
ಕಲಬುರಗಿ: ಸರ್ಕಾರಿ ಅಧಿಕಾರಿಗಳನ್ನು ನಿಂದಿಸಿದ ಮತ್ತು ಪರಿಶಿಷ್ಟ ಜಾತಿ ಅವಹೇಳನ ಮಾಡಿದ ಆರೋಪದ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಬಿ.ಜೆ.ಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಗೆ ಕೋರ್ಟ್ ಕೊಂಚ ರಿಲೀಫ್ ನೀಡಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಕೋರಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿದೆ. ಅಲ್ಲದೇ ವಿಚಾರಣೆಗೆ ಸಹಕರಿಸಯವಂತೆ ರವಿಕುಮಾರ್ ಅವರಿಗೂ ಸಹ ಕೋರ್ಟ್ ಸೂಚಿಸಿದೆ.

j3tvkannada
ಎಂ.ಎಲ್.ಸಿ ಎನ್.ರವಿಕುಮಾರ್ ತಮ್ಮ ಹೇಳಿಕೆ ವಿಷಾಧಿಸಿದ್ದಾರೆ. ಆದರೆ ಪೊಲೀಸರು ಅವರ ಮನೆ ಮುಂದೆ ಕಾಯುತ್ತಿದ್ದಾರೆ. ಹೀಗಾಗಿ FIRಗೆ ತಡೆ ನೀಡಬೇಕೆಂದು ಅರ್ಜಿದಾರರ ಪರ ವಕೀಲ ವಿನೋದ್ ಕುಮಾರ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ಎನ್.ರವಿಕುಮಾರ್ ನೀಡಿರುವ ಹೇಳಿಕೆ ಅನಗತ್ಯವಾಗಿತ್ತು. ಕರ್ನಲ್ ಸೋಫಿಯಾ ಖುರೇಷಿ ಬಗೆಗಿನ ಹೇಳಿಕೆ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ತಿಳಿದಿಲ್ಲವೇ ಎಂದು ಕ್ಲಾಸ್ ತೆಗೆದುಕೊಂಡಿದೆ. ಪೊಲೀಸರು ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೇಳಿ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ಹೊರಡಿಸಿ ಮುಂದಿನ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿದೆ.
ಮೇ 24 ರಂದು ಬಿ.ಜೆ.ಪಿಯ ಕಲಬುರಗಿ ಚಲೋ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ರವಿಕುಮಾರ್, ಡಿ.ಸಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಲಾಗಿತ್ತು. ಈ ಸಂಬಂಧ ಅಟ್ರಾಸಿಟಿ ಕಾಯ್ದೆಯಡಿ ಎಫ್.ಐ.ಆರ್ (FIR) ಸಹ ದಾಖಲಿಸಿಕೊಂಡ ಪೊಲೀಸರು ರವಿಕುಮಾರ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ನೋಟಿಸ್ ನಂತೆ ರವಿಕುಮಾರ್ ಮೇ 29 ಕಲಬುರಗಿ ಎ ವಿಭಾಗದ ಎ.ಸಿ.ಪಿ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ ರವಿಕುಮಾರ್ ವಿಚಾರಣೆ ಗೈರಾಗಿದ್ದಾರೆ.
ಏನಿದು ಪ್ರಕರಣ:-
ಮೇ 24 ರಂದು ಬಿ.ಜೆ.ಪಿಯ ಕಲಬುರಗಿ ಚಲೋ ಪ್ರತಿಭಟನೆ ವೇಳೆ ಆಯೋಜಿಸಲಾದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರವಿಕುಮಾರ್, ಜಿಲ್ಲಾಡಳಿತವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವದಿಂದ ಕಾರ್ಯನಿರ್ವಹಿಸುತ್ತಿದೆ. ಕಲಬುರಗಿ ಡಿ.ಸಿ ಕಚೇರಿಯೂ ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ. ಡಿ.ಸಿ ಮೇಡಂ ಅವರು (ಕಾಂಗ್ರೆಸ್) ಹೇಳುವುದನ್ನು ಸಹ ಕೇಳುತ್ತಿದ್ದಾರೆ. ಡಿ.ಸಿ ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐ.ಎ.ಎಸ್ ಅಧಿಕಾರಿಯೋ ನನಗೆ ತಿಳಿದಿಲ್ಲ ಎಂದು ಹೇಳಿದ್ದರು. ಈ ವೇಳೆ ಜನರ ಚಪ್ಪಾಳೆಗೆ ಪ್ರತಿಕ್ರಿಯಿಸಿ, ನಿಮ್ಮ ಚಪ್ಪಾಳೆ ನೋಡಿದರೆ, ಡಿ.ಸಿ ಬಹುಶಃ ಪಾಕಿಸ್ತಾನದಿಂದ ಬಂದಿದ್ದಾರೆ ಎಂದೂ ಅವಹೇಳನ ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ರವಿಕುಮಾರ್ ಅವರ ಹೇಳಿಕೆ ವಿರುದ್ಧ ರಾಜ್ಯ ಸರ್ಕಾರ ಕೂಡ ಕ್ರಮ ಕೈಗೊಳ್ಳಲಿದೆ ಎಂದು ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದರು.
ಈ ಸಂಬಂಧ ಖಾಸಗಿ ವ್ಯಕ್ತಿ ನೀಡಿದ ದೂರಿನ ಅನ್ವಯ ನ್.ರವಿಕುಮಾರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಸರ್ಕಾರಿ ಅಧಿಕಾರಿಗಳ ನಿಂದನೆ, ಎಸ್.ಸಿ ಸಮುದಾಯ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಲಬುರಗಿ ಡಿ.ಸಿ ಫೌಜಿಯಾ ತರನ್ನುಮ್ ಪಾಕಿಸ್ತಾನದಿಂದ ಬಂದಿರಬೇಕೆಂದಿದ್ದರು. ಅಲ್ಲದೇ ಎ.ಎಸ್.ಪಿ ಮಹೇಶ್ ಮೇಘಣ್ಣವರ್, ಡಿ.ವೈ.ಎಸ್.ಪಿ ಶಂಕರಗೌಡ ಪಾಟೀಲ್, ಸಿ.ಪಿ.ಐ ಚಂದ್ರಶೇಖರ್ ಅವರಿಗೆ ನಿಂದನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.