
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಕಂಬವನ್ನು ಸುಮಾರು 50 ಅಡಿಗಳಷ್ಟು ದೂರ ಎಳೆದೊಯ್ದ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದಲ್ಲಿ ನಡೆದಿದೆ.

j3tvkannada
ಚಿಕ್ಕಮಗಳೂರು ನೋಂದಣಿಯ ಸೆಲೋರಿಯಾ ಕಾರು ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಕಿತ್ತು ಕಾರಿನ ಮೇಲೆ ಮುರಿದು ಬಿದ್ದಿದೆ. ಅತಿ ವೇಗದ ಪರಿಣಾಮ, ಕಂಬವನ್ನು ಸುಮಾರು 50 ಅಡಿಗಳಷ್ಟು ದೂರ ಕಾರು ಎಳೆದೊಯ್ದಿದೆ.
ವಿದ್ಯುತ್ ಕಂಬಕ್ಕೆ ಹಾಕಿದ್ದ ಗ್ರೌಂಡಿಂಗ್ ವೈರ್ ಕೂಡ ಕಿತ್ತು ಬಂದಿರೋದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಅಪಘಾತವಾಗುತ್ತಿದ್ದಂತೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡ ಪರಿಣಾಮ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾರು ಕಂಬಕ್ಕೆ ಡಿಕ್ಕಿ ಆಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡು ದೊಡ್ಡ ಅನಾಹುತ ತಪ್ಪಿದೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.