
ಬಳ್ಳಾರಿ: ವೈಜ್ಞಾನಿಕವಾಗಿ ಬೆಳೆ ಪದ್ದತಿಯನ್ನು ಅನುಸರಿಸಿ ಹೆಚ್ಚಿನ ಇಳುವರಿ ಪಡೆಯಲು ಆಧುನಿಕ ಕೃಷಿಯನ್ನು ನಡೆಸಬೇಕೆಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಹೇಳಿದ್ದಾರೆ.

j3tvkannada
ನಗರದ ಎ.ಪಿ.ಎಂ.ಸಿ ಆವರಣದಲ್ಲಿ ನಡೆದ ರೈತರ ಮೇಳ ಉದ್ಘಾಟಿಸಿ ಮಾತನಾಡಿದರು. ಈ ಮೇಳವು ಅರ್ಥಪೂರ್ಣವಾಗಿದೆ ಎಂದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಂ. ಸೋಮಸುಂದರ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ರೈತರು ವೈಜ್ಞಾನಿಕವಾಗಿ ಪ್ರಾಮಾಣೀಕೃತ ಬೀಜಗಳನ್ನು ಆಯ್ಕೆ ಮಾಡಿಕೊಂಡು, ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಇಳುವರಿಯನ್ನು ಪಡೆಯಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ರಾಯಚೂರು ಕೆ.ವಿ.ಕೆಯ ಡಾ. ಭೀಮಣ್ಣ ಮತ್ತು ಹೈದರಾಬಾದ್ನ ಡಾ. ವೆಂಕಟೇಶ್ ಕುಲಕರ್ಣಿ ಅವರು, ಮಣ್ಣಿನ ಫಲವತ್ತತೆ, ಬೀಜಗಳ ಆಯ್ಕೆ, ವೈಜ್ಞಾನಿಕವಾಗಿ ಬೀಜ ಬಿತ್ತನೆ, ನೀರುಣಿಸುವಿಕೆ, ಆಧುನಿಕ ತಂತ್ರಜ್ಞಾನಗಳ ಬಳಕೆ, ಯಂತ್ರಗಳ ಬಳಕೆ, ಸಾಂಪ್ರದಾಯಿಕ ಪದ್ಧತಿಯ ಕೃಷಿ ಇನ್ನಿತರೆ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಎ.ಪಿ.ಎಂ.ಸಿ ಅಧ್ಯಕ್ಷ ಕಟ್ಟೇಮನಿ ನಾಗೇಂದ್ರ, ಕಾರ್ಯದರ್ಶಿ ಶ್ರೀಹರಿ, ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್ ಅಧ್ಯಕ್ಷ ದಂಡಿನ ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ತಿಮ್ಮನಗೌಡ, ಬಿ.ಡಿ.ಸಿ.ಸಿ.ಐನ ನಿಕಟಪೂರ್ವ ಅಧ್ಯಕ್ಷರಾದ ಬಿ. ಮಹಾರುದ್ರಗೌಡ, ಹಗರಿ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ರವಿಶಂಕರ್, ಕೃಷಿ ಮಾರಾಟಗಾರರ ನೌಕರರ ಸಂಘದ ಅಧ್ಯಕ್ಷ ಚೌವ್ಹಾಣ್, ಎ.ಪಿ.ಎಂ.ಸಿ ದಲ್ಲಾಳಿ ವರ್ತಕರ ಸಂಘದ ಅಧ್ಯಕ್ಷ ಅಂದ್ರಾಳ್ ಚಿದಾನಂದಪ್ಪ ವೇದಿಕೆಯಲ್ಲಿ ಇದ್ದರು. ಡಾ. ಶ್ರೀನಿವಾಸರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ವಂದಿಸಿದರು. ರಾಯಚೂರಿನ ಪ್ರಗತಿಪರ ರೈತ ಸಿದ್ದನಗೌಡ ಅವರು ರೈತರ ಪರವಾಗಿ ಮಾತನಾಡಿದರು. ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ಆಂದ್ರ ಪ್ರದೇಶದ ರೈತರು ಈ ಮೇಳದಲ್ಲಿ ಪಾಲ್ಗೊಂಡಿದ್ದರು. ಕೃಷಿಗೆ ಪೂರಕವಾದ ವಿವಿಧ ಯೋಜನೆಗಳ ಮತ್ತು ಉತ್ಪನ್ನಗಳ ಕುರಿತು ಮಾಹಿತಿ ನೀಡುವ ಸ್ಟಾಲ್ಗಳನ್ನು ಅಳವಡಿಸಿತ್ತು.