
ಕಲಬುರಗಿ: ರಾಜ್ಯದಲ್ಲಿ ಕಳೆದೊಂದು ವಾರದಿಂದ ವರುಣನ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಕೂಡ ಘೋಷಿಸಲಾಗಿದೆ. ಇದೀಗ ರಾಜ್ಯದಲ್ಲಿ ಮಹಾಮಳೆಗೆ ಮತ್ತೊಂದು ಬಲಿಯಾಗಿದ್ದು, ಕಲಬುರಗಿಯಲ್ಲಿ ಮನೆ ಗೋಡೆ ಕುಸಿದು 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಕಲಬುರಗಿಯ ಜೇವರ್ಗಿಯ ಗುಡೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಶಿವಪ್ಪ (10) ಎಂದು ಗುರುತಿಸಲಾಗಿದೆ. ಭಾಗ್ಯಮ್ಮ ಎಂಬ ಮಹಿಳೆಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ .

j3tvkannada.in
ಜಿಲ್ಲೆಯ ಹಲವಾರು ಕಡೆಗಳಲ್ಲಿ ಮಳೆ ಅವಾಂತರದಿಂದ ನಾನಾ ಸಂಕಷ್ಟಗಳು ಎದುರಾಗಿವೆ. ಗುಡ್ಡ ಕುಸಿತ, ಬೆಳೆಹಾನಿ, ನೆರೆ, ಜೀವ ಹಾನಿ, ಮುಂತಾದ ಹಲವಾರು ತೊಂದರೆಗಳಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇದೀಗ ಕಲಬುರಗಿಯಲ್ಲಿ ಪುಟ್ಟ ಬಾಲಕ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಇನ್ನೂ ಬಾಳಿ ಬದುಕಬೇಕಾಗಿದ್ದ ಬಾಲಕನ ಪ್ರಾಣ ಮಳೆಗೆ ಆಹುತಿಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಗೋಡೆ ಕುಸಿದು ಬಾಲಕನ ಮೇಲೆ ಬಿದ್ದು ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.