
ಬೆಂಗಳೂರು ಗ್ರಾಮಾಂತರ: ಮನೆ ಬಾಗಿಲಿಗೆ ಇ-ಸ್ವತ್ತು ಖಾತೆ ವಿತರಣೆ ಯೋಜನೆಯನ್ನು ಆರಂಭಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಆಸ್ತಿ ಹಕ್ಕು ತಮ್ಮದಾಗಿಸಿಕೊಳ್ಳುವ ಗ್ರಾಮೀಣ ಜನರ ಬಹು ದಿನಗಳ ಕನಸು ನನಸಾಗಿಸಲು ಮುಂದಾಗಿದೆ. ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿರುವ ಗ್ರಾಮ ಠಾಣಾ ವ್ಯಾಪ್ತಿಯ ಮನೆಗಳಿಗೆ ಆಸ್ತಿ ಹಕ್ಕು ದಾಖಲೆಗಳನ್ನು ಸರಕಾರದ ಮಟ್ಟದಲ್ಲಿ ಮಾಡಿಸಿಕೊಳ್ಳಲು ಸಾಧ್ಯವಾಗದೆ ನಾನಾ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದರು. ತಮ್ಮ ಆಸ್ತಿಗೆ ಇ-ಸ್ವತ್ತು ದಾಖಲೆಗಳು ಸಿಗದೆ ಬ್ಯಾಂಕ್ ಸಾಲ ಸೇರಿದಂತೆ ವೈಯಕ್ತಿಕ ಕಷ್ಟಗಳಿಗೆ ಗ್ರಾಮ ಠಾಣಾ ಸ್ವತ್ತು ಇದ್ದರೂ ನೆರವಿಗೆ ಬಾರದಂತಾಗಿತ್ತು.

j3tvkannada
ಜನರ ಕಷ್ಟವನ್ನು ಅರಿತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲೆಯ ಗ್ರಾಮಠಾಣೆ ವ್ಯಾಪ್ತಿಯ ಸ್ವತ್ತುಗಳಿಗೆ ಇ-ಸ್ವತ್ತು ಖಾತೆಯನ್ನು ಮನೆ ಬಾಗಿಲಿಗೆ ವಿತರಿಸುವ ಯೋಜನೆ ಆರಂಬಿಸಿದೆ. ಇ-ಸ್ವತ್ತು ಖಾತೆಯನ್ನು ಮನೆ ಬಾಗಿಲಿಗೆ ವಿತರಿಸುವ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ. ತಾಲೂಕು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳನ್ನು ಫೀಲ್ಡಿಗೆ ಇಳಿಸಿ ಅರ್ಹ ಪ್ರತಿಯೊಬ್ಬರೂ ಈ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಆಸ್ತಿ ಹಕ್ಕುಗಳಿಗೆ ಇ-ಸ್ವತ್ತು ಖಾತೆಯನ್ನು ಪಡೆದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ಮೇಲಾಧಿಕಾರಿಗಳು ಗ್ರಾಮ ಪಂಚಾಯತ್ಗಳಿಗೆ ಭೇಟಿ ನೀಡಿ ಶೇ.100 ರಷ್ಟು ಗುರಿಯನ್ನು ಸಾಧಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ. ಗ್ರಾಮೀಣ ಜನರಿಗೆ ಸುಲಭವಾಗಿ ದಾಖಲೆಗಳನ್ನು ಕೊಡಿಸುವುದು ಇಲಾಖೆಯ ಯೋಜನೆಯ ಪ್ರಮುಖ ಭಾಗವಾಗಿದೆ. ಈ ಯೋಜನೆಯಡಿ ಪ್ರತಿ ಮನೆಗೆ ಸ್ವತ್ತು ಖಾತೆ ತಲುಪುವಂತೆ ಆಯಾ ಗ್ರಾಮ ಪಂಚಾಯತ್ಗಳು ಮತ್ತು ಇಲಾಖೆಯ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಯಾವುದೇ ಕಚೇರಿ ಅಥವಾ ಅಧಿಕಾರಿಗಳನ್ನು ಭೇಟಿಯಾಗದೆ ತಾವು ಇದ್ದಲ್ಲಿಗೆ ಅಧಿಕಾರಿಗಳು ಅಥವಾ ಸಿಬ್ಬಂದಿ ತಮ್ಮ ಮನೆಗೆ ಭೇಟಿ ನೀಡಿ ಆಸ್ತಿ ವಿವರಗಳನ್ನು ಪಡೆದು ಅದರಂತೆ ಸ್ವತ್ತುಗಳನ್ನು ಭದ್ರಪಡಿಸಲು ಸಹಕಾರಿಯಾಗುತ್ತಾರೆ.
ಇ-ಸ್ವತ್ತು ಖಾತೆಯ ಪ್ರಯೋಜನಗಳು:
- ಆಸ್ತಿ ದಾಖಲೆಗಳಿಗೆ ಡಿಜಿಟಲ್ ದೃಢೀಕರಣ.
- ಬ್ಯಾಂಕ್ ಸಾಲ, ಶೌಚಾಲಯ ಅನುಮೋದನೆ, ವಸತಿ ಯೋಜನೆಗೆ ದಾಖಲೆ ಪರಿಹಾರ.
- ಖರೀದಿ-ಮಾರಾಟ ಹಾಗೂ ಮರುಪರಿಶೀಲನೆಗೆ ಸುಲಭ.
- ಭದ್ರ ಹಾಗೂ ಪಾರದರ್ಶಕ ದಾಖಲೆ ವ್ಯವಸ್ಥೆ.
ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಆರಂಭವಾಗಿದೆ. ಸಾರ್ವಜನಿಕರು ಗ್ರಾಮ ಠಾಣಾ ಮನೆಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಿದ್ದಲ್ಲಿ ಅಧಿಕಾರಿಗಳನ್ನು ತಮ್ಮೂರಿನ ಗ್ರಾಮ ಪಂಚಾಯಿತಿ ಕಚೇರಿ ಅಧಿಕಾರಿಗಳನ್ನು ಸಂರ್ಪಕಿಸಬಹುದು. ಈ ಕಾರ್ಯಾಚರಣೆಯನ್ನು ಎಲ್ಲಾ ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲು ಜಿ.ಪಂ ಮುಂದಾಗಿದೆ.
ಇ-ಸ್ವತ್ತು ಖಾತೆಯ ಕುರಿತು ಹೆಚ್ಚಿನ ಮಾಹಿತಿಗೆ ಗ್ರಾಮ ಪಂಚಾಯಿತಿ ಕಚೇರಿ ಅಥವಾ ಸಂಬಂಧಿತ ಅಧಿಕಾರಿಯನ್ನು ಸಂಪರ್ಕಿಸಬಹುದು. ಮನೆ ಬಾಗಿಲಿಗೆ ಇ ಸ್ವತ್ತು ಕಾರ್ಯಕ್ರಮವು (ಇ-ಸ್ವತ್ತು ಮುಕ್ತ ಗ್ರಾಮ) ಸರಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮವಾಗಿದೆ. ನಮ್ಮ ಅಧಿಕಾರಿ ಮತ್ತು ಸಿಬ್ಬಂದಿ ಮನೆ ಬಾಗಿಲಿಗೆ ಆಗಮಿಸಿ ಮಾಹಿತಿ ಪಡೆಯಲಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಅರ್ಹ ಮಾಲೀಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.