
ಕೋಲಾರ: ಜಮೀನು ವಿವಾದ ಹಿನ್ನೆಲೆ ಅಣ್ಣ, ತಮ್ಮನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

j3tvkannada
ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕು ಎನ್.ಜಿ ಹುಲ್ಕರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಂದೆ ಆಸ್ತಿಯಲ್ಲಿ ನಾಲ್ಕು ಗುಂಟೆ ಪಾಲು ಬೇಕೆಂದು ಮೂವರು ಅಣ್ಣ ತಮ್ಮಂದಿರು ನ್ಯಾಯಾಲಯದ ಮೊರೆ ಹೋಗಿದ್ದರು. ಜಮೀನು ವಿವಾದ ಸದ್ಯ ನ್ಯಾಯಾಲಯದಲ್ಲಿ ಬಾಕಿ ಇದ್ದು, ಸದರಿ ಜಮೀನಿನಲ್ಲಿ ತಮ್ಮ ರಮೇಶ್ ಶೆಡ್ ನಿರ್ಮಿಸಲು ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ವಿಚಾರ ತಿಳಿದ ಸೀನಪ್ಪ (ಶ್ರೀನಿವಾಸ್) ಮತ್ತು ಸಂಪಂಗಿ ಇಬ್ಬರೂ ರಮೇಶ್ ಬಳಿ ತಕರಾರು ತೆಗೆದಿದ್ದಾರೆ. ಸೀನಪ್ಪ ಮತ್ತು ರಮೇಶ್ ನಡುವೆ ಮಾತಿನ ಚಕಮಕಿ ನಡೆದು ಕೋಪಾವೇಶದಲ್ಲಿ ಸೀನಪ್ಪ ಪಕ್ಕದಲ್ಲಿದ್ದ ದೊಣ್ಣೆಯನ್ನು ತೆಗೆದು ರಮೇಶ್ಗೆ ಬಲವಾಗಿ ಹೊಡೆದ ಪರಿಣಾಮ ರಮೇಶ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಘಟನೆ ನಡೆಯುವಾಗ ಅಕ್ಕಪಕ್ಕದ ಜನರೂ ಗುಂಪು ಗೂಡಿದ್ದು, ತಮ್ಮ ಮೃತನಾದ ಎಂದು ತಿಳಿಯುತ್ತಿದ್ದಂತೆ ಭಯದಿಂದ ಸೀನಪ್ಪ ಮತ್ತು ಸಂಪಂಗಿ ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಷಯ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿ ಸೀನಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಪಂಗಿ ಪರಾರಿಯಾಗಿದ್ದು, ಬೇತಮಂಗಳ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.