
ಗದಗ: ನಗರದ ಖಾನತೋಟ ಓಣಿಯಲ್ಲಿರುವ ಖಾನಸಾವಲಿ ದರ್ಗಾ ಪಕ್ಕದಲ್ಲಿ ಆ ಭಾಗದ ಮುಸ್ಲಿಂ ಕಮಿಟಿಯು ಮಸೀದಿ ಕಟ್ಟಿಸುತ್ತಿದ್ದು, ಇದಕ್ಕೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿ ಕ್ರಾಂತಿ ಸೇನಾ ಗದಗ ಜಿಲ್ಲಾ ಘಟಕದ ಸದಸ್ಯರು ಗದಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕ್ರಾಂತಿ ಸೇನಾ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಬಾಕಳೆ ಮಾತನಾಡಿ, ದರ್ಗಾ ಪಕ್ಕದಲ್ಲಿ ಮಸೀದಿ ಕಟ್ಟುತ್ತಿರುವುದು ಖಂಡನೀಯ. ಈ ದರ್ಗಾದಲ್ಲಿ ಸುಮಾರು ವರ್ಷಗಳಿಂದ ಓಣಿಯಲ್ಲಿರುವ ಹಿಂದೂ, ಮುಸ್ಲಿಮರು ಭಾವೈಕ್ಯದಿಂದ ಪೂಜೆ ಮಾಡಿಕೊಂಡು ಬಂದಿರುತ್ತಾರೆ. ಖಾನಸಾವಲಿ ದರ್ಗಾಕ್ಕೆ ಅದರದೇ ಆದ ಹಿನ್ನೆಲೆ ಇದೆ. ಆದರೆ ಈಗ ಪಕ್ಕದಲ್ಲಿ ಮಸೀದಿ ಕಟ್ಟುವುದರಿಂದ ಇದು ಕೋಮುಗಲಭೆ ಸೃಷ್ಟಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

j3tvkannada
ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ ಮತ್ತು ನಗರಸಭೆ ತಕ್ಷಣವೇ ಈ ಮಸೀದಿ ಕಾಮಗಾರಿ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಮಸೀದಿ ಪ್ರಾರಂಭಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ಈ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆ, ಖಾನತೋಟ ಓಣಿಯ ಹಿಂದೂಗಳೆಲ್ಲ ಸೇರಿಕೊಂಡು ಪಕ್ಕದಲ್ಲಿ ಮಂದಿರ ನಿರ್ಮಾಣ ಮಾಡಲಿದ್ದೇವೆ ಎಂದು ಎಚ್ಚರಿಸಿದರು. ಮುಂದೆ ಏನಾದರೂ ತೊಂದರೆ ಆದರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಿಲಿದೆ ಎಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹಬೀಬ್, ಕಿರಣ್ ಕಲಾಲ್, ನವೀನ್ ಕೋಟೆಕಲ್, ಬುಡ್ಡ ಕಲಬುರ್ಗಿ, ಸುರೇಶ್ ಚಿತ್ರಗಿ, ಕ್ಷತ್ರಿಯ ಬ್ರಿಗೇಡ್ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ನಿರಂಜನ್, ಬಿಜೆಪಿ ಪಕ್ಷದ ಹಿರಿಯರಾದ ಜಗನ್ನಾಥಸಾರಾಣಿ ಚಂದವರಿ, ರಾಜರಾಜೇಶ್ವರಿ ಮಹಿಳಾ ಮಂಡಲದ ಅಧ್ಯಕ್ಷೆ ರೇಣುಕಾ ಕಬಾಡಿ, ಪದಾಧಿಕಾರಿಗಳು ಖಾನತೋಟ ಓಣಿಯ ಹಿರಿಯರು, ಯುವಕರು ಇದ್ದರು.