
ಮಂಗಳೂರು : ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಮನೆಯ ಒಳಗಡೆ ನೀರು ನುಗ್ಗಿ ಜನರಿಗೆ ಇಂದು ಮಧ್ಯಾಹ್ನ ಅಡುಗೆ ಮಾಡಲು ಕೂಡ ತೊಂದರೆಯಾಗಿದೆ. ಈ ಸಂದರ್ಭದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಇಂತಹ ಕುಟುಂಬಗಳಿಗೆ ಶ್ರೀ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮಾಡಲಾಗಿದೆ. ತೊಂದರೆಗೊಳಗಾದ ಮನೆಯವರು ಶ್ರೀ ಕ್ಷೇತ್ರಕ್ಕೆ ತಮ್ಮ ಮನೆಯ ಸದಸ್ಯರಿಗೆ ಅನ್ನವನ್ನು ತೆಗೆದುಕೊಂಡು ಹೋಗಬೇಕಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಸಂತ್ರಸ್ತ ನಾಗರಿಕರಿಗೆ ವಿನಂತಿಸಿದೆ.

ಮಂಗಳೂರಲ್ಲಿ ಭಾರಿ ಮಳೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ನೈಋುತ್ಯ ಮುಂಗಾರು ಚುರುಕಾಗಿದ್ದು, ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಭರ್ಜರಿ ಮಳೆಯಾಗಿದೆ. ವಿಶೇಷವಾಗಿ ಮಂಗಳೂರು ನಗರ ಭಾಗದಲ್ಲಿ ಮಧ್ಯಾಹ್ನ ಬಳಿಕ ಸುರಿದ ಕೆಲವು ತಾಸುಗಳ ಮಳೆಗೆ ಇಡೀ ನಗರವೇ ಸ್ತಬ್ಧಗೊಂಡಿತು. ಕೆಲವು ಕಡೆ ಜನರನ್ನು ಸ್ಥಳಾಂತರ ಮಾಡಲು ಬೋಟ್ಗಳನ್ನು ಇಳಿಸಲಾಯಿತು.
ಭಾರಿ ಮಳೆಯಿಂದಾಗಿ ಜಿಲ್ಲೆಯ ನದಿಗಳ ಮಟ್ಟದಲ್ಲಿ ಏಕಾಏಕಿ ಏರಿಕೆಯಾಗಿದೆ. ಮಂಗಳೂರು ನಗರದ ಅತ್ತಾವರ ಸೇರಿದಂತೆ ಕೇಂದ್ರ ಭಾಗದ ನಾನಾ ಕಡೆ ಮಳೆ ನೀರು ಮನೆಗಳಿಗೆ ನುಗ್ಗಿ ತೊಂದರೆಗೀಡಾದ 12 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಉತ್ತರ ಕನ್ನಡದ ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿ ಅಂಚಿನ ಧರೆ ಮಳೆಯಿಂದ ಕುಸಿಯಲಾರಂಭಿಸಿದೆ. ಶುಕ್ರವಾರ ರಾತ್ರಿ ದೇವಿಮನೆ ಘಟ್ಟ ಸಮೀಪದಲ್ಲಿ ಧರೆ ಕುಸಿತವಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಭಾನುವಾರ ರೆಡ್ ಅಲರ್ಟ್, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಾಮರಾಜನಗರ, ದಾವಣಗೆರೆ, ಹಾಸನ ಮತ್ತು ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 16 ರಂದು ಕರಾವಳಿ ಜಿಲ್ಲೆಗಳಿಗೆ ಮಾತ್ರ ರೆಡ್ ಅಲರ್ಟ್ ಘೋಷಿಸಲಾಗಿದೆ.