸ್ಥೆ ಮತ್ತು ಬೆಂಗಳೂರಿನ ಕೃಷಿ ವಿವಿಯಿಂದ ತರಬೇತಿ ನೀಡಿ ಕೃಷಿ ಡಿಪ್ಲೊಮಾ ಸರ್ಟಿಫಿಕೇಟ್ ಜತೆ ಅಂಗಡಿ ತೆರೆಯಲು ಪರವಾನಗಿ ಕೂಡ ನೀಡಲಾಗಿದೆ. ತರಬೇತಿ ಪಡೆದ ಯುವಕರು ಹಳ್ಳಿಗಳಲ್ಲಿ ಅಂಗಡಿ ತೆರೆದು ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ.
ರಸಗೊಬ್ಬರ ಬೇಡಿಕೆ:
ಯೂರಿಯಾ: 54162
ಡಿಎಪಿ: 14672
ಎನ್ಪಿಕೆ: 72616
ಎಂಓಪಿ: 4586
ಎಸ್ಎಸ್ಪಿ: 513
ಒಟ್ಟು 146549