
ಬೆಳಗಾವಿ: ಶಾಂತಿಗಿರಿಯ ಜೈನ ತೀರ್ಥಕ್ಷೇತ್ರದಲ್ಲಿ ದೇಶಭೂಷಣ ಮಹಾರಾಜ ಮತ್ತು ಮುನಿಸಾಗರ ಮಹಾರಾಜರ ಪುಣ್ಯತಿಥಿ ನಿಮಿತ್ತ ಮಹಾಮಸ್ತಕಾಭಿಷೇಕ, ವಿನಯಾಂಜಲಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

j3tvkannada
ಆಧ್ಯಾತ್ಮಿಕ ಕೇಂದ್ರವಾದ ಚಿಕ್ಕೋಡಿ ತಾಲೂಕಿನ ಕೊಥಳಿಯ ಶ್ರೀ ಶಾಂತಿಗಿರಿ ಕ್ಷೇತ್ರ ಜೈನ ಸಮುದಾಯದ ಪ್ರಮುಖ ತೀರ್ಥಕ್ಷೇತ್ರವಾಗಿದೆ. ಶ್ರವಣ ಬೆಳಗೊಳದಂತೆಯೇ ಇದು ಜೈನರಿಗೆ ಧಾರ್ಮಿಕವಾಗಿ ಅತ್ಯಂತ ಮಹತ್ವದ ಸ್ಥಳವಾಗಿದೆ. ಇಲ್ಲಿ ಸ್ಥಾಪಿತವಾದ ಮಿನಿ ಗೊಮ್ಮಟೇಶ್ವರ ಮೂರ್ತಿಗಳು ಭಕ್ತರ ಗಮನ ಸೆಳೆಯುತ್ತವೆ. ಈ ಕ್ಷೇತ್ರದಲ್ಲಿ ಇತ್ತೀಚೆಗೆ ಗೌರವ ಆಚಾರ್ಯ ದೇಶಭೂಷಣ ಮಹಾರಾಜ ಮತ್ತು ಆಚಾರ್ಯ ವರದ ಮುನಿಸಾಗರ ಮಹಾರಾಜರ ಪುಣ್ಯ ತಿಥಿಯ ನಿಮಿತ್ತ ವಿನಯಾಂಜಲಿ ಕಾರ್ಯಕ್ರಮ ಹಾಗೂ 1008 ಶಾಂತಿನಾಥ ಭಗವಾನ್, 1008 ಚಂದ್ರಪ್ರಭು ಭಗವಾನ್ ಮತ್ತು 1008 ಮಹಾವೀರ ಭಗವಾನರ ಮಹಾಮಸ್ತಕಾಭಿಷೇಕವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವು ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಸಮಿತಿಯಿಂದ ಧ್ವಜಾರೋಹಣ ನೆರವೇರಿತು. ಮಂತ್ರ ಪಠಣದೊಂದಿಗೆ ಜಯಘೋಷದಲ್ಲಿ ಜಲಾಭಿಷೇಕ, ದುಗ್ಧಾಭಿಷೇಕ, ಸಕ್ಕರೆ ಪೀಠಾಭಿಷೇಕ, ಶ್ರೀಗಂಧ, ಕುಂಕುಮ ಸೇರಿದಂತೆ ಒಂಬತ್ತು ದ್ರವ್ಯಗಳಿಂದ ಮಸ್ತಕಾಭಿಷೇಕ ನಡೆಸಲಾಯಿತು. ಈ ಪವಿತ್ರ ಕಾರ್ಯವು ಆಚಾರ್ಯ ಶಾಂತಿಸೇನ ಮಹಾರಾಜ್, ಕೊಲ್ಹಾಪುರದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿ, ಇತರ ಮುನಿಗಳು ಮತ್ತು ಮಾತಾಜಿಯವರ ಸಮ್ಮುಖದಲ್ಲಿ ಜರಗಿತು.
ಮಹಾಶಾಂತಿಧಾರಾ, ಪಂಚಾಮೃತ ಅಭಿಷೇಕ ಮತ್ತು ಜಿನ್ವಾನಿ ಕಾರ್ಯಕ್ರಮಗಳು ಭಕ್ತರ ಭಕ್ತಿ ಭಾವವನ್ನು ಇನ್ನಷ್ಟು ಹೆಚ್ಚಿಸಿದವು. ಎರಡು ಮುನಿಗಳ ಭಾವಚಿತ್ರದ ಮೆರವಣಿಗೆಯು ಭಕ್ತರಲ್ಲಿ ಭಾವುಕತೆ ಮೂಡಿಸಿತು. ಚರಣ ಪಾದಕ ನಮನದೊಂದಿಗೆ ವಿನಯಾಂಜಲಿ ಸಭೆಯು ಆಚಾರ್ಯರಿಗೆ ಗೌರವ ಸಲ್ಲಿಸಿತು. ಸಾವಿರಾರು ಭಕ್ತರು ಆಗಮಿಸಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದಿತು.
ಈ ಸಂಭ್ರಮವು ಜೈನ ಸಂಪ್ರದಾಯದ ಶ್ರೀಮಂತಿಕೆಯನ್ನು ಪ್ರದರ್ಶಿಸಿತು. ಶಾಂತಿಗಿರಿಯ ಈ ಧಾರ್ಮಿಕ ಕಾರ್ಯಕ್ರಮವು ಭಕ್ತರಿಗೆ ಆಧ್ಯಾತ್ಮಿಕ ಶಾಂತಿ ಮತ್ತು ಧಾರ್ಮಿಕ ಜಾಗೃತಿಯನ್ನು ಒದಗಿಸಿತು. ಇಂತಹ ಕಾರ್ಯಕ್ರಮಗಳು ಜೈನ ಸಂಸ್ಕೃತಿಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಒಡಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.