
ವಿಜಯನಗರ(ಹೊಸಪೇಟೆ): ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ ಹೊರತುಪಡಿಸಿ, ಉಳಿದ 32 ಕ್ರಸ್ಟ್ಗೇಟ್ಗಳನ್ನು ಬದಲಿಸುವ ಪ್ರಕ್ರಿಯೆ ಮುಂದಿನ ಬೇಸಿಗೆ ವೇಳೆ ಆರಂಭಿಸುವ ಸಾಧ್ಯತೆಯಿದ್ದು, ಈ ಕಸ್ಟ್ಗೇಟ್ಗಳನ್ನು ಜಲಾಶಯದ ಸಮೀಪದಲ್ಲಿಯೇ ನಿರ್ಮಿಸುವ ಚಿಂತನೆ ನಡೆದಿದೆ.

j3tvkannada
ಸದ್ಯ ಜಲಾಶಯದ 19ನೇ ಕ್ರಸ್ಟ್ಗೇಟ್ ನಿರ್ಮಾಣ ಭರದಿಂದ ನಡೆಯುತ್ತಿದ್ದು, ಇದೇ ತಿಂಗಳು ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ. ಉಳಿದ 32 ಗೇಟ್ಗಳ ಕಾಮಗಾರಿಯನ್ನು ಜಲಾಶಯದ ಸಮೀಪದಲ್ಲಿಯೇ ನಡೆಸಿದರೆ ಸಾಗಣೆ ಸಮಸ್ಯೆ ತಪ್ಪಲಿದೆ. ದೂರದ ಕೈಗಾರಿಕೆಗಳಲ್ಲಿ ನಿರ್ಮಾಣ ಮಾಡಿದಲ್ಲಿ ಸಾಗಣೆಗೆ ತೊಂದರೆಯಾಗಲಿರುವ ಹಿನ್ನೆಲೆ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜಲಾಶಯದ ಎಲ್ಲಾ 33 ಕ್ರಸ್ಟ್ಗೇಟ್ಗಳನ್ನು ಇದೇ ವರ್ಷ ಬದಲಿಸಿ ನೂತನ ಕ್ರಸ್ಟ್ಗೇಟ್ಗಳನ್ನು ಅಳವಡಿಸುವ ಬಗ್ಗೆ ಈ ಹಿಂದೆಯೇ ತಜ್ಞರು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ನಿಟ್ಟಿನಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಚರ್ಚೆಗಳು ನಡೆಯುತ್ತಿದ್ದವು. ಎಲ್ಲಾ ಕ್ರಸ್ಟ್ಗೇಟ್ಗಳು ಅಶಕ್ತಗೊಂಡಿರುವ ಕುರಿತು ತಜ್ಞರ ವರದಿ ಆಧರಿಸಿ, ಬದಲಾವಣೆಗೆ ತುಂಗಭದ್ರಾ ಮಂಡಳಿ ಮುಂದಾಗಿದೆ. ಹೊಸ ಗೇಟ್ಗಳನ್ನು ಅಳವಡಿಸುವ ಗುತ್ತಿಗೆಯನ್ನು ಗುಜರಾತ್ ಮೂಲದ ಹಾರ್ಡವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿ ಪಡೆದಿದೆ. 15 ತಿಂಗಳಲ್ಲಿ ಕಾಮಗಾರಿ ಪೂರೈಸಬೇಕೆಂಬ ಕಾಲಮಿತಿ ನೀಡಲಾಗಿದೆ. 19ನೇ ಕ್ರಸ್ಟ್ಗೇಟ್ ನಿರ್ಮಾಣದ ಹೊಣೆಯನ್ನು ಇದೇ ಕಂಪನಿಗೆ ನೀಡಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಈ ಜಲ ವರ್ಷದಲ್ಲಿ ಎಷ್ಟೇ ಪ್ರಮಾಣದಲ್ಲಿ ನೀರು ಹರಿದು ಬಂದರೂ ತಜ್ಞರ ಎಚ್ಚರಿಕೆ ಆಧರಿಸಿ, ಈ ಬಾರಿ ಜಲಾಶಯದ ಗರಿಷ್ಠ 105 ಟಿ.ಎಂ.ಸಿ ಬದಲು 80 ಟಿ.ಎಂ.ಸಿ ನೀರು ಸಂಗ್ರಹಿಸಲು ನಿರ್ಧರಿಸಲಾಗಿದೆ. ಎಲ್ಲಾ ಕ್ರಸ್ಟ್ಗೇಟ್ಗಳು ಅಶಕ್ತವಾದ ಹಿನ್ನೆಲೆ ಜಲಾಶಯದ ಭದ್ರತೆ ದೃಷ್ಟಿಯಿಂದ 80 ಟಿ.ಎಂ.ಸಿ ನೀರನ್ನು ಮಾತ್ರ ಸಂಗ್ರಹಿಸುವುದು ಸೂಕ್ತ . ತಜ್ಞರ ಸಲಹೆಯಂತೆ ಪ್ರಸಕ್ತ ವರ್ಷ ಬೆಳೆಗಳಿಗೆ 80 ಟಿ.ಎಂ.ಸಿ, ಕುಡಿಯುವ ಉದ್ದೇಶ, ಕಾರ್ಖಾನೆಗಳ ಬಳಕೆ, ಜಲಚರಗಳ ಉಳಿವಿಗೆ 40 ಟಿ.ಎಂ.ಸಿ ಸೇರಿ ಈ ಬಾರಿ ಒಟ್ಟು 120 ಟಿ.ಎಂ.ಸಿ ನೀರು ಮಾತ್ರ ಬಳಸಿಕೊಳ್ಳಬಹುದು ಎಂದು ನಿರ್ಧಾರಕ್ಕೆ ಬರಲಾಗಿದೆ. ಗರಿಷ್ಠ 80 ಟಿ.ಎಂ.ಸಿ ನೀರು ಸಂಗ್ರಹಿಸಿದ ನಂತರ ಹೆಚ್ಚುವರಿ ನೀರನ್ನು ನದಿಗೆ ಹರಿಸಬೇಕಾದ ಅನಿವಾರ್ಯತೆಯಿದೆ. ಎಲ್ಲಾ 33 ಕ್ರಸ್ಟ್ಗೇಟ್ಗಳನ್ನು ಬದಲಿಸಿದ ಬಳಿಕವಷ್ಟೇ 105 ಟಿ.ಎಂ.ಸಿ ನೀರು ಸಂಗ್ರಹಿಸುವ ಸಾಧ್ಯತೆಯಿದೆ.