
ರಾಮನಗರ: ಅಪಘಾತ ಆತ್ಮಹತ್ಯೆ ಸೇರಿದಂತೆ ಒಂದಷ್ಟು ಪ್ರಕರಣಗಳಲ್ಲಿ ಚಿಕಿತ್ಸೆಗೂ ಮುನ್ನ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ನಡೆಸುವ ಎಂ.ಎಲ್.ಸಿ (ಮೆಡಿಕೊ ಲೀಗಲ್ ಸರ್ಟಿಫಿಕೇಟ್)ಯನ್ನು ಹಾವು ಕಡಿತದ ಪ್ರಕರಣಗಳಲ್ಲಿ ದಾಖಲಿಸುವುದು ಕಡ್ಡಾಯ. ಇಂತಹ ನಿಯಮದಿಂದಾಗಿ ಅದೆಷ್ಟೋ ಜೀವಗಳು ಬಲಿಯಾಗಿವೆ. ಹಾವು ಕಡಿತದ ಪ್ರಕರಣಗಳಲ್ಲಿ ಮೊದಲು ಎಂ.ಎಲ್.ಸಿ ಮಾಡಿಸಲೇಬೇಕೆಂಬ ನಿಯಮದಿಂದಾಗಿ 2023ರಲ್ಲಿ 19 ಮಂದಿ ಹಾಗೂ 2024ರಲ್ಲಿ 101 ಮಂದಿ ಹಾವಿನ ವಿಷಕ್ಕೆ ಬಲಿಯಾಗಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತ್ತಿದ್ದರೆ ಇಂತಹ ಜೀವಗಳನ್ನು ಉಳಿಸಿಕೊಳ್ಳಬಹುದಿತ್ತು. ಆದರೆ, ಸರಕಾರಿ ಆದೇಶದಂತೆ ಹಾವು ಕಡಿತಕ್ಕೂ ಎಂ.ಎಲ್.ಸಿ ಮಾಡಬೇಕೆಂಬ ಗೊಂದಲಗಳಿಂದಲೇ ರೋಗಿಗಳು ಊಸಿರು ಚೆಲ್ಲಿದ್ದಾರೆ.

j3tvkannada
ರಾಜ್ಯದಲ್ಲಿ 2023ರಲ್ಲಿ 6,596 ಮಂದಿ, 2024ರಲ್ಲಿ 13,235 ಮಂದಿ ಹಾವು ಕಡಿತ ಕ್ಕೊಳಗಾಗಿದ್ದಾರೆ. ಇವರಲ್ಲಿ ಒಟ್ಟು 120 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾವು ಕಡಿತದ ಪ್ರಕರಣಗಳಿಗೆ ವೈದ್ಯಕೀಯ ಚಿಕಿತ್ಸೆ ಬಿಟ್ಟು ನಾಟಿ ಔಷಧ ನೀಡುವುದು ಸಹ ಶಿಕ್ಷಾರ್ಹ ಅಪರಾಧ. ಆದರೆ ರಾಜ್ಯದ ಕೆಲವೆಡೆ ಹಾವು ಕಡಿತ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವುದಕ್ಕೂ ಮುನ್ನವೇ ಪೊಲೀಸರಿಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಚಿಕಿತ್ಸೆ ತಡವಾಗುವ ಪ್ರಕರಣಗಳಿಂದಾಗಿ ಮೈತುಂಬ ವಿಷ ಸೇರಿಕೊಂಡು ಮೃತ ಪಡುವ ಸಾಧ್ಯತೆಗಳು ಹೆಚ್ಚು. ಕೆಲ ವೈದ್ಯರು ಕಾನೂನು ಬದಿಗಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ ಇನ್ನೂ ಕೆಲ ವೈದ್ಯರು ಸರಕಾರಿ ಆದೇಶದಂತೆ ಎಂಎಲ್ಸಿ ಕಡ್ಡಾಯವೆಂಬ ನಿಯಮಕ್ಕೆ ಅಂಟಿಕೊಂಡಿದ್ದಾರೆ. ಇದರಿಂದ ಹಾವು ಕಡಿತಕ್ಕೊಳಗಾದವರು ನಂಜಿನಿಂದಾಗಿ ಕಣ್ಣು ಮುಚ್ಚುತ್ತಿದ್ದಾರೆ.

j3tvkannada
ಹಾವು ಕಡಿತದ ಪ್ರಕರಣಗಳಲ್ಲಿ ಗೋಲ್ಡನ್ ಟೈಂನೊಳಗೆ ಚಿಕಿತ್ಸೆ ನೀಡಿದರೆ ಎಂತಹ ಕಾರ್ಕೋಟಕ ವಿಷವಾಗಿದ್ದರೂ ಜೀವ ಉಳಿಸಬಹುದು. ಹೀಗಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮೊದಲು ಚಿಕಿತ್ಸೆ ಆನಂತರ ಎಂ.ಎಲ್.ಸಿ ಎನ್ನುವ ಸ್ಪಷ್ಟ ಆದೇಶ ಇದೆ. ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಸೂಚನೆಯಂತೆ ಜಿಲ್ಲೆಯಲ್ಲಿನ ಎಲ್ಲ ವೈದ್ಯರಿಗೂ ಜಿಲ್ಲಾಆರೋಗ್ಯಾಧಿಕಾರಿ ಅವರು ಪತ್ರ ಬರೆದಿದ್ದು, ಹಾವು ಕಡಿತ ಪ್ರಕರಣಗಳಲ್ಲಿಮೊದಲು ಚಿಕಿತ್ಸೆ ನೀಡಿ. ಬಳಿಕ ಎಂ.ಎಲ್.ಸಿ ಮಾಡಿ. ಹಾವು ಹಾಗೂ ನಾಯಿ ಕಡಿತಕ್ಕೆ ಸಂಬಂಧಿಸಿದ ಔಷಧಗಳನ್ನು ಅಗತ್ಯಕ್ಕಿಂತಲೂ ಹೆಚ್ಚಾಗಿ ಸಂಗ್ರಹಿಸಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ. ಹೀಗಾಗಿ ಇನ್ಮುಂದೆ ಚಿಕಿತ್ಸೆಯೇ ಮೊದಲು ಎನ್ನುವಂತ್ತಾಗಿದೆ.
ಕೊಲೆ, ಆತ್ಮಹತ್ಯೆ, ಅತ್ಯಾಚಾರ, ಅಪಘಾತ, ಹೊಡೆದಾಟದಂತಹ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವುದಕ್ಕೂ ಮುನ್ನವೇ ಪೊಲೀಸ್ ಇಲಾಖೆಗೆ ಆರೋಗ್ಯ ಇಲಾಖೆ ಮಾಹಿತಿ ನೀಡುತ್ತದೆ. ಪೊಲೀಸರ ಸಮ್ಮುಖದಲ್ಲಿ ಚಿಕಿತ್ಸೆ ನೀಡಿ ಎಂಎಲ್ಸಿ ಸಿದ್ಧಪಡಿಸಿ ವೈದ್ಯರು ವರದಿ ನೀಡುತ್ತಾರೆ. ಈ ವರದಿ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸುತ್ತಾರೆ. ಕೆಲ ಕಡೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕವಷ್ಟೇ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಮೊದಲು ಚಿಕಿತ್ಸೆ ನೀಡಿ ರೋಗಿಯ ಜೀವ ಉಳಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಬಹುದು. ಕೆಲ ವೈದ್ಯರು ಹಳೆ ಮಾದರಿಯಲ್ಲಿಯೇ ಪೊಲೀಸರ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಇಂತಹ ನಿಮಯವನ್ನು ಹಾವು ಕಡಿತದಂತಹ ಪ್ರಕರಣಗಳಲ್ಲಿಕೈ ಬಿಟ್ಟು, ಮೊದಲು ಚಿಕಿತ್ಸೆ ಎಂಬ ಆದೇಶ ನೀಡಬೇಕು ಎಂಬುದು ಸಾರ್ವಜನಿಕರ ಹಾಗೂ ವೈದ್ಯರ ಆಗ್ರಹ.

j3tvkannada
ಹಾವು ಕಡಿತದ ಪ್ರಕರಣವನ್ನು ಪೊಲೀಸ್ ಇಲಾಖೆ ತನಿಖೆ ನಡೆಸಿದರೆ, ಚಿರತೆ, ಕರಡಿ, ಆನೆ ದಾಳಿಯಂತಹ ಪ್ರಕರಣಗಳನ್ನು ಎಂ.ಎಲ್.ಸಿ ಮಾದರಿಯಲ್ಲಿಅರಣ್ಯ ಇಲಾಖೆಯು ತನಿಖೆ ನಡೆಸಲಿದೆ. ಹಾವು ಕಡಿತದಂತಹ ಪ್ರಕರಣಗಳಲ್ಲಿ ದೇಹದ ತುಂಬೆಲ್ಲ ವಿಷ ಹರಡುವ ಮೊದಲು ಚಿಕಿತ್ಸೆ ನೀಡಬೇಕು. ಕೆಲ ವೈದ್ಯರು ಹಳೆ ಮಾದರಿಯಲ್ಲಿಯೇ ಎಂ.ಎಲ್.ಸಿ ಆಗುವವರೆಗೂ ಚಿಕಿತ್ಸೆಯನ್ನೇ ನೀಡುವುದಿಲ್ಲ.
ಹೀಗಾಗಿ ಮೊದಲು ಜೀವ ಉಳಿಸುವ ದೃಷ್ಟಿಯಿಂದ ಚಿಕಿತ್ಸೆ ನೀಡಿ, ಬಳಿಕ ಎಂಎಲ್ಸಿ ಮಾಡಲು ಸೂಚನೆ ನೀಡಿದ್ಧೇನೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು. ಎಲ್ಲ ರೀತಿಯ ಹಾವುಗಳಲ್ಲಿಯೂ ವಿಷ ಇರುವುದಿಲ್ಲ. ಹೀಗಾಗಿ ಹಾವು ಕಡಿತದಂತಹ ಪ್ರಕರಣ ವರದಿಯಾಗುತ್ತಿದ್ದಂತೆ ಚಿಕಿತ್ಸೆ ನೀಡಲು ಎಲ್ಲ ವೈದ್ಯರಿಗೂ ಸೂಚನೆ ನೀಡಲಾಗಿದೆ. ಅಗತ್ಯದಷ್ಟು ಲಸಿಕೆಗಳು ಸಹ ನಮ್ಮಲ್ಲಿವೆ ಎಂದು ಬೆಂಗಳೂರು ದಕ್ಷಿಣ ವಿಭಾದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾದರಿಯಲ್ಲಿಯೇ ರಾಜ್ಯದ ಎಲ್ಲೆಡೆ ಚಿಕಿತ್ಸೆ ಮೊದಲು ಎಂಬ ಆದೇಶ ಜಾರಿಯಾಗಬೇಕು. ಕೊಲೆ, ಸುಲಿಗೆಯಂತಹ ಪ್ರಕರಣದಲ್ಲಿಪೊಲೀಸರು ಮೊದಲು ವಿಚಾರಣೆ ನಡೆಸಲಿ. ಆದರೆ, ಹಾವು ಕಡಿತದಂತಹ ಪ್ರಕರಣದಲ್ಲಿಮೊದಲು ಚಿಕಿತ್ಸೆಗೆ ಆದ್ಯತೆ ನೀಡಬೇಕು. ಬಹುತೇಕ ವೈದ್ಯರು ಮೊದಲು ಚಿಕಿತ್ಸೆ ನೀಡುತ್ತಾರೆ. ಆದರೆ ಆದೇಶಗಳಿಗೆ ಜೋತು ಬಿದ್ದವರು ರೂಲ್ಸ್ಗಳ ಹೆಸರಿನಲ್ಲಿ ಚಿಕಿತ್ಸೆ ನೀಡುವುದೇ ಇಲ್ಲ ಎಂದು ನಿವೃತ್ತ ವೈದ್ಯ ಡಾ.ಅಮರೇಶ್ ಹೇಳಿದರು.