
ಕೊಪ್ಪಳ: ವಿಶ್ವವಿಖ್ಯಾತವಾಗಿರುವ ಲಕ್ಷಾಂತರ ಭಕ್ತರನ್ನು ಹೊಂದಿರುವ ಅಂಜನಾದ್ರಿ ಬೆಟ್ಟದಲ್ಲಿ ದಿನೇ ದಿನೇ ಅವ್ಯವಸ್ಥೆಗಳು ಕಂಡು ಬರುತ್ತಿವೆ. ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯ ಸ್ವಾಮಿ ಪೂಜೆಯಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ಭಕ್ತರಿಗೆ ಪೂಜೆ ಮಾಡಿಕೊಡಲು ಅರ್ಚಕರೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಭಕ್ತರು ಪೂಜೆಗೆ ಬಂದಾಗ ಭದ್ರತಾ ಸಿಬ್ಬಂದಿ ದೇವರಿಗೆ ಪೂಜೆ ಮಾಡಿ, ಹರಕೆ ಸಲ್ಲಿಸುತ್ತಿದ್ದಾರೆ.

j3tvkannada
ಪ್ರತೀ ವರ್ಷ ಕೋಟಿ ಕೋಟಿ ಆದಾಯಗಳಿಸುವಂತಹ ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿನ ಅವ್ಯವಸ್ಥೆ ಕಂಡು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆಂಜನೇಯ ಸ್ವಾಮಿಗೆ ಪೂಜೆ ಮಾಡಲು ಅರ್ಚಕರೇ ಇಲ್ವಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಹಲವು ಟೀಕಾ-ಟಿಪ್ಪಣಿಗಳು ಕೂಡ ವ್ಯಕ್ತವಾಗುತ್ತಿವೆ.
ಸಚಿವ ಸತೀಶ ಜಾರಕಿಹೊಳಿ ಪುತ್ರ ಅಮರನಾಥ ಕೂಡ ಅಂಜನಾದ್ರಿ ಬೆಟ್ಟಕ್ಕೆ ಬಂದಾಗ ಆಂಜನೇಯಸ್ವಾಮಿಗೆ ಅಲ್ಲಿನ ಸಿಬ್ಬಂದಿ, ಗಾರ್ಡ್ ಒಬ್ಬರಿಂದ ಆರತಿ ಮಾಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡುತ್ತಿದ್ದು, ಅಂಜನಾದ್ರಿಯ ಆಡಳಿತ ಮಂಡಳಿಯ ಕಾರ್ಯ ವ್ಯಾಪಕ ಟೀಕೆಗೊಳಗಾಗಿದೆ.
ವಿಶ್ವವಿಖ್ಯಾತ ಅಂಜನಾದ್ರಿ ಬೆಟ್ಟದಲ್ಲಿ ಅವ್ಯವಸ್ಥೆ:-
ಅಂಜನಾದ್ರಿ ಬೆಟ್ಟವು ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿಯಲ್ಲಿದೆ. ಇದು ರಾಮಾಯಣದಲ್ಲಿ ಉಲ್ಲೇಖಿತವಾದ ಪವಿತ್ರ ಕ್ಷೇತ್ರವಾಗಿದ್ದು, ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಈ ಬೆಟ್ಟವು ಧಾರ್ಮಿಕ, ಐತಿಹಾಸಿಕ ಮತ್ತು ಪ್ರಕೃತಿಯ ಸೌಂದರ್ಯದಿಂದ ಕೂಡಿದ ವಿಶಿಷ್ಟ ತಾಣವಾಗಿದೆ. ಹೀಗಾಗಿ ಬೆಟ್ಟಕ್ಕೆ ದೇಶ ವಿದೇಶದಿಂದಲೂ ಭಕ್ತರ ದಂಡೇ ಆಗಮಿಸುತ್ತದೆ.
ಪುರಾಣಗಳ ಪ್ರಕಾರ, ಅಂಜನಾದ್ರಿ ಬೆಟ್ಟವು ಶ್ರೀ ಆಂಜನೇಯನ ಜನ್ಮಸ್ಥಳವಾಗಿದೆ. ಕೇಸರಿಯ ಪತ್ನಿಯಾದ ಅಂಜನಿಯು ಇಲ್ಲಿ ತಪಸ್ಸು ಮಾಡಿ, ಶಿವನ ಅವತಾರವಾದ ಹನುಮಂತನನ್ನು ಮಗನಾಗಿ ಪಡೆದಳು. ಈ ಕಾರಣದಿಂದ ಬೆಟ್ಟಕ್ಕೆ “ಅಂಜನಾದ್ರಿ” ಎಂಬ ಹೆಸರು ಬಂದಿದೆ. ಬೆಟ್ಟದ ತುದಿಯಲ್ಲಿ ಕಲ್ಲಿನಿಂದ ಕೆತ್ತಲಾದ ಹನುಮಂತನ ವಿಗ್ರಹವಿರುವ ದೇವಸ್ಥಾನವಿದೆ. ಇದರ ಜೊತೆಗೆ ರಾಮ, ಸೀತೆ ಮತ್ತು ಅಂಜನಾದೇವಿಯ ಗುಡಿಗಳೂ ಇವೆ. ರಾಮಾಯಣದಲ್ಲಿ ಈ ಸ್ಥಳವನ್ನು ಕಿಷ್ಕಿಂದೆ ಎಂದು ಕರೆಯಲಾಗಿದೆ, ಇದು ವಾನರರ ರಾಜ್ಯವಾಗಿತ್ತು.
ಬೆಟ್ಟದ ತುದಿಯಲ್ಲಿರುವ ಹನುಮಂತನ ದೇವಸ್ಥಾನವನ್ನು ತಲುಪಲು ಸುಮಾರು 575 ಮೆಟ್ಟಿಲುಗಳನ್ನು ಹತ್ತಬೇಕು. ಈ ಪಯಣವು ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ. ದೇವಾಲಯದಲ್ಲಿರುವ ಹನುಮಂತನ ವಿಗ್ರಹವು ಬಂಡೆಯಿಂದ ಕೆತ್ತಲ್ಪಟ್ಟಿದೆ, ಇದು ಇತಿಹಾಸ ಮತ್ತು ಕಲಾತ್ಮಕತೆಯನ್ನು ಪ್ರತಿಬಿಂಬಿಸುತ್ತದೆ. ಅಂಜನಾದ್ರಿ ಬೆಟ್ಟವು ಹಂಪಿಯಿಂದ ಸುಮಾರು 23 ಕಿ.ಮೀ ದೂರದಲ್ಲಿದ್ದು, ಹಂಪಿಯ ಐತಿಹಾಸಿಕ ದೇವಾಲಯಗಳು ಮತ್ತು ಶಿಲಾಮೂರ್ತಿಗಳನ್ನು ಇಲ್ಲಿಂದ ವೀಕ್ಷಿಸಬಹುದು.
ರಾಜ್ಯ ಸರ್ಕಾರವು ಅಂಜನಾದ್ರಿಯನ್ನು ಅಂತರಾಷ್ಟ್ರೀಯ ಮಟ್ಟದ ಯಾತ್ರಾಸ್ಥಳವನ್ನಾಗಿ ಅಭಿವೃದ್ಧಿಪಡಿಸಲು 100 ಕೋಟಿ ರೂಪಾಯಿಗಳ ಯೋಜನೆಯನ್ನು ಘೋಷಿಸಿದೆ. ಇದರಿಂದ ಯಾತ್ರಿಗಳಿಗೆ ಆಧುನಿಕ ಸೌಲಭ್ಯಗಳು ಲಭ್ಯವಾಗಲಿವೆ. ಇನ್ನೂ ಇಲ್ಲಿಗೆ ಭಕ್ತರು ದೇಶ ವಿದೇಶಗಳಿಂದಲೂ ಬರುತ್ತಿದ್ದು, ಕೋಟ್ಯಾಂತರ ರೂಪಾಯಿ ಆದಾಯ ಕೂಡ ಬರುತ್ತೆ. ಇದೀಗ ಇಂತಹ ದೇವಾಲಯದಲ್ಲಿಯೇ ಅವ್ಯವಸ್ಥೆ ಕಂಡು ಬಂದಿದೆ. ಭಕ್ತರಿಗೆ ಪೂಜೆ ಮಾಡಿಕೊಡಲು ಅರ್ಚಕರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಬೆಳವಣಿಗೆಗಳು ಮತ್ತು ಅಂಜನಾದ್ರಿಯ ಆಡಳಿತ ಮಂಡಳಿಯ ಕಾರ್ಯ ವ್ಯಾಪಕ ಟೀಕೆಗೆ ಗುರಿಯಾಗಿದೆ.