
ಬೆಳಗಾವಿ : ಕಳೆದ ಒಂದು ದಶಕದ ಸಮಸ್ಯೆಯಿಂದ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಬಂದ್ ಆಗಿ 10 ವರ್ಷಗಳೇ ಕಳೆದಿತ್ತು. ಸಾಕಷ್ಟು ಬಾರಿ ರಸ್ತೆ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಸಂಧಾನಕ್ಕೆ ಬಂದರು, ವೈಯಕ್ತಿಕ ಭೂಮಿ ವಿವಾದ ಹಿನ್ನೆಲೆ ರಸ್ತೆ ಅಭಿವೃದ್ಧಿಗೆ ಅಡೆ ತಡೆ ಉಂಟಾಗಿತ್ತು. ಈ ಸಮಸ್ಯೆಗೆ ನಾಂದಿ ಹಾಡಲಾಗಿದ್ದು, ರಸ್ತೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಾಗನೂರು ಪಿ.ಎ ಹಾಗೂ ಸಂಬರಗಿ ಗ್ರಾಮಕ್ಕೆ ಸಂಪರ್ಕಕಲ್ಪಿಸುವ ರಸ್ತೆ ಕೆಲ ಸ್ಥಳೀಯ ರೈತರ ಗೊಂದಲಗಳಿಂದ ಸಂಪರ್ಕ ನಿಂತು ಹೋಗಿತ್ತು. ರಸ್ತೆ ಇಲ್ಲದೇ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆಗಾಲ ಬಂತು ಅಂದರೆ ಸಾಕು ಶಾಲಾ ಮಕ್ಕಳು ಶಾಲೆಗೆ ಹೋಗಲು ಆಗದೇ ಮನೆಯಲ್ಲಿಯೇ ಪಾಠ ಕಲಿಯುವ ಅನಿವಾರ್ಯತೆ ಎದುರಾಗಿತ್ತು.
ರಸ್ತೆ ಇಲ್ಲದೇ ಅಗ್ರಣಿ ನದಿಯಲ್ಲಿ ನೀರು ಬಂದ ಕಾರಣ ತಂದೆಯೊಂದಿಗೆ ರಸ್ತೆ ದಾಟಲು ಹೋಗಿ ನೀರಲ್ಲಿ ಮುಳುಗಿ ಎರಡು ಮಕ್ಕಳು ಪ್ರಾಣ ಕಳೆದುಕೊಂಡ ಘಟನೆ ಇನ್ನು ಮಾಸಿಲ್ಲ. ಇದನ್ನು ಮನಗಂಡ ಅಥಣಿ ತಹಸೀಲ್ದಾರ್ ಸಿದ್ದರಾಯ ಭೋಸಗೆ, ಪುನೀತ್ ಪಾಸೊಡೆ, ಉಪ ತಹಸೀಲ್ದಾರ್ ಅಮಿತ್ ಕುಮಾರ್ ಡವಳೇಶ್ವರ, ಪಿ ಎಸ್ ಐ ಗಿರಿಮಲ್ಲಪ್ಪ ಉಪ್ಪಾರ ನೇತೃತ್ವದ ತಂಡ ಭೇಟಿ ನೀಡಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಎರಡು ಗ್ರಾಮಕ್ಕೆ ಸುಗಮ ರಸ್ತೆ ವ್ಯವಸ್ಥೆ ಕಲ್ಪಿಸಿ ಸ್ಥಳೀಯರ ಮೆಚ್ಚುಗೆ ಗಳಿಸಿದ್ದಾರೆ.
ರಸ್ತೆ ಅಭಿವೃದ್ಧಿಗೆ ಸ್ಥಳೀಯ ಶಾಸಕ ರಾಜು ಕಾಗೆ ಉತ್ತಮ ಸ್ಪಂದನೆ ನೀಡಿದ್ದು ಶೀಘ್ರವವೇ ಡಾಂಬರೀಕರಣ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.