
ವಿಜಯಪುರ : ಕೃಷ್ಣಾ ಕಣಿವೆಯಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದರಿಂದ ಅವಧಿಗೂ ಮುನ್ನವೇ ಆಲಮಟ್ಟಿ ಡ್ಯಾಂ ಅರ್ಧ ಭರ್ತಿಯಾಗಿದೆ. ಯುಕೆಪಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಕೈಗೊಳ್ಳಲು ಕಾಲುವೆ ನೀರು ಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಆದರೆ ಕೃಷ್ಣಾಭಾಗ್ಯ ಜಲನಿಗಮ ಕಳೆದೆರಡು ವರ್ಷಗಳಿಂದ ಕಾಲುವೆ ಜಾಲದಲ್ಲಿ ಕ್ಲೋಸರ್ ಕಾಮಗಾರಿಯನ್ನೇ (ದುರಸ್ತಿ) ಕೈಗೊಂಡಿಲ್ಲ. ಹೀಗಾಗಿ ಸಮರ್ಪಕವಾಗಿ ನೀರು ಹರಿಯದ ಸ್ಥಿತಿ ಎದುರಾಗಿದೆ.

ಆಲಮಟ್ಟಿ ಹಾಗೂ ನಾರಾಯಣಪುರ ಡ್ಯಾಂನಲ್ಲಿ ಸಂಗ್ರಹಿಸುವ ನೀರನ್ನು ವಿವಿಧ ಯೋಜನೆಗಳ ಮೂಲಕ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ 6.30 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮುಂಗಾರು ಬೆಳೆ ಕೈಗೊಳ್ಳಲು ಕಾಲುವೆಗಳಿಗೆ ನೀರು ಹರಿಸಬೇಕೆಂದು 5 ಜಿಲ್ಲೆಗಳ ರೈತರು ಆಗ್ರಹಿಸಿದ್ದಾರೆ. ಕಾಲುವೆಗಳಿಗೆ ನೀರು ಹರಿಸಿದರೆ ಅಚ್ಚುಕಟ್ಟು ಪ್ರದೇಶಕ್ಕೆ ಅದರಲ್ಲೂ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪಲಿದೆಯೇ? ಎಂಬ ಪ್ರಶ್ನೆ ಎದುರಾಗಿದೆ.
ಆಲಮಟ್ಟಿ ಎಡದಂಡೆ, ಆಲಮಟ್ಟಿ ಬಲದಂಡೆ, ಮುಳವಾಡ, ಇಂಡಿ ಲಿಫ್ಟ್ , ಗುತ್ತಿಬಸವಣ್ಣ, ನಾರಾಯಣಪುರ ಎಡದಂಡೆ-ಬಲದಂಡೆ ಯೋಜನೆಗಳ ಮೂಲಕ 5 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಕಾಲುವೆಗಳಿಗೆ ನೀರು ಹರಿಸುವ ಮುನ್ನ ಕ್ಲೋಸರ್ ಕಾಮಗಾರಿ ಕೈಗೊಳ್ಳುವುದು ವೈಜ್ಞಾನಿಕ ಪದ್ಧತಿ. ಆದರೆ ಕಳೆದ ವರ್ಷ ಕ್ಲೋಸರ್ ಕಾಮಗಾರಿಗೆ ಟೆಂಡರ್ ಕರೆದರೂ ಕೆಲಸ ನಡೆದಿರುವಾಗಲೇ ನೀರು ಹರಿಸಿದ್ದರಿಂದ ಕಾಮಗಾರಿ ಪೂರ್ಣಗೊಂಡಿತು.
ಪ್ರಸಕ್ತ ಸಾಲಿನಲ್ಲಿ ಕ್ಲೋಸರ್ ಕಾಮಗಾರಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆಯನ್ನೇ ನಡೆಸಲಿಲ್ಲ. ಅನುದಾನ ಇಲ್ಲದೆ, ದುರಸ್ತಿ ಕಾರ್ಯ ಕೈಗೊಳ್ಳುತ್ತಿಲ್ಲ.

ಹೀಗಾಗಿ ಸದ್ಯ ನೀರು ಹರಿಸಬೇಕಿರುವುದರಿಂದ ಕಾಲುವೆಗಳ ದುರಸ್ತಿ ಅಸಾಧ್ಯ ಎಂದು ಕೃಷ್ಣಾ ರೈತರು ದೂರಿದ್ದಾರೆ. ಕಾಮಗಾರಿಗೆ ಹಿಂದೇಟು ಹಿಂಗಾರು ಬೆಳೆಗೆ ನೀರು ಕೊಟ್ಟು ನಿಲ್ಲಿಸಿದ ನಂತರ ಅಂದರೆ ಫೆಬ್ರವರಿ ನಂತರ ಬೇಸಿಗೆಯಲ್ಲಿ ಕಾಲುವೆಗಳ ದುರಸ್ತಿ ಕೈಗೊಳ್ಳುವುದು ವಾಡಿಕೆ. ಅದರಲ್ಲೂ ಮುಖ್ಯಕಾಲುವೆ, ವಿತರಣಾ ಕಾಲುವೆ ಹಾಗೂ ಲ್ಯಾಟರಲ್ ಕಾಲುವೆಗಳ ದುರಸ್ತಿ ಕೈಗೊಳ್ಳಲೇಬೇಕು. ಇದಕ್ಕಾಗಿ ಪ್ರತಿ ವರ್ಷ ಅನುದಾನವನ್ನೂ ಕೊಡಲಾಗುತ್ತದೆ. ಆದರೆ ಎರಡು ವರ್ಷಗಳಿಂದ ಯುಕೆಪಿ ಕಾಲುವೆ ಜಾಲದ ದುರಸ್ತಿಯನ್ನೇ ಕೈಗೊಂಡಿಲ್ಲ.
ಕಾಲುವೆಗಳಲ್ಲಿ ಗಿಡ, ಮುಳ್ಳಿನ ಕಂಟಿ, ಹುಲ್ಲುಬೆಳೆದಿದೆ. ಅಲ್ಲದೆ, ಅಲ್ಲಲ್ಲಿ ಕಾಲುವೆಯ ಕಾಂಕ್ರೀಟ್ ಕಿತ್ತಿದೆ. ನೀರು ಹರಿಸಿದರೆ ಸರಾಗವಾಗಿ ಹರಿದು ಕೊನೆಭಾಗಕ್ಕೆ ಮುಟ್ಟದ ಸ್ಥಿತಿ ಇದೆ. ಅಲ್ಲದೆ ಕಾಲುವೆಯ ಕಾಂಕ್ರೀಟ್ ಕಿತ್ತಿದ್ದರಿಂದ ನೀರಿನ ಒತ್ತಡಕ್ಕೆ ಒಡೆಯುವ ಅಪಾಯವೂ ಇದೆ ಎಂದು ರೈತರು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಾಲುವೆ ನಿರ್ವಹಣೆ ಸಮರ್ಪಕವಾಗಿಲ್ಲ. ಬೇಸಿಗೆಯಲ್ಲಿ ಕಾಲುವೆಗಳ ಕ್ಲೋಸರ್ ಕಾಮಗಾರಿ ಕೈಗೊಳ್ಳಬೇಕು. ಆದರೆ ನೀರು ಹರಿಸುವ ಸಮಯ ಬಂದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಸಾಕಷ್ಟು ಕಡೆ ಕಾಲುವೆಗಳು ಹಾಳಾಗಿದ್ದು, ನೀರು ವ್ಯರ್ಥವಾಗಿ ಹಳ್ಳಗಳಿಗೆ ಸೇರುತ್ತಿದೆ.