
ಬೆಂಗಳೂರು: ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ, ಸ್ನೇಹಿತರೇ ಮತ್ತೊಂದು ಗ್ಯಾಂಗ್ಗೆ ಸುಪಾರಿ ನೀಡಿ ಆತನ ರಾಬರಿ ಮಾಡಿಸಿರುವಂತಹ ಘಟನೆ ನಗರದ ಚಿಕ್ಕಜಾಲದಲ್ಲಿ ನಡೆದಿದೆ. ಚಂದನ್ ಎಂಬಾತನ ಚಿನ್ನದ ಸರ, ಕೈ ಕಡಗವನ್ನು ದರೋಡೆ ಮಾಡಲಾಗಿದೆ. ರಾಬರಿ ಮಾಡಿಸಿದ ಸ್ನೇಹಿತರೇ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿಸಿದ್ದಾರೆ. ಆದರೆ ಈ ಸ್ನೇಹಿತರ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ಕಾಲ್ ಲಿಸ್ಟ್ ತೆಗೆದು ನೋಡಿದಾಗ ಸಿಕ್ಕಿ ಬಿದ್ದಿದ್ದಾರೆ.

j3tvkannada
ಚಂದನ್, ಪವನ್ ಹಾಗೂ ಅಚಲ್ ಮೂವರು ಸ್ನೇಹಿತರು ಚಿಕ್ಕಜಾಲದ ನೆಕ್ಸ್ಟ್ ಚಾಪ್ಟರ್ ಪಬ್ಗೆ ಹೋಗುತ್ತಾರೆ. ಈ ವೇಳೆ ಚಂದನ್ಗೆ ಉಳಿದಿಬ್ಬರು ಸ್ನೇಹಿತರು ಕಂಠಪೂರ್ತಿ ಕುಡಿಸುತ್ತಾರೆ. ನಂತರ ಪವನ್ ಹಾಗೂ ಅಚಲ್, ಚಂದನ್ ನನ್ನು ಕಾರಿನತ್ತ ಕರೆದುಕೊಂಡು ಬರುತ್ತಾರೆ. ಈ ವೇಳೆ ಅಚಲ್ ಜೆ.ಪಿ ನಗರದ ಪ್ರೇಮ್ ಶೆಟ್ಟಿ ಹಾಗೂ ಆತನ ಗ್ಯಾಂಗ್ಗೆ ಫೋನ್ ಮಾಡಿ ಕರೆಸಿಕೊಳ್ಳುತ್ತಾನೆ. ಸ್ಥಳಕ್ಕೆ ಬಂದ ಗ್ಯಾಂಗ್ ಚಂದನ್ಗೆ ಹಿಗ್ಗಾಮುಗ್ಗು ಥಳಿಸಿ ಆತನ ಬಳಿಯಿದ್ದ ಚಿನ್ನಾಭರಣ ದೋಚುತ್ತಾರೆ.
ಇತ್ತ ಹಲ್ಲೆಗೊಳಗಾದ ಚಂದನ್ ಚಿಕ್ಕಜಾಲ ಠಾಣೆಗೆ ಹೋಗಿ ದೂರು ನೀಡುತ್ತಾನೆ. ಅನುಮಾನಗೊಂಡ ಪೊಲೀಸರು ಅಚಲ್ ಕಾಲ್ ಹಿಸ್ಟರಿ ತೆಗೆದು ನೋಡುತ್ತಾರೆ. ಆಗ ಸುಲಿಗೆ ಮಾಡಿದ್ದ ಪ್ರೇಮ್ ಶೆಟ್ಟಿ ಹಾಗೂ ಅಚಲ್ಗೂ ಲಿಂಕ್ ಇರುವುದು ಗೊತ್ತಾಗುತ್ತೆ. ಇತ್ತ ಪೊಲೀಸರಿಗೆ ಅನುಮಾನ ಬರುತ್ತಿದ್ದಂತೆ ಪವನ್ ಮತ್ತು ಅಚಲ್ ಪರಾರಿ ಆಗಿದ್ದಾರೆ. ಸದ್ಯ ಚಿಕ್ಕಜಾಲ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ನಡೆದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿರುವ ಚಂದನ್ ಹಾಗೂ ಆರೋಪಿಗಳು ಹಲವು ವರ್ಷಗಳಿಂದ ಸ್ನೇಹಿತರು. ಚಂದನ್ ಸಿರಿವಂತನಾಗಿದ್ದು, ಒಬ್ಬನೇ ಮಗ. ಮೈ, ಕೈ ತುಂಬಾ ಚಿನ್ನಾಭರಣ ಹಾಕಿಕೊಂಡು ಓಡಾಡುತ್ತಿದ್ದ. ಸುತ್ತಾಟಕ್ಕೆ ಎಂ.ಜಿ ಹೆಕ್ಟರ್ ಕಾರನ್ನೇ ಬಳಸುತ್ತಿದ್ದ.
ಅಚಲ್ ಹಾಗೂ ಪವನ್ ಈ ಎಲ್ಲಾ ಐಷಾರಾಮಿ ವಿಚಾರವನ್ನು ತಿಳಿದಿದ್ದರು. ಅಚಲ್ ಜೆ.ಪಿ ನಗರದಲ್ಲಿ ನಾನಾಸ್ ಕೆಫೆ ನಡೆಸುತ್ತಿದ್ದು, ಇತ್ತೀಚೆಗೆ ಅದು ನಷ್ಟದಲ್ಲಿ ನಡೆಯುತ್ತಿತ್ತು. ಸಾಲ ಹೆಚ್ಚಾಗಿದ್ದರಿಂದ ಚಂದನ್ ಮೇಲೆ ಕಣ್ಣು ಬಿದ್ದಿತ್ತು. ಹಾಗಾಗಿ ಆತನ ಚಿನ್ನಾಭರಣವನ್ನು ಸುಲಿಗೆ ಮಾಡುವುದಕ್ಕೆ ಮುಂದಾಗುತ್ತಾನೆ. ಇಲ್ಲಿ ಪವನ್ ಸ್ಕೆಚ್ ರೆಡಿ ಮಾಡಿದ್ದು, ಅವನನ್ನು ಪಬ್ಗೆ ಕರೆದೊಯ್ದು ಮತ್ತೊಂದು ಗ್ಯಾಂಗ್ನಿಂದ ರಾಬರಿ ಮಾಡಿಸಿದ್ದಾರೆ.