
ಕೊಡಗು: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಮತ್ತೆ ತೀವ್ರಗೊಂಡಿದೆ. ಪರಿಣಾಮವಾಗಿ ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ಬಹುತೇಕ ಭರ್ತಿಯಾಗಿದೆ. 2859 ಅಡಿ ಗರಿಷ್ಠ ಮಟ್ಟದ ಜಲಾಶಯಕ್ಕೆ 2852 ಅಡಿ ನೀರು ತುಂಬಿದೆ. ಸಂಪೂರ್ಣ ಭರ್ತಿಯಾಗಲು ಇನ್ನು ಕೇವಲ 7 ಅಡಿಯಷ್ಟೇ ಬಾಕಿ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ ನಾಲ್ಕು ಕ್ರೆಸ್ ಗೇಟುಗಳನ್ನು ತೆರೆದು ನಾಲ್ಕು ಕ್ರೆಸ್ ಗೇಟ್ ಮೂಲಕವೂ 4 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ.

j3tvkannada
8.5 ಟಿ.ಎಂ.ಸಿ ಸಾಮರ್ಥ್ಯದ ಜಲಾಶಯದಲ್ಲಿ ಒಂದು ಟಿ.ಎಂ.ಸಿ ಅಡಿಯಷ್ಟು ಹೂಳು ತುಂಬಿದೆ. ಅಂದರೆ ಜಲಾಶಯದಲ್ಲಿ 7.5 ಟಿ.ಎಂ.ಸಿ ಮಾತ್ರ ನೀರಿನ ಸಂಗ್ರಹಣ ಸಾಮರ್ಥ್ಯವಿದೆ. ಜಲಾಶಯದಲ್ಲಿ ಈಗಾಗಲೇ 6.5 ಟಿ.ಎಂ.ಸಿ ನೀರು ಸಂಗ್ರಹವಾಗಿದ್ದು ಇನ್ನೊಂದು ಟಿ.ಎಂ.ಸಿ ನೀರಿನ ಸಂಗ್ರಹಕ್ಕೆ ಮಾತ್ರವೇ ಅವಕಾಶವಿದೆ. ಹೀಗಾಗಿ ಎಲ್ಲಾ ದೃಷ್ಟಿಯಿಂದ ಜಲಾಶಯದ ಹಿತ ದೃಷ್ಟಿಯಿಂದ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು ಜಲಾಶಯದ ಎಇಇ ಪುಟ್ಟಸ್ವಾಮಿ ಹೇಳಿದ್ದಾರೆ.
ಜನ, ಜಾನುವಾರು ನದಿಯತ್ತ ಸುಳಿಬಾರದು, ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದಿರಂದ ಯಾವುದೇ ಕ್ಷಣದಲ್ಲಾದರೂ ಜಲಾಶಯದಿಂದ ಹೊರಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬಹುದು. ಈಗಾಗಲೇ ಜಲಾಶಯಕ್ಕೆ 3184 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನಾಲ್ಕು ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ ಎಂದು ಹಾರಂಗಿ ಜಲಾಶಯದ ಎಇಇ ಪುಟ್ಟಸ್ವಾಮಿ ಹೇಳಿದ್ದಾರೆ. ನಾಲ್ಕು ಗೇಟುಗಳನ್ನು ತೆರೆದು ನೀರನ್ನು ನದಿಗೆ ಹರಿಬಿಡುತ್ತಿರುವುದರಿಂದ ಜಲಾಶಯದಿಂದ ಧುಮ್ಮಿಕ್ಕಿ ಹರಿಯುತ್ತಿರುವ ನೀರು ಬೆಳ್ನೊರೆಯಂತೆ ಕಾಣುತ್ತಿದೆ. ಹೀಗಾಗಿ ಹಾರಂಗಿ ಉದ್ಯಾನವನಕ್ಕೂ ಬರುವ ಪ್ರವಾಸಿಗರು ಕೂಡ ಉದ್ಯಾನವನ ಹಾಗೂ ಕ್ರೆಸ್ಗೇಟ್ ಮುಂಭಾಗದಲ್ಲಿ ಇರುವ ಸೇತುವೆ ಮೇಲೆ ನಿಂತು ನೋಡಿ ಜನರು ಸಂಭ್ರಮಿಸುತ್ತಿದ್ದಾರೆ.