
ದಕ್ಷಿಣ ಕನ್ನಡ(ಮಂಗಳೂರು): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿದೆ. ನಿರಂತರವಾಗಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಜನ ತತ್ತರಿಸಿದ್ದು, ಹಲವೆಡೆ ಹಲವಾರು ಅವಾಂತರಗಳು ನಡೆದಿದೆ. ಮನೆಯೊಂದರ ಮೇಲೆ ಗುಡ್ಡ ಕುಸಿತವಾಗಿದ್ದರೆ, ಇನ್ನೊಂದೆಡೆ ಇಡೀ ಗ್ರಾಮವೇ ಜಲದಿಗ್ಭಂದನಕ್ಕೊಳಗಾಗಿದೆ. ಉಕ್ಕಿಹರಿದ ನದಿ ನೀರಿನಿಂದ ಡ್ಯಾಂ ಮುಳುಗಡೆಯಾಗಿದೆ.

j3tvkannada
ದಕ್ಷಿಣ ಕನ್ನಡದಲ್ಲಿ ಮಹಾ ಮಳೆಯ ರೌದ್ರನರ್ತನ ಮುಂದುವರಿದಿದೆ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಆರೆಂಜ್ ಅಲರ್ಟ್ ಇದ್ದು ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ. ಈ ನಡುವೆ ಮಳೆರಾಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಅವಾಂತರ ಸೃಷ್ಟಿಸಿದ್ದಾನೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಮಂಗಳೂರಿನ ಕದ್ರಿ ಕೈಬಟ್ಟಲ್ ಎಂಬಲ್ಲಿ ಮನೆ ಹಿಂಬದಿಯ ಗುಡ್ಡ ಕುಸಿದು ಬಿದ್ದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜೀವನದಿಗಳು ತುಂಬಿ ಹರಿಯುತ್ತಿದೆ. ಫಲ್ಗುಣಿ ನದಿ ತೀರದ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿದೆ. ಮಂಗಳೂರು ಹೊರವಲಯದ ಅದ್ಯಪಾಡಿಯ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಸುಮಾರು 35 ಕುಟುಂಬಗಳಿಗೆ ಇದ್ದ ಸಂಪರ್ಕಕಡಿತಗೊಂಡಿದೆ. ಇಡೀ ಗ್ರಾಮವೇ ಜಲಾವೃತಗೊಂಡು ನದಿಯಂತಾಗಿದೆ. ಜನರು ಊರು ಬಿಟ್ಟು ಹೊರ ಬರಲು ಆಗುತ್ತಿಲ್ಲ. ಸದ್ಯ ದೋಣಿಯೊಂದೇ ಆಶ್ರಯವಾಗಿದೆ.