
ಮೈಸೂರು: ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಇರುವ ಒಟ್ಟು ವಿದ್ಯುತ್ ಗ್ರಾಹಕರಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಮಂದಿ ಗೃಹ ಜ್ಯೋತಿಯಿಂದ ದೂರ ಉಳಿದಿದ್ದಾರೆ. ಸಿ.ಎಂ ತವರಲ್ಲೇ ಗೃಹಜ್ಯೋತಿ ಗ್ಯಾರಂಟಿ ಬಗ್ಗೆ ಜನ ನಿರ್ಲಕ್ಷ್ಯ ಮಾಡಿದ್ದಾರೆ. ಮೈಸೂರು ನಗರದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಗೃಹ ಜ್ಯೋತಿಯಿಂದ ಹೊರಗುಳಿದಿದ್ದು, ಜಿಲ್ಲೆಯಲ್ಲಿ ಬರೋಬ್ಬರಿ 8402 ಫಲಾನುಭವಿಗಳಾಗದೇ ನಿರ್ಲಕ್ಷ್ಯವಹಿಸಿದ್ದಾರೆ. ಬಾಡಿಗೆ ಮನೆಯಲ್ಲಿನ ವಾಸ ಹಾಗೂ ನಿಗದಿತ ಯೂನಿಟ್ ಮಿತಿ ದಾಟಿದರೆ ಪೂರ್ತಿ ಹಣ ಪಾವತಿಸಬೇಕೆಂಬ ಕಾರಣಕ್ಕೆ ಸಾಕಷ್ಟು ಮಂದಿ ಗ್ರಾಹಕರು ಯೋಜನೆಯಡಿ ಫಲಾನುಭವಿಗಳಾಗಲು ನಿರ್ಲಕ್ಷ್ಯವಹಿಸಿದ್ದಾರೆ.

j3tvkannada
ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ 9,52,069 ಗ್ರಾಹಕರು ಇದ್ದು, ಅವರಲ್ಲಿ 9,43,667 ಮಂದಿ ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗಿದ್ದಾರೆ. 8402 ಮಂದಿ ಗೃಹ ಜ್ಯೋತಿ ಯೋಜನೆಗೆ ನೋಂದಣಿಯಾಗದೇ ಬಾಕಿ ಉಳಿದಿದ್ದಾರೆ ಎನ್ನುತ್ತಾರೆ ಸೆಸ್ಕ್ ಅಕಾರಿಗಳು. ಯೋಜನೆ ಆರಂಭವಾದಾಗ ಗೃಹ ಜ್ಯೋತಿ ಯೋಜನೆಗೆ ಆಧಾರ್ ಕಾರ್ಡ್ ನೀಡಿ ಲಿಂಕ್ ಆದ ಗ್ರಾಹಕರಿಗೆ ಮತ್ತೆ ಬೇರೆ ಕಡೆ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ. ಡಿ-ಲಿಂಕ್ ಮಾಡಲು ಅವಕಾಶವನ್ನು ಕಲ್ಪಿಸುವ ಮೂಲಕ ಗ್ರಾಹಕರು ಒಂದು ಮನೆಯ ವಿದ್ಯುತ್ ಸಂಪರ್ಕಕ್ಕೆ ಲಿಂಕ್ ಆಗಿ ಮತ್ತೆ ಡಿ-ಲಿಂಕ್ ಮಾಡಿಸುವ ಅವಕಾಶವನ್ನು ಕಲ್ಪಿಸಿ ಗೃಹ ಜ್ಯೋತಿ ಯೋಜನೆಯನ್ನು ಸರಳೀಕರಣಗೊಳಿಸಿತ್ತು. ಆದರೆ ಸಾಕಷ್ಟು ಮಂದಿ ಬಾಡಿಗೆ ಮನೆ ವಾಸಿಗಳು, ತಾತ್ಕಾಲಿಕವಾಗಿ ಉದ್ಯೋಗ, ಶಿಕ್ಷಣ ಸೇರಿದಂತೆ ಇತರೆ ಕಾರಣಗಳಿಂದ ಮನೆ ಬದಲಾಯಿಸುತ್ತಿರುವುದರಿಂದ ಗೃಹ ಜ್ಯೋತಿಯ ಫಲಾನುಭವಿಗಳಾಗಲು ನಿರಾಸಕ್ತಿ ವಹಿಸುತ್ತಿದ್ದಾರೆ ಎನ್ನುತ್ತಾರೆ ಸೆಸ್ಕ್ ಅಧಿಕಾರಿಗಳು.

j3tvkannada
ಗೃಹ ಜ್ಯೋತಿ ಆರಂಭವಾದಾಗಿನಿಂದ ಮೈಸೂರು ಜಿಲ್ಲೆಯಲ್ಲಿನ ವಿದ್ಯುತ್ ಗ್ರಾಹಕರು ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿದ್ದು, 786.36 ಕೋಟಿ ರೂ ಸಹಾಯ ಧನವನ್ನು ಸರಕಾರ ಗ್ರಾಹಕರ ಪರವಾಗಿ ಸೆಸ್ಕ್ಗೆ ಪಾವತಿಸಿದೆ. ಗೃಹ ಜ್ಯೋತಿ ಯೋಜನೆಯಡಿ ಫಲಾನುಭವಿಗಳಾಗಲು ರಾಜ್ಯ ಸರಕಾರ ಸರಳ ವ್ಯವಸ್ಥೆಯನ್ನು ಮಾಡಿದ್ದು, ಅರ್ಹರು ಬಳಸಿಕೊಳ್ಳುವ ಮೂಲಕ ಫಲಾನುಭವಿಗಳಾಗಬೇಕಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಸರಕಾರದಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದಿದ್ದಾರೆ ಅರುಣ್ ಕುಮಾರ್, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ. ಗೃಹ ಜ್ಯೋತಿ ಯೋಜನೆಯಡಿ ಸಾರ್ವಜನಿಕರಲ್ಲಿ ನಿರಂತರವಾಗಿ ಜಾಗೃತಿಯೊಂದಿಗೆ ಸರಳೀಕರಣಗೊಳಿಸಿದ ಪರಿಣಾಮ ಶೇ. 99.12ರಷ್ಟು ಸಾಧನೆ ಮಾಡಲಾಗಿದೆ. ಉಳಿದವರನ್ನು ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ, ಕೆ.ಎಂ.ಮುನಿಗೋಪಾಲ ರಾಜು, ಎಂಡಿ, ಸೆಸ್ಕ್.
ಫಲಾನುಭವಿಗಳಾಗಲು ಇರುವ ತೊಡಕು
- ಬಾಡಿಗೆ ಮನೆಯಲ್ಲಿ ವಾಸವಿರುವುದು.
- ಮಿತಿ ದಾಟಿದರೆ ಪೂರ್ತಿ ಹಣ ಪಾವತಿಸಬೇಕಿರುವುದು.
- ತಾತ್ಕಾಲಿಕ ವಾಸಕ್ಕೆ ಸಂಪರ್ಕ ಬೇಡ ಎಂಬ ಮನೋಭಾವ.
ಒಟ್ಟು ಗ್ರಾಹಕರ ಸಂಖ್ಯೆ: 9,52,069
ನೋಂದಣಿಯಾದ ಗ್ರಾಹಕರ ಸಂಖ್ಯೆ: 9,43,667
ಬಾಕಿ ಇರುವ ಗ್ರಾಹಕರ ಸಂಖ್ಯೆ: 8,402
ಗೃಹ ಜ್ಯೋತಿ ಬಾಕಿ ಇರುವ ಗ್ರಾಹಕರ ಸಂಖ್ಯೆ:
ಮೈಸೂರು: 4138, ನಂಜನಗೂಡು: 497, ಟಿ.ನರಸೀಪುರ: 216, ಹುಣಸೂರು: 833, ಎಚ್.ಡಿ.ಕೋಟೆ: 342, ಸರಗೂರು: 260, ಕೆ.ಆರ್. ನಗರ: 142, ಪಿರಿಯಾಪಟ್ಟಣ: 1576, ಸಾಲಿಗ್ರಾಮ: 398.