ಹಾಸನ: ಚಿನ್ನಾಭರಣಕ್ಕಾಗಿ ಕಂಟ್ರಾಕ್ಟರ್ನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಬಾಲಕ ಸೇರಿ ಇಬ್ಬರು ಆರೋಪಿಗಳನ್ನು ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಕಾರ್ಮಿಕರಾದ ಬಿಕ್ರಂ ಕುಮಾರ್ (25), ಅಪ್ರಾಪ್ತ ಸಚಿನ್ಕುಮಾರ್ (15) ಬಂಧಿತ ಆರೋಪಿಗಳು.

j3tvkannada
ಆರೋಪಿ ಬಿಕ್ರಂ ಕುಮಾರ್ ಬಿಹಾರದ ಪೂರ್ನಿಯಾ ಜಿಲ್ಲೆಯ ರಾಂಪುರ ಗ್ರಾಮದವನಾಗಿದ್ದು, ಅಪ್ರಾಪ್ತ ಬಾಲಕ ಸಚಿನ್ಕುಮಾರ್ ಪೂರ್ನಿಯಾ ಜಿಲ್ಲೆಯ ರೂಪೋಲಿ ಗ್ರಾಮದವನೆಂದು ತಿಳಿದು ಬಂದಿದೆ. ಬಿಕ್ರಂ ಕುಮಾರ್ 2 ತಿಂಗಳ ಹಿಂದೆ ಕುಟುಂಬ ಸಮೇತರಾಗಿ ಕೆಲಸ ಹುಡುಕಿಕೊಂಡು ಅರಸೀಕೆರೆಗೆ ಬಂದಿದ್ದ. ಬಳಿಕ ಒಂದೂವರೆ ತಿಂಗಳು ಕೆಲಸ ಮಾಡಿ, ಹಬ್ಬ ಇದೆ ಎಂದು ಹೇಳಿ ಗ್ರಾಮಕ್ಕೆ ತೆರಳಿದ್ದ. ಬಿಕ್ರಂ ಕುಮಾರ್ ಪತ್ನಿ ಹಾಗೂ ಮಗುವನ್ನು ಊರಲ್ಲೇ ಬಿಟ್ಟು, ಅಪ್ರಾಪ್ತ ಬಾಲಕನನ್ನು ಕಳೆದ ಹದಿನೈದು ದಿನಗಳ ಹಿಂದೆ ಅರಸೀಕೆರೆಗೆ ಕರೆದುಕೊಂಡು ಮತ್ತೆ ಬಂದಿದ್ದ.
ಅರಸೀಕೆರೆ ಪಟ್ಟಣದ ವಿಜಯಕುಮಾರ್ (46), ಕಟ್ಟಡ ಹಾಗೂ ಲೇಬರ್ ಗುತ್ತಿಗೆದಾರರಾಗಿದ್ದರು. ಕೆ.ಎ.ಸ್ಆರ್.ಟಿ.ಸಿ ಮುಂಭಾಗ ನಿರ್ಮಾಣವಾಗುತ್ತಿರುವ ಹೊಸ ಹೋಟೆಲ್ ಕಟ್ಟಡದ ಗಾರೆ ಕೆಲಸಕ್ಕೆ ಬಿಕ್ರಂ ಕುಮಾರ್ ಹಾಗೂ ಅಪ್ರಾಪ್ತ ಬಾಲಕನನ್ನು ಕರೆ ತಂದಿದ್ದರು. ಕೆಲವು ದಿನಗಳಿಂದ ಆರೋಪಿಗಳಾದ ಬಿಕ್ರಂ ಕುಮಾರ್ ಹಾಗೂ ಅಪ್ರಾಪ್ತ ಬಾಲಕ, ವಿಜಯ್ಕುಮಾರ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು. ವಿಜಯಕುಮಾರ್ ಯಾವಾಗಲೂ ಕೊರಳಿನಲ್ಲಿ ದಪ್ಪದಾದ ಚಿನ್ನದ ಸರ, ನಾಲ್ಕೈದು ಚಿನ್ನದ ಉಂಗುರಗಳನ್ನು ಹಾಕಿಕೊಳ್ಳುತ್ತಿದ್ದರು. ವಿಜಯಕುಮಾರ್ ಮೈಮೇಲಿದ್ದ ಚಿನ್ನದ ಒಡವೆಗಳ ಮೇಲೆ ಆರೋಪಿಗಳು ಕಣ್ಣು ಹಾಕಿದ್ದು, ಅದನ್ನು ಪಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದರು. ಅದರಂತೆ ವಿಜಯಕುಮಾರ್ ಅವರನ್ನು ಹತ್ಯೆ ಮಾಡಿದ್ದರು.
ಕೊಲೆ ಆರೋಪಿಗಳನ್ನು ಅರಸೀಕೆರೆ ನಗರ ಠಾಣೆ ಪೊಲೀಸರು ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 2 ಚಿನ್ನದ ಸರ, 3 ಚಿನ್ನದ ಉಂಗುರಗಳು ಹಾಗೂ 1 ಬೈಕ್ ವಶಕ್ಕೆ ಪಡೆದಿದ್ದಾರೆ.