
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ತಮಿಡಿಕೊಪ್ಪ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಗಂಡನಿಂದ ದೂರವಾಗಿದ್ದ ಮಹಿಳೆ ತನ್ನ ಪ್ರಿಯಕರನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ದುರಂತದಿಂದ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

j3tvkannada
ಮೃತರಾಗಿರುವವರು ಸುಜಾತ (33) ಹಾಗೂ ಆಯನೂರು ಕೋಟೆ ಗ್ರಾಮದ ಸಚಿನ್ (27) ಎಂಬುವವರಾಗಿದ್ದಾರೆ. ಸುಜಾತ ಅವರಿಗೆ ಸುಮಾರು 14 ವರ್ಷಗಳ ಹಿಂದೆ ವಿವಾಹವಾಗಿತ್ತು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದರು. ಆದರೆ ಗಂಡ ಅನಿರೀಕ್ಷಿತವಾಗಿ ನಾಪತ್ತೆಯಾಗಿದ್ದು, ಕಳೆದ ಮೂರು-ನಾಲ್ಕು ವರ್ಷಗಳಿಂದ ಯಾವುದೇ ಸಂಪರ್ಕವಿರಲಿಲ್ಲ.
ಆದರೆ, ಗಂಡನ ಊರು ಬೆಳಗಾವಿಯಿಂದ ತವರು ಊರಾದ ತಮಿಡಿಕೊಪ್ಪಗೆ ಸುಜಾತ ಮರಳಿ ಬಂದು ಕೂಲಿ ಕೆಲಸ ಮಾಡುತ್ತ ಬದುಕನ್ನು ಸಾಗಿಸುತ್ತಿದ್ದರು. ಈ ನಡುವೆ ಮೊಬೈಲ್ ಮೂಲಕ ಅಪರಿಚಿತನಂತೆ ಕರೆ ಮಾಡಿದ ಆಯನೂರು ಕೋಟೆಯ ಟೈಲ್ಸ್ ಕೆಲಸಗಾರ ಸಚಿನ್ನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾಳೆ. ಟೈಲ್ಸ್ ಕೆಲಸಗಾರ ಸಚಿನ್ ಅವರ ಪರಿಚಯ ನಿಧಾನವಾಗಿ ವಿವಾಹಿತೆ ಹಾಗೂ ಗಂಡನಿಂದ ದೂರವಾಗಿದ್ದ ಸುಜಾತಾಳೊಂದಿಗೆ ಪ್ರೇಮ ಸಂಬಂಧಕ್ಕೆ ತಿರುಗಿತು.
ಸಚಿನ್, ಸುಜಾತಳ ಕಷ್ಟವನ್ನು ಕಂಡು ಬೆಂಬಲ ನೀಡುತ್ತಾ ಬಂದಿದ್ದನು. ಸುಜಾತಾಳ ಕಷ್ಟಕ್ಕೆ ನೆರವಾಗುತ್ತಿದ್ದನು. ಇನ್ನೂ ಚಿಕ್ಕ ವಯಸ್ಸಿನ ಸುಜಾತಾಗೆ ತಾನೇ ಮುಂದಿನ ಜೀವನ ಕೊಡುವುದಾಗಿ, ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾನೆ. ಇದರ ಬೆನ್ನಲ್ಲಿಯೇ ಜೊತೆಯಲ್ಲಿ ಜೀವನ ಮಾಡೋಣವೆಂದು ಕಳೆದ ಒಂದು ವಾರದ ಹಿಂದೆ ಬಂದು ಸುಜಾತಾಳ ಜೊತೆಗೆ ಸಚಿನ್ ಇಲ್ಲಿಯೇ ವಾಸವಾಗಿದ್ದನು.
ಇಬ್ಬರು ಪ್ರೇಮಿಗಳ ಸಂಬಂಧ ಹಾಗೂ ಸಹಜೀವನ ನಡೆಯುತ್ತಿರುವಾಗ ಸುಜಾತಾಳ ಸಹೋದರಿ ಕಲ್ಮನೆ ಗ್ರಾಮದಲ್ಲಿ ವಾಸವಾಗಿದ್ದ ಗೀತಾ ತಮ್ಮ ಊರಿನಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ರಿಪ್ಪನ್ ಪೇಟೆಗೆ ಹೋಗಿದ್ದಾರೆ. ಈ ವೇಳೆ ಸುಜಾತಾ ಮತ್ತು ಸಚಿನ್ ಒಟ್ಟಿಗೆ ಇರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದಾದ ನಂತರ ಸಹೋದರಿ ಗೀತಾ, ಸುಜಾತಾಳಿಗೆ ಬೈದು ಬುದ್ಧಿವಾದ ಹೇಳಿ ಹೋಗಿದ್ದಾಳೆ. ಈ ಘಟನೆಯ ನಂತರ ತೀವ್ರ ಮನನೊಂದ ಸುಜಾತಾ ಹಾಗೂ ಸಚಿನ್ ಬೆಳಗಾಗುವಷ್ಟರಲ್ಲಿ ಕಳೆನಾಶಕವನ್ನು ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದುದನ್ನು ಕಂಡ ಸ್ಥಳೀಯರು ಸಚಿನ್ ಮತ್ತು ಸುಜಾತಾಳನ್ನು ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿ ಆಗಿದೇ ಇಬ್ಬರೂ ಪ್ರೇಮಿಗಳು ಸಾವನ್ನಪ್ಪಿದ್ದಾರೆ. ನನ್ನ ಸಹೋದರಿ ಸುಜಾತಾಗೆ ಸಚಿನ್ ಎಂಬಾತನೇ ಬಲವಂತವಾಗಿ ವಿಷ ಕುಡಿಸಿದ್ದಾನೆ ಎಂದು ಸಹೋದರಿ ಗೀತಾ ಆರೋಪ ಮಾಡಿದ್ದಾರೆ.
ಒಟ್ಟಾರೆಯಾಗಿ, ಈ ಹೃದಯವಿದ್ರಾವಕ ಘಟನೆಯಿಂದ ಕುಟುಂಬ, ಗ್ರಾಮಸ್ಥರು ಶೋಕದಲ್ಲಿ ಮುಳುಗಿದ್ದಾರೆ. ಆದರೆ, ಸುಜಾತಾಳ ಇಬ್ಬರು ಸಣ್ಣ ಮಕ್ಕಳ ಭವಿಷ್ಯ ಕತ್ತಲಲ್ಲಿ ಸಿಲುಕಿದೆ. ಈ ಘಟನೆ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.