
ದಕ್ಷಣ ಕನ್ನಡ(ಮಂಗಳೂರು): ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಿಂದ ಬಂಟ್ವಾಳದವರೆಗೆ ನಡೆಯುತ್ತಿರುವ 4 ಪಥದ ಹೈವೇ ರಸ್ತೆಯ ಕಾಮಗಾರಿಯು ವಿಳಂಬವಾಗುತ್ತಿದೆ. ಕೆಲವು ಕಡೆಯಲ್ಲಂತೂ ಅರ್ಧಕ್ಕೆ ನಿಂತ ಕಾಮಗಾರಿಯಿಂದ ವಾಹನ ಸವಾರರು, ಜನರು ಪರದಾಡುವಂತಾಗಿದೆ. ಆದರೆ ಕಾಮಗಾರಿ ವಿಳಂಬ ಆಗುತ್ತಿರುವುದು ಏಕೆ ಎಂಬ ಪ್ರಶ್ನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನದೇ ಆದ ಕಾರಣ ಕೊಡುತ್ತಿದೆ.

j3tvkannada.in
ಈ ರಸ್ತೆಯ ಕಾಮಗಾರಿಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ವ್ಯಾಪ್ತಿಗೆ ಒಳಪಟ್ಟಿದೆ. ಇದೀಗ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಹಲವು ಕಡೆಗಳಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಇನ್ನು ರಸ್ತೆ ನಿರ್ಮಾಣಕ್ಕೆ ಗುಡ್ಡ ತೆರವು ಮಾಡಿರುವುದು ಸಮಸ್ಯೆಯ ಸೃಷ್ಟಿಗೆ ಕಾರಣವಾಗುತ್ತಿದೆ.
ಕಾಮಗಾರಿ ವಿಳಂಬಕ್ಕೆ ಏನು ಕಾರಣ ಎಂಬ ಬಗ್ಗೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಲೋಕೋಪಯೋಗಿ ಇಲಾಖೆಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಲಾಖೆ, ಅಡ್ಡಹೊಳೆಯಿಂದ ಬಂಟ್ವಾಳವರೆಗಿನ (ರಾಹೆ-75) ಹೆದ್ದಾರಿಯನ್ನು ದ್ವಿಪಥ ರಸ್ತೆಯಿಂದ 4 ಪಥದ ರಸ್ತೆಯನ್ನಾಗಿ ಮೇಲ್ದರ್ಜೇಗೇರಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದನ್ನು ಎರಡು ಪ್ಯಾಕೇಜುಗಳಾಗಿ ಕೈಗೊಳ್ಳಲಾಗಿರುತ್ತದೆ ಎಂದು ವಿವರ ನೀಡಿದೆ.
ಅಡ್ಡಹೊಳೆಯಿಂದ (ಗುಂಡ್ಯ ಸಮೀಪ) ಬಂಟ್ವಾಳ ಕ್ರಾಸ್ ಸೆಕ್ಷನ್ ವರೆಗಿನ 4 ಲೇನ್ ರಸ್ತೆ ಕಾಮಗಾರಿ ಡಿಸೈನ್ ಕಿ.ಮೀ.255.703 ರಿಂದ ಡಿಸೈನ್ ಕಿ.ಮೀ.270.270 ವರೆಗೆ ಒಟ್ಟು 15.13 ಕಿ.ಮೀ ಉದ್ದದಲ್ಲಿ ಕೈಗೊಳ್ಳಲಾಗಿದೆ. ಪ್ರಸ್ತುತ ಈ ಯೋಜನೆಯ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ.
ಅತಿಯಾದ ಆಕಾಲಿಕ ಮಳೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ಸ್ಥಳೀಯ ನಾಗರಿಕರಿಂದ ಹೆಚ್ಚುವರಿ ಸೌಲಭ್ಯಗಳ ಬೇಡಿಕೆ, ಇದರ ಫಲವಾಗಿ ಕಾಮಗಾರಿಯ ಕಾರ್ಯವ್ಯಾಪ್ತಿಯ ಬದಲಾವಣೆ ಮಾಡಲಾಗಿದೆ. 2.5315 ಹೆಕ್ಟೇರ್ ಅರಣ್ಯ ತಿರುವು ಪ್ರದೇಶ ಇದೆ. ಈ ವಿಚಾರವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಇದೆ. ಪ್ರಸ್ತುತ 14.31 ಕಿ.ಮೀ. ಉದ್ದದ ರಸ್ತೆ ಪೂರ್ಣಗೊಂಡಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸುವ ನಿರೀಕ್ಷಿತ ಸಮಯ 2025 ಆಗಸ್ಟ್ 31 ಕ್ಕೆ ಆಗಿದ್ದು, ಆ ಸಮಯಕ್ಕೆ ಕಾಮಗಾರಿಯು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಉತ್ತರ ನೀಡಿದೆ.
ಅಡ್ಡಹೊಳೆಯಿಂದ (ಗುಂಡ್ಯ ಸಮೀಪ) ಬಂಟ್ವಾಳ ಕ್ರಾಸ್ ಸೆಕ್ಷನ್ ವರೆಗಿನ 4 ಪಥದ ರಸ್ತೆ ಕಾಮಗಾರಿ ಕಿ.ಮೀ.270.270 ರಿಂದ ಕಿ.ಮೀ.318.55 ವರೆಗೆ ಕೈಗೊಳ್ಳಲಾಗಿದೆ. ಈ ಪ್ಯಾಕೇಜ್ನಡಿ ಕಲ್ಲಡ್ಕ ಪಟ್ಟಣದಲ್ಲಿ ಪ್ರೈಓವರ್ ನಿರ್ಮಾಣ ಸೇರಿದಂತೆ ಕಿ.ಮೀ.311.57 ರಿಂದ 313.67 ವರೆಗೆ ಅಪ್ರೋಚ್ ರಸ್ತೆ ಒಳಗೊಂಡಂತೆ ಒಟ್ಟು ಯೋಜನೆಯ ಉದ್ದ 48.485 ಕಿ.ಮೀಗಳಾಗಿರುತ್ತವೆ.