
ದಕ್ಷಿಣ ಕನ್ನಡ (ಮಂಗಳೂರು): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ ಮೇ 27 ರಂದು ನಡೆದ ಟೆಂಪೊ ಚಾಲಕ ಅಬ್ದುಲ್ ರಹೀಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಭಾಗದ ಕಾಂಗ್ರೆಸ್ ಮುಸ್ಲಿಂ ಮುಖಂಡರು ಅಸಮಾಧಾನಗೊಂಡಿದ್ದಾರೆ. ಪಕ್ಷಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಕೊಲೆ ಆಗಿದೆ ಎಂದು ಹೇಳಿಕೆ ನೀಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಮುಸ್ಲಿಂ ಮುಖಂಡರು ಅಸಮಾಧಾನಗೊಂಡಿದ್ದಾರೆ.

j3tvkannada
ಬೇಜವಾಬ್ದಾರಿ ಹೇಳಿಕೆ ನೀಡಿದ ಅವರನ್ನು ಬದಲಾಯಿಸಬೇಕೆಂದು ಆಗ್ರಹಿಸಿದ್ದಾರೆ. ಸಚಿವರು ಮಾತನ್ನು ಹಿಂಪಡೆಯಬೇಕೆಂದು ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ಅಲ್ಲದೆ ಗೃಹಸಚಿವ ಜಿ ಪರಮೇಶ್ವರ್ ಅವರನ್ನೂ ಬದಲಾಯಿಸಬೇಕು ಎಂಬ ಒತ್ತಡ ಕೇಳಿಬಂದಿದೆ. ಶಾಂತ ಸ್ವಭಾವದ ಗೃಹಮಂತ್ರಿ ಭೇಡ, ಖಡಕ್ ವ್ಯಕ್ತಿ ಗೃಹಮಂತ್ರಿಯಾಗಿ ಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಮುಸ್ಲಿಂ ಸಮುದಾಯದಲ್ಲಿ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಅಶ್ರಫ್ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಮಂಗಳೂರಲ್ಲಿ ಮದ್ಯಾಹ್ನ ಸಭೆ ನಡೆಯಲಿದ್ದು ಅಲ್ಲಿ ಮುಂದಿನ ನಿರ್ಧಾರ ತಗೋತೇವೆ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ನ್ಯಾಯ ಸಿಗುವವರೆಗೂ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ.

j3tvkannada
ಅಲ್ಲದೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಹುದ್ದೆಗಳಿಗೆ ರಾಜೀನಾಮೆ ನೀಡಿ ನಂತರ ಪರ್ಯಾಯ ಪಕ್ಷ ಕಟ್ಟುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಮಂಗಳೂರು ಸದ್ಯದ ಪರಿಸ್ಥಿತಿ ಬಗ್ಗೆ ಸಿ ಎಂ ಸಭೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಂತೆ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಿಗೆ ಸಿ.ಎಂ ತಾಕೀತು ಮಾಡಿದ್ದಾರೆ. ಎಷ್ಟೇ ಪ್ರಭಾವಿಯಾಗಿದ್ರೂ ಕಾನೂನಿನಡಿ ಕ್ರಮ ತೆಗೆದುಕೊಳ್ತೇವೆ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮಂಗಳೂರಲ್ಲಿ ಸೌಹಾರ್ದತೆ ಬರಬೇಕು ಹಿಂದೂ ಮುಸ್ಲಿಂ ಧ್ವೇಷ ಇರಬಾರದು ಎಂದಿದ್ದಾರೆ.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಕಾನೂನನ್ನು ಬಿಗಿ ಮಾಡುತ್ತೇವೆ. ಯಾರ ಮೇಲೂ ಮುಲಾಜಿಟ್ಟು ಕೊಳ್ಳುವುದಿಲ್ಲ. ಇದೇ ರೀತಿ ಮುಂದುವರಿದರೆ ಸರಿಯಿರೋದಿಲ್ಲ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ತಂಡಗಳಲ್ಲಿ ತನಿಖೆ ನಡೆಯುತ್ತಿದೆ. ಬಂಟ್ವಾಳ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಆರ್. ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

j3tvkannada
ದೂರುದಾರ ನಿಸಾರ್ ನೀಡಿದ ಮಾಹಿತಿಯಂತೆ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ ಬಡಗಬೆಳ್ಳೂರಿನ ರಹಿಮಾನ್ ಅಲಿಯಾಸ್ ಅಬ್ದುಲ್ ರಹೀಂ ಮತ್ತು ಕಲಂದರ್ ಶಾಫಿ ಎಂಬವರಿಗೆ ತಲವಾರಿನಿಂದ ಹಲ್ಲೆ ಮಾಡಿದ್ದು, ಅವರು ಗಂಭೀರ ಗಾಯಗೊಂಡು ಬಿದ್ದಿದ್ದಾರೆ ಎಂಬ ಮಾಹಿತಿಯಂತೆ ಸ್ಥಳಕ್ಕೆ ಹೋದಾಗ ರಹೀಂ ಅವರ ಪಿಕಪ್ ಅಲ್ಲಿ ನಿಂತಿದ್ದು, ಅವರು ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕಲಂದರ್ ಶಾಫಿ ತೀವ್ರ ಗಾಯಗೊಂಡು ಪಕ್ಕದಲ್ಲೇ ಕುಳಿತಿದ್ದರು.
ಕೂಡಲೇ ಗಾಯಾಳು ಶಾಫಿ ಅವರನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ. ಈ ವೇಳೆ ಶಾಫಿ ಹೇಳಿದಂತೆ ಮಧ್ಯಾಹ್ನ ೩ ರಿಂದ ೩.೩೦ ರ ಅವಧಿಯಲ್ಲಿ ರಹೀಂ ಮತ್ತು ಶಾಫಿ ಹೊಳೆ ಬದಿಯಿಂದ ಪಿಕಪ್ನಲ್ಲಿ ಮರಳು ಲೋಡ್ ಮಾಡಿ, ಕುರಿಯಾಳ ಗ್ರಾಮದ ಇರಾಕೋಡಿ ಮನೆಯೊಂದರ ಬಳಿ ಇಳಿಸುವ ಸಮಯ ಸುಮಾರು ೧೫ ಜನರ ಗುಂಪು ತಲವಾರು, ಚೂರಿ, ರಾಡ್ಗಳೊಂದಿಗೆ ಏಕಾಏಕಿಯಾಗಿ ದಾಳಿ ಮಾಡಿದೆ.
ಚಾಲಕನ ಸೀಟ್ನಲ್ಲಿ ಕುಳಿತಿದ್ದ ಅಬ್ದುಲ್ ರಹೀಂ ಅವರನ್ನು ಹೊರಗೆ ಎಳೆದು ಯದ್ವಾತದ್ವಾ ಕಡಿದಿದ್ದಾರೆ. ಇದನ್ನು ಕಂಡ ಸ್ಥಳೀಯರು ಬೊಬ್ಬೆ ಹಾಕಿದ್ದರಿಂದ ದುಷ್ಕರ್ಮಿಗಳು ಮಾರಕಾಯುಧಗಳೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಮಾಡಿದವರು ಪರಿಚಯದವರು ಎಂದು ಶಾಫಿ ತಿಳಿಸಿದ್ದಾಗಿ ನಿಸಾರ್ ದೂರಿನಲ್ಲಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆತಂಕ ಮೂಡಿಸಿದ ಪ್ರಕರಣವಾದ ಕಾರಣ ಪೊಲೀಸರು ಗರಿಷ್ಠ ಭದ್ರತೆ ಕೈಗೊಂಡಿದ್ದು, ಬಂಟ್ವಾಳ ತಾಲೂಕಿನಲ್ಲಿ ಕಿಲೋಮೀಟರ್ಗೆ ಒಬ್ಬರಂತೆ ಪೊಲೀಸರು ನಿಂತಿದ್ದು ಕಂಡುಬಂತು. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಪ್ರಸಾದ್, ಐಜಿಪಿ ಅಮಿತ್ ಸಿಂಗ್, ಎಸ್ಪಿ ಯತೀಶ್ ಎನ್. ನೇತೃತ್ವದಲ್ಲಿ ಡಿವೈಎಸ್ಪಿ, ಇನ್ಸ್ಪೆಕ್ಟರ್, ಎಸ್ಐಗಳ ತಂಡವೇ ಬಂಟ್ವಾಳದಲ್ಲಿ ಬೀಡುಬಿಟ್ಟಿದ್ದು, ಮಂಗಳೂರು ಸಿಟಿ ಪೊಲೀಸ್ ಕಮಿಷನರ್ ಫರಂಗಿ ಪೇಟೆವರೆಗೆ ಬಂದೋಬಸ್ತ್ ವೀಕ್ಷಣೆ ನಡೆಸಿದ್ದಾರೆ.