
ವಿಜಯನಗರ(ಹಗರಿಬೊಮ್ಮನಹಳ್ಳಿ): ಈ ಹಿಂದೆ, ‘ಸರ್ವರೋಗಕ್ಕೂ ಸಾರಾಯಿ ಮದ್ದು’ ಎಂದು ತಮಾಷೆಗಾಗಿ ಹೇಳಲಾಗುತ್ತಿತ್ತು, ಆದರೆ ಇದೀಗ ಪ್ರಾಯೋಗಿಕವಾಗಿ ಬಳಕೆಯಾಗಿದೆ. ತಾಲೂಕಿನಲ್ಲಿ ದಾಳಿಂಬೆ ಬೆಳೆಗೆ ತಗುಲಿದ ದುಂಡಾಣು ಮಚ್ಚೆ ರೋಗಕ್ಕೆ ಮದ್ಯ ಬಳಕೆ ಮಾಡುವ ಮೂಲಕ ಹಲವಾರು ರೈತರು ಇದರಲ್ಲಿ ಯಶಸ್ಸು ಕಂಡಿರುವುದು ವಿಚಿತ್ರವಾದರೂ ಸತ್ಯ. ತಾಲೂಕಿನಲ್ಲಿ ಮುಂಗಾರಿಗೂ ಮುನ್ನವೇ ಮಳೆಯಾದ ಹಿನ್ನೆಲೆಯಲ್ಲಿ ದಾಳಿಂಬೆ ಬೆಳೆಗೆ ಪ್ರತಿಕೂಲ ವಾತಾವರಣ ಏರ್ಪಟ್ಟಿದೆ. ಪರಿಣಾಮವಾಗಿ ಸಹಜವಾಗಿ ದುಂಡಾಣು ಬಾಧೆ ಬೆಳೆಗಾರರ ಪಾಲಿಗೆ ಮಹಾಮಾರಿಯಾಗಿದೆ. ತಾಲೂಕಿನಲ್ಲಿ ಒಟ್ಟು 1650 ಹೆ.ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ.

ಶಿವಾನಂದನಗರ, ಅಂಕಸಮುದ್ರ, ಗದ್ದಿಕೇರಿ, ಹಂಪಸಾಗರ, ಬ್ಯಾಸಿಗೆದೇರಿ, ಅಡವಿ ಆನಂದೇವನಹಳ್ಳಿ ಸೇರಿ ನಾನಾ ಗ್ರಾಮಗಳಲ್ಲಿ ಗರಿಷ್ಠ ಪ್ರಮಾಣದ ಬೆಳೆ ಇದೆ. ವಿಶೇಷವೆಂದರೆ ಏಷ್ಯಾ ಖಂಡದಲ್ಲೇ ಉತೃಷ್ಟ ದರ್ಜೆಯ ದಾಳಿಂಬೆ ಬೆಳೆಯುತ್ತಿದ್ದ ರೈತರಿಗೆ ಇದೀಗ ರೋಗಬಾಧೆಯಿಂದಾಗಿ ಖುದ್ದು ಬೆಳೆಗಾರರಿಗೆ ತಿನ್ನಲು ಸಹಿತ ದಾಳಿಂಬೆ ದೊರೆಯದಂತಾಗಿದೆ. ರೋಗದಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಮದ್ಯ ಬಳಕೆ ಮಾಡುತ್ತಿದ್ದಾರೆ. ಈ ಪ್ರಯೋಗದಲ್ಲಿ ಬೆಳೆಗಾರರು ಯಶಸ್ವಿಯಾಗಿದ್ದಾರೆ. ರೋಗಬಾಧೆ ಕಡಿಮೆಯಾಗಿದ್ದು, ಖುದ್ದು ಬೆಳೆಗಾರರಿಗೆ ತಿನ್ನಲು ಸಹಿತ ದಾಳಿಂಬೆ ದೊರೆಯುತ್ತಿದೆ.

ತಾಲೂಕಿನಲ್ಲಿ ರೈತರು ಅಂದುಕೊಂಡಂತೆ ಈಗಾಗಲೇ ಬೆಳೆ ಕಟಾವು ಮಾಡಿ, ಗಿಡಗಳನ್ನು ರೆಸ್ಟಿಂಗ್ ಸ್ಥಿತಿಯಲ್ಲಿರಿಸಬೇಕಿತ್ತು. ಆದರೆ, ಇಂದಿಗೂ ಕಟಾವು ಮಾಡಲಾಗಿಲ್ಲ. ಬದಲಾಗಿ ದುಂಡಾಣು ರೋಗದ ನಿಯಂತ್ರಣದಲ್ಲೇ ಹರಸಾಹಸ ಮಾಡುವಂತಾಗಿದೆ. ಲಾಭಕ್ಕೆ ಬದಲಾಗಿ ರೋಗ ನಿಯಂತ್ರಣಕ್ಕೆ ಬೆಳೆಗಾರರು ಔಷಧ, ಮಲ್ಚಿಂಗ್, ಚಾಟ್ನಿ, ಸನ್ಬರ್ನ್ ತಡೆಗೆ ಪರದೆ ಸೇರಿ ಒಟ್ಟು ಕನಿಷ್ಠ 3ರಿಂದ 4 ಎಕರೆಗೆ 12ಲಕ್ಷ ರೂ.ಗೂ ಹೆಚ್ಚು ವ್ಯಯಿಸಿದ್ದು, ಬಿಡಿಗಾಸು ಹಿಂತಿರುಗಿಸಲಾರದಂತೆ ಆಗಿದೆ. ಕೆಲ ಬೆಳೆಗಾರರು ರೋಗ ನಿಯಂತ್ರಣವಾಗದೆ ಬೇಸತ್ತು ಕೈ ಚೆಲ್ಲಿದ್ದಾರೆ. ಈ ಹಿಂದೆ 5 ಎಕರೆಗೆ ಕನಿಷ್ಠ 25 ಲಕ್ಷ ರೂ.ಲಾಭ ಹೊಂದಿದ್ದ ರೈತರು ಇದೀಗ ಲಾಭದ ಬದಲು ಸಾಲ ಹೊರುವಂತಾಗಿದೆ.
ಎಲ್ಲ ಔಷಧಗಳನ್ನು ಸಿಂಪಡಿಸಿದ ಬಳಿಕವೂ ರೋಗ ನಿಯಂತ್ರಣವಾಗದೆ,ಕೊನೆಯ ಪ್ರಯತ್ನವೆಂಬಂತೆ ಒಬ್ಬರಿಂದ ಒಬ್ಬರಿಗೆ ಮದ್ಯ ಸಿಂಪಡಣೆ ಸಂಗತಿ ವ್ಯಾಪಕವಾಗಿ ಹರಡಿತು. ಒಟ್ಟು 6 ಬಾಟಲ್(ತಲಾ 180 ಮಿ.ಲೀ.) ಮದ್ಯ 2 ಗ್ರಾಂ.ನಷ್ಟು ಸಾಲಿಸಿಲಿಕ್ ಪೌಡರ್ ಮಿಶ್ರಣ ಮಾಡಿ ತಮ್ಮ ಬೆಳೆಗೆ ಸಿಂಪಡಣೆ ಮಾಡಿದ್ದಾರೆ. ವಿಚಿತ್ರವೆಂಬಂತೆ ಯಾವುದೇ ಔಷಧಕ್ಕೂ ಜಗ್ಗದ ದುಂಡಾಣು ಬಾಧೆಗೊಳಗಾದ ದಾಳಿಂಬೆ ಗಿಡಗಳು ಮದ್ಯ ಕುಡಿಯುತ್ತಿದ್ದಂತೆ ನಿಯಂತ್ರಣಕ್ಕೆ ಬಂದಿದೆ. ಇದರಿಂದ ಹಲವು ಗ್ರಾಮಗಳಲ್ಲಿನ ಬೆಳೆಗಾರರು ರೋಗ ನಿಯಂತ್ರಣವನ್ನು ಕಂಡಿದ್ದಾರೆ.
5 ಎಕರೆ ಯಲ್ಲಿ ಮಾಡಿದ ದಾಳಿಂಬೆ ಬೆಳೆ ರೋಗ ಬಿದ್ದು ಹಾಳಾಗಿದೆ. ಏನೆಲ್ಲಾಔಷಧ ಹೊಡೆದಿದ್ರೂ ಕಂಟ್ರೋಲ್ ಆಗಲಿಲ್ಲ. ಯಾರೋ ಹೇಳಿದಂತೆ ಮದ್ಯ ಮಿಕ್ಸ್ ಮಾಡಿ ಗಿಡಕ್ಕೆ ಹೊಡೆದ್ವಿ. ಈಗ ರೋಗ ಕಂಟ್ರೋಲ್ ಆಗೈತಿ. ಒಂದು ಪ್ಲಾಟ್ ಆದ್ರೂ ಉಳಿಯತಲ್ಲಅನ್ನೋ ಸಮಾಧಾನ ಐತಿ ಎಂದು ನಾಗಯ್ಯ, ಚಂದ್ರು. ದಾಳಿಂಬೆ ಬೆಳೆಗಾರ. ಗದ್ದಿಕೇರಿ ಗ್ರಾಮ. ಹಗರಿಬೊಮ್ಮನಹಳ್ಳಿ ಅವರು ಹೇಳುತ್ತಾರೆ.
ನಮ್ಮೂರಲ್ಲಿ ದಾಳಿಂಬೆ ಬೆಳೆದು ಬಾಳ ಜನ ಲಾಸ್ ಆಗಿದಾರೆ. ಆರೇಳು ಲಕ್ಷ ರೂ.ಸಾಲ ಐತಿ. ತಿನ್ನ ಬೇಕಂದ್ರೂ ಒಂದು ದಾಳಿಂಬೆ ಇಲ್ಲ.
ಹೆಗಡೆ ಮಲ್ಲಣ್ಣ. ಗದ್ದಿಕೇರಿ ದಾಳಿಂಬೆ ಬೆಳೆಗಾರ.
ಮುಂಗಾರಿಗೂ ಮುನ್ನವೇ ಮಳೆಯಾದ್ದರಿಂದ ರೋಗ ಉಲ್ಬಣಗೊಂಡಿದೆ. ರೋಗ ನಿಯಂತ್ರಣಕ್ಕೆ ಸಾಕಷ್ಟು ಔಷಧಗಳಿದ್ದರೂ ಒಬ್ಬರಿಂದ ಒಬ್ಬರಿಗೆ ಹರಡಿ ಮದ್ಯ ಸಿಂಪಡಿಸುತ್ತಿದ್ದಾರೆ. ಸದ್ಯದಲ್ಲಿ ಬೆಳೆಗಾರರು ಬೆಳೆ ನಷ್ಟದಲ್ಲಿದ್ದಾರೆ.
ಡಾ.ಎಚ್.ರಾಜೇಂದ್ರ. ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ. ಹಗರಿಬೊಮ್ಮನಹಳ್ಳಿ.