
ಬೆಳಗಾವಿ: ಈ ರೈತ ಗ್ರಾಮ ಪಂಚಾಯತಿಗೆ ಅಲೆದಾಡಿ ರೋಸಿ ಹೋಗಿದ್ದರು. ಅದೇಷ್ಟು ಬಾರಿ ಸಿಬ್ಬಂದಿ ಬಳಿ ಗೋಗರೆದರೂ ಸಿಬ್ಬಂದಿ ಮಾತ್ರ ರೈತನ ಮನವಿಗೆ ಕ್ಯಾರೆ ಅಂದಿದ್ದಿಲ್ಲ, ಅಲೆದಾಡಿ ಬೇಸತ್ತಿದ್ದ ರೈತ. ಕೊನೆಗೂ ಗ್ರಾಮ ಪಂಚಾಯತ್ ಸಿಬ್ಬಂದಿಗೆ ತಕ್ಕ ಪಾಠ ಕಲಿಸಿದ್ದಾರೆ. ಹೌದು ದನದಕೊಟ್ಟಿಗೆ ನಿರ್ಮಾಣಕ್ಕಾಗಿ ರೈತ ಹಣ ಮಂಜೂರು ಮಾಡಿ ಕೊಡಿ ಎಂದು ಸಿಬ್ಬಂದಿ ಬಳಿ ಹಲವು ಬಾರಿ ಕೇಳಿದ್ದಾರೆ, ಅವರು ಜಪ್ಪಯ್ಯ ಅಂದಿಲ್ಲ, ಪಿತ್ತ ನೆತ್ತಿಗೇರಿದ ರೈತ ಗ್ರಾಮ ಪಂಚಾಯತಿ ಒಳಗೆಯೇ ಎಮ್ಮೇ ಕಟ್ಟಿ, ಹುಲ್ಲು ಹಾಕಿ ಗ್ರಾಂ ಪಂಚಾಯತಿ ಅಧಿಕಾರಿಗೆ ಬುದ್ದಿ ಕಲಿಸಿದ್ದಾರೆ. ವಿನೂತನ ಪ್ರತಿಭಟನೆ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

j3tvkannada
ಯಾರಿಗೇ ಆಗಲಿ ತಾಳ್ಮೆಗೊಂದು ಮಿತಿ ಇರುತ್ತೆ, ತಾಳ್ಮೆ ಕೆಟ್ಟಗ ಎಂಥವನಿಗಾದ್ರು ಸಿಟ್ಟು ಬರುತ್ತೆ ಅದೇ ಕೆಲಸವನ್ನು ಇಲ್ಲಿ ರೈತನೂ ಮಾಡಿದ್ದು. ದನದಕೊಟ್ಟಿಗೆ ನಿರ್ಮಾಣದ ಹಣ ಮಂಜೂರಾಗದ ಹಿನ್ನೆಲೆ ಬೇಸತ್ತು ಗ್ರಾಮ ಪಂಚಾಯತ್ ಕಚೇರಿ ಒಳಗೆ ಎಮ್ಮೆ ಕಟ್ಟಿ ಸತೀಶ ಕೋಳಿ ಎಂಬ ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಕಳೆದ ವರ್ಷ ಗ್ರಾಮ ಪಂಚಾಯತ್ ವತಿಯಿಂದ ದನದ ಕೊಟ್ಟಿಗೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದರು. ಆದರೆ ನಿರ್ಮಾಣ ಮಾಡಿ ವರ್ಷ ಕಳೆದರೂ ಇದುವರೆಗೂ ಹಣ ಬಾರದೇ ಇರುವುದಕ್ಕೆ ಆಕ್ರೋಶಗೊಂಡು ಇನ್ನೂ ಹೀಗೆ ಇದ್ರೆ ಆಗಲ್ಲ ಅಂತ ಪಂಚಾಯತ್ ಒಳಗೆ ಎಮ್ಮೆ ಕಟ್ಟಿ ಪ್ರತಿಭಟಿಸಿದ್ದಾರೆ.

j3tvkannada
ಸಂಬರಗಿ ಗ್ರಾಮ ಪಂಚಾಯತ್ ಕಚೇರಿ ಒಳಗಿನ ಕಿಟಕಿಗೆ ರೈತ ಎಮ್ಮೆ ಕಟ್ಟಿದ್ದಾರೆ. ಜೊತೆಗೆ ಅಲ್ಲೇ ಎಮ್ಮೆಗೆ ಮೇವು ಹಾಕಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಘಟನೆ ಮಾಹಿತಿ ಅರಿತು ಅಥಣಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗೊಂದಲ ಸರಿಪಡಿಸು ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ರೈತ ಸತೀಶ್ ಕೋಳಿ ಮಾತನಾಡಿ ನೋಡ್ರಿ ನಾವು ರೈತರು, ಸರ್ಕಾರ ರೈತರಿಗೆ ಅನುಕೂಲವಾಗಲಿ ಎಂದು ಹಲವು ಯೋಜನೆ ರೂಪಿಸಿದೆ. ಆದರೆ ನನಗೆ ಕಳೆದ ವರ್ಷ ಸಂಬರಗಿ ಗ್ರಾಮ ಪಂಚಾಯತ್ನಿಂದ ಐವತ್ತು ಸಾವಿರ ರೂಪಾಯಿ ವೆಚ್ಚದ ದನದ ಶೆಡ್ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಆದರೆ ನಿರ್ಮಾಣ ಮಾಡಿ ಒಂದು ವರ್ಷ ಕಳೆದರೂ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ.
ಅಧಿಕಾರಿಗಳನ್ನು ಕೇಳಿದರೆ ನಿಮಗೆ ಮಂಜೂರು ಮಾಡಿರುವ ಯೋಜನೆ ರದ್ದಾಗಿದೆ ಎಂದು ಹೇಳುತ್ತಾರೆ. ನಿರ್ಮಾಣ ಸಮಯದಲ್ಲಿ ಇಂಜಿನಿಯರ್ ಬಂದು ಫೋಟೋ ತೆಗೆದುಕೊಂಡು ಹೊಗಿದ್ದಾರೆ, ನಾನು ಸಾಲ ಸೋಲ ಮಾಡಿ ಇದನ್ನು ನಿರ್ಮಾಣ ಮಾಡಿದ್ದೇನೆ. ಸಾಲ ಕೊಟ್ಟವರು ಹಣ ಕೇಳುತ್ತಿದ್ದಾರೆ ನಾನು ಎಲ್ಲಿಂದ ಹಣ ಕೊಡಲಿ ಅಧಿಕಾರಿಗಳು ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಈ ತೀರ್ಮಾನಕ್ಕೆ ಬಂದಿರುವೆ ಎಂದರು. ನಂತರ ಅಧಿಕಾರಿಗಳು ಬಂದು ರೈತನನ್ನು ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ ರೈತನ ಸಮ್ಮುಖದಲ್ಲೇ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಒಟ್ಟಿನಲ್ಲಿ ರೈತರ ಮನವಿಗೆ ಕ್ಯಾರೇ ಎನ್ನದ ಅಧಿಕಾರಿಗಳಿಗೆ ರೈತ ಮಾತ್ರ ಸರಿಯಾಗೇ ಪಾಠ ಕಲಿಸಿದ್ದಾರೆ.