
ಬೀದರ್: ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘದ ವತಿಯಿಂದ ಏಕ್ ಪೇಡ್ ಮಾ ಕೆ ನಾಮ್ ಅಭಿಯಾನದಡಿ 1,11,111 ಸಸಿಗಳನ್ನು ನೆಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರೂ ಆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.

j3tvkannada
ತಾಲ್ಲೂಕಿನ ಹೊನ್ನಿಕೇರಿ ಸಿದ್ಧೇಶ್ವರ ದೇವಸ್ಥಾನ ಪರಿಸರದಲ್ಲಿ ನಡೆದ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಏಕ್ ಪೇಡ್ ಮಾ ಕೇ ನಾಮ್ ಕರೆಯ ಹಿನ್ನೆಲೆಯಲ್ಲಿ ಮಾತೆ ಕರುಣಾದೇವಿ ಅವರ ಗೌರವಾರ್ಥವಾಗಿ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದ ಮಠ, ಮಂದಿರ, ಶಾಲಾ ಕಾಲೇಜು ಆವರಣ, ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಗುವುದು. ಅಭಿಯಾನದಲ್ಲಿ ಬಿಲ್ವಪತ್ರೆ ಸಸಿಗಳನ್ನು ಅಧಿಕ ಪ್ರಮಾಣದಲ್ಲಿ ನೆಡಲಾಗುವುದು ಎಂದು ಹೇಳಿದರು.
ಅಭಿಯಾನಕ್ಕೆ ಚಾಲನೆ ನೀಡಿದ ಸಾಮಾಜಿಕ ಅರಣ್ಯ ವಿಭಾಗದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ದೊಡ್ಡ ಪ್ರಮಾಣದಲ್ಲಿ ಸಸಿ ನೆಡುವ ಅಭಿಯಾನ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು. ಅಭಿಯಾನಕ್ಕೆ ಅರಣ್ಯ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು. ಸಾನಿಧ್ಯ ವಹಿಸಿದ್ದ ಬೇಮಳಖೇಡದ ಡಾ. ರಾಜಶೇಖರ ಶಿವಾಚಾರ್ಯರು ಮಾತನಾಡಿ, ಮಾತೆ ಕರುಣಾದೇವಿ ಅವರಿಗೆ ಸಸಿ ನೆಡುವ ಅಭಿಯಾನ ಮೂಲಕ ಗೌರವ ಸಮರ್ಪಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು. ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು. ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ತಿಳಿಸಿದರು.
ರಾಯಚೂರು ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ರಾಜಕುಮಾರ ಪಾಟೀಲ ಮಾತನಾಡಿದರು. ಶ್ರೀ ಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಅಧಿಪತಿ ಮಾತೆ ಕರುಣಾದೇವಿ ಸಾನಿಧ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಸಿಕೇನಪುರೆ ಅಧ್ಯಕ್ಷತೆ ವಹಿಸಿದ್ದರು. ಮೇರಾ ಯುವ ಭಾರತ, ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರ ಕುಮಾರ ಗೋರಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಮಠ, ಪ್ರಮುಖರಾದ ಶಿವಶಂಕರ ಬೆಳಮಗಿ, ಮಹೇಶ ಪಾಟೀಲ, ಚೇತನ್ ಸೋರಳ್ಳಿ, ಕಾವೇರಿ ಸ್ವಾಮಿ, ಇಮ್ರಾನ್ ಖಾನ್, ಹಾವಪ್ಪ, ದೇವಸ್ಥಾನದ ಅರ್ಚಕರಾದ ಸಿದ್ದಯ್ಯ ಸ್ವಾಮಿ, ಶಿವಾನಂದ ಸ್ವಾಮಿ ಮತ್ತಿತರರು ಇದ್ದರು. ಪ್ರವೀಣ್ ಸ್ವಾಮಿ ಸ್ವಾಗತಿಸಿದರು. ಸಚ್ಚಿದಾನಂದ ಬಿರಾದಾರ ನಿರೂಪಿಸಿದರು. ಪ್ರಶಾಂತ ಸ್ವಾಮಿ ವಂದಿಸಿದರು.