
ಮಂಡ್ಯ:ರಂಗೋಲಿ ಭಾರತೀಯ ಸಂಪ್ರದಾಯದ ಅವಿಭಾಜ್ಯ ಅಂಗ, ಅದರಲ್ಲೂ ಭಾರತದ ಹೆಂಗಸರು ನಸುಕಿನಲ್ಲಿ ಎದ್ದು ಮನೆ ಅಂಗಳ ಸಾರಿಸಿ ಇಡುವ ರಂಗೋಲಿಯು ದಿನಚರಿಯ ಪ್ರಥಮ ಚರಣ. ಆದರೆ ಅದೇ ರಂಗೋಲಿ ಈಗ ಕಲಾ ಪ್ರಕಾರವಾಗಿ ಖ್ಯಾತಿ ಗಳಿಸಿದೆ. ಈಗ ಅದೇ ಒಂದು ವಿಶೇಷ ದಾಖಲೆಯಾಗಿಯೂ ಮಾರ್ಪಟ್ಟಿದೆ. ಮಹಿಳಾ ಸಶಕ್ತೀಕರಣ ಸ್ಥಳೀಯ ಆಡಳಿತದಲ್ಲಿ ಮಹಿಳೆಯರು ಭಾಗವಹಿಸುವಿಕೆಗಾಗಿ ಸರ್ಕಾರ ನಾನಾ ಯೋಜನೆಗಳನ್ನ ರೂಪಿಸಿದೆ. ಇದರ ಅಭಿಯಾನದ ಭಾಗವಾಗಿ ಇಲ್ಲೊಂದು ಗ್ರಾಮ ಪಂಚಾಯತ್ ವಿಶಿಷ್ಟ ಹಾಗೂ ವಿನೂತನವಾಗಿ ಗರಿಷ್ಠ ರಂಗೋಲಿ ಬಿಡುವ ಕಾರ್ಯಕ್ರಮ ರೂಪಿಸಿತ್ತು. ಇದೀಗ ಆ ರಂಗೋಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್? ಹಾಗಾದರೆ ಆ ರಂಗೋಲಿಯಲ್ಲಿ ಅಂತದ್ದೇನಿದೆ ಅಂತೀರಾ?

j3tvkannada
ಹೌದು, ಇಂತಾದ್ದೊಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ “ಮಹಿಳಾ ಸಶಕ್ತೀಕರಣ ಅಭಿಯಾನ” ವನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮ ಪಂಚಾಯತ್ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಈ ಯಶಸ್ವಿ ಅನುಷ್ಠಾನಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರಿದೆ. ಮಾರ್ಚ್ 8 ರಿಂದ ಜೂನ್ 30ರ ವರೆಗೆ ಮಹಿಳಾ ಸಶಕ್ತೀಕರಣದ ಅಭಿಯಾನದಡಿ ಹದಿನಾರು ವಾರಗಳ ಕಾಲ ಮೂವತ್ತಕ್ಕೂ ಹೆಚ್ಚು ಕಾರ್ಯಕ್ರಮ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಕಾರ್ಯಸೂಚಿ ನೀಡಲಾಗಿತ್ತು.
ಹೀಗಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿ ಈ ಸುತ್ತೋಲೆಯ ಅಂಶಗಳನ್ನು ಪಾಲಿಸಿ, ಮಾರ್ಚ್ 8 ರಂದು ಈ ಅಭಿಯಾನವನ್ನು ಆರಂಭಿಸಿತು. ಪಂಚಾಯ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಂಚಾಯತ್ ರಾಜ್ ದಿನದಂದು ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅತಿ ಹೆಚ್ಚು ರಂಗೋಲಿ ಬಿಡಲು ತೀರ್ಮಾನಿಸಿ, ಪಂಚಾಯತಿ ವ್ಯಾಪ್ತಿಯ 3 ಗ್ರಾಮಗಳಲ್ಲಿ ಏಕಕಾಲಕ್ಕೆ ಗರಿಷ್ಠ ರಂಗೋಲಿ ಬಿಡಿಸಿದ್ದರು. ಇದರ ಹಿನ್ನೆಲೆ ಈಗ ರಾಷ್ಟ್ರಮಟ್ಟದ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಸೇರಿದೆ. ಇದೆ ಜೂನ್ 27ರಂದು ಅಣ್ಣೂರಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯಿಂದ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಪಂಚಾಯತ್ ರಾಜ್ ಆಶಯ ಕುರಿತು ತಿಳಿಸುವ ಉದ್ದೇಶದಿಂದ ಸ್ಥಳೀಯರ ಭಾವನಾತ್ಮಕ ಸಂಗತಿ ಜೊತೆಯಾಗಿಸಿ, ಪಂಚಾಯತ್ ರಾಜ್ ದಿನಕ್ಕೆ ಏಕಕಾಲಕ್ಕೆ ಮುಂಜಾನೆಯೇ ಪ್ರತಿ ಮನೆ ಮುಂದೆ ರಂಗೋಲಿ ಬಿಟ್ಟು, ಸಂವಿಧಾನದ 73ನೇ ತಿದ್ದುಪಡಿ ಹಾಗೂ ಪಂಚಾಯತ್ ರಾಜ್ ದಿನದ ಶುಭಾಷಯ ಸಂದೇಶ ಬರೆದು ಜನರಲ್ಲಿ ಶಿಕ್ಷಣದ ಜಾಗೃತಿ ಮೂಡಿಸಲಾಗಿತ್ತು.
ಇನ್ನು ರಂಗೋಲಿ ಬಿಡುವ ಕಾರ್ಯಕ್ರಮದಲ್ಲಿ ಅಂದು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಣ್ಣೂರು, ಆಳಭುಜನಹಳ್ಳಿ & ಕಾರ್ಕಳ್ಳಿ ಗ್ರಾಮಗಳಿಂದ ಒಟ್ಟು 1,544 ಮಂದಿ ಭಾಗವಹಿಸಿದ್ದರು. ಅಕ್ಕಿ ಹಿಟ್ಟು, ಅರಿಶಿನ ಪುಡಿ ಮತ್ತು ಬಣ್ಣದ ಮರಳಿನಂತಹ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಒಟ್ಟಾರೆ 1,418 ರಂಗೋಲಿಗಳನ್ನು ರಚಿಸಿದ್ದರು. ಈ ರಂಗೋಲಿ ಬರೆದ ಸಂದೇಶ ಜನ ಮನದಲ್ಲಿ ಸಂಚಲನ ಉಂಟು ಮಾಡಿ ಎಲ್ಲರ ಗಮನ ಸೆಳೆದಿತ್ತು.