
ಬೀದರ್: ಕನ್ನಡಕ್ಕೆ ಅವಮಾನ ಮಾಡಿರುವ ನಟ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಲನಚಿತ್ರ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶ ಕೊಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

j3tvkannada
ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂಬ ತಪ್ಪು ದುರುದ್ದೇಶಪೂರಿತ ಹೇಳಿಕೆ ಕೊಟ್ಟು ಕಮಲ್ ಹಾಸನ್ ಕನ್ನಡಿಗರ ಭಾವನೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕನ್ನಡ ಭಾಷೆ ಹಾಗೂ ಸಂಕೃತಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ತಮಿಳಿನಿಂದ ಉಗಮವಾದ ಭಾಷೆಯಲ್ಲ. ಕನ್ನಡಿಗರ ಖಂಡನೆ, ವಿರೋಧದ ಮಧ್ಯೆಯೂ ಕಮಲ್ ಹಾಸನ್ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿಲ್ಲ. ಇದರೊಂದಿಗೆ ಅವರು ಕನ್ನಡಿಗರ ಆಕ್ರೋಶ ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಹೇಳಿದ್ದಾರೆ. ಜೂನ್ 5 ರಂದು ವೇದಿಕೆ ಚಲನಚಿತ್ರ ಬಿಡುಗಡೆಯನ್ನು ತಡೆಯಲು ನಿರ್ಧರಿಸಿದ್ದು, ಚಿತ್ರದ ವಿತರಕರು ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಕಮಲ್ ಹಾಸನ್ ಕ್ಷಮೆಯಾಚಿಸುವ ವರೆಗೆ ಅವರ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ.